ತುಮಕೂರು: ಪಾಲಿಕೆಯ ಸಾಮಾನ್ಯ ನಿಧಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಆಕ್ರೋಶ
![ತುಮಕೂರು: ಪಾಲಿಕೆಯ ಸಾಮಾನ್ಯ ನಿಧಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಆಕ್ರೋಶ ತುಮಕೂರು: ಪಾಲಿಕೆಯ ಸಾಮಾನ್ಯ ನಿಧಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಆಕ್ರೋಶ](/images/placeholder.jpg)
ತುಮಕೂರು,ಫೆ.27: ನಗರಪಾಲಿಕೆಯ ಸಾಮಾನ್ಯ ನಿಧಿಯಲ್ಲಿ ನಗರದ ನಾಲ್ಕು ಕಡೆಗಳಲ್ಲಿ ತೆರೆದಿರುವ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಹಣ ನೀಡುತ್ತಿರುವುದರ ಬಗ್ಗೆ ಬಿಜೆಪಿ, ಜೆಡಿಎಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದು, ಪ್ರತ್ಯೇಕ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಒತ್ತಾಯಿಸಿದ ಘಟನೆ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ವ್ಯಕ್ತವಾಗಿ, ಕಾಂಗ್ರೆಸ್ ಮತ್ತು ಇತರೆ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.
ನಗರಪಾಲಿಕೆಯ ಮೇಯರ್ ಹೆಚ್.ರವಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯ ಆರಂಭದಲ್ಲಿ ಮೊದಲಿಗೆ ವಿಷಯ ಪ್ರಸ್ತಾಪಿಸಿದ ಪಾಲಿಕೆಯ ವಿರೋಧಪಕ್ಷದ ನಾಯಕ ಬಿಜೆಪಿ ಕೌನ್ಸಿಲರ್ ಡೆಲ್ಟಾ ರವಿ, ಪಾಲಿಕೆಯಲ್ಲಿ ಸಂಪನ್ಮೂಲವಿಲ್ಲದೆ ಒಂದು ವಾರ್ಡಿನಲ್ಲಿ ಸಾಮಾನ್ಯ ನಿಧಿಯಿಂದ 50 ಸಾವಿರದಿಂದ 1 ಲಕ್ಷ ರೂ ಅಭಿವೃದ್ದಿ ಕಾಮಗಾರಿ ಮಾಡಿಸಲು ಸಾಧ್ಯವಾಗುತ್ತಿಲ್ಲ. ಒಂದು ಕಾಮಗಾರಿಗೆ ಟೆಂಡರ್ ಕರೆದರೆ ಯಾವ ಗುತ್ತಿಗೆದಾರರು ಬಿಡ್ ಮಾಡುತ್ತಿಲ್ಲ. ಗುತ್ತಿಗೆದಾರರು ಈ ಹಿಂದೆ ನಡೆಸಿದ ಕಾಮಗಾರಿಗಳಿಗೆ 2-3 ವರ್ಷವಾದರೂ ಬಿಲ್ ನೀಡಿಲ್ಲ. ಆದರೆ ತುಮಕೂರು ನಗರದಲ್ಲಿ ಸ್ಥಾಪನೆಯಾಗಿರುವ ನಾಲ್ಕು ಇಂದಿರಾ ಕ್ಯಾಂಟೀನ್ಗಳಿಗೆ ಮಾಸಿಕ ತಲಾ 12 ಲಕ್ಷ ರೂ ನಂತೆ 48 ಲಕ್ಷ ರೂಗಳನ್ನು ಸಾಮಾನ್ಯ ನಿಧಿಯಲ್ಲಿ ಭರಿಸಲು ಪಾಲಿಕೆ ಒಪ್ಪಿದೆ. ಇದಕ್ಕೆ ಎಲ್ಲಿಂದ ಹಣ ಕ್ರೋಢೀಕರಿಸಲಾಗಿದೆ ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು.
ವಿರೋಧಪಕ್ಷದ ನಾಯಕರ ಒತ್ತಾಯಕ್ಕೆ ಬೆಂಬಲ ವ್ಯಕ್ತಪಡಿಸಿದ ಬಿಜೆಪಿಯ ಕರುಣಾರಾಧ್ಯ,ಇಂದ್ರಕುಮಾರ್, ಬಿ.ಎಸ್. ನಾಗೇಶ್,ಮಂಜುಳ ನಿರಂಜನ್,ಜೆಡಿಎಸ್ನ ಪ್ರೆಸ್ ರಾಜಣ್ಣ, ಮರಿಗಂಗಯ್ಯ ಅವರು ನಮಗೆ ಒಂದು ಲೆಂತ್ ಪೈಪ್ ಕೇಳಿದರೆ ಅನುದಾನವಿಲ್ಲ ಎಂದು ಹೇಳುತ್ತಾರೆ. ನಗರಪಾಲಿಕೆ ಉಗ್ರಾಣದಲ್ಲಿ ಸಾಮಗ್ರಿಗಳು ಮುಗಿದು 4 ತಿಂಗಳಾಗಿದೆ. ಇದುವರೆಗೂ ತಂದಿಲ್ಲ. ಆದರೆ ತಿಂಗಳಿಗೆ 48 ಲಕ್ಷ ರೂ ನಂತೆ ವರ್ಷಕ್ಕೆ 4.48 ಕೋಟಿ ರೂಗಳನ್ನು ಹೇಗೆ ಭರಿಸುತ್ತೀರಿ? ಇದರ ಆದಾಯದ ಮೂಲವೇನು ಎಂಬುದನ್ನು ಸರಕಾರಕ್ಕೆ ತಿಳಿಸಬೇಕು ಎಂದು ಪಟ್ಟು ಹಿಡಿದರು.
ಈ ವೇಳೆ ಬಿ.ಸಿ.ನಾಗೇಶ್ ಇಂದಿರಾ ಕ್ಯಾಂಟೀನ್ ಬೇಕು ಎಂದು ಯಾರು ಕೇಳಿದ್ದರು ಎಂದು ಪ್ರಶ್ನಿಸಿದರು. ಸದಸ್ಯರ ಈ ಪ್ರಶ್ನೆಗೆ ಆಕ್ರೋಶ ವ್ಯಕ್ತಪಡಿಸಿದ 30ನೇ ವಾರ್ಡಿನ ಸದಸ್ಯ ಎನ್.ಆರ್.ನಾಗರಾಜರಾವ್, ಇಂದಿರಾ ಕ್ಯಾಂಟೀನ್ ಎನ್ನಲು ನಿಮಗೇನು ಹಕ್ಕಿದೆ. ಹಸಿವು ಮುಕ್ತ ರಾಜ್ಯ ಮಾಡಬೇಕೆಂಬ ಉದ್ದೇಶದಿಂದ ಸರಕಾರ ಈ ಕೆಲಸ ಮಾಡಿದೆ. ಜನಸಾಮಾನ್ಯರಿಗೆ ಇದರಿಂದ ಅನುಕೂಲವಾಗಿದೆ. ಶಿರಾಗೇಟ್ ಇನ್ನಿತರ ಕಡೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಕ್ಯೂ ನಿಂತು ಆಹಾರ ಸೇವಿಸುತ್ತಿದ್ದಾರೆ. ಅದನ್ನು ಬೇಡ ಎನ್ನಲು ನಿವ್ಯಾರು ಎಂದು ಪ್ರಶ್ನಿಸಿದರು. ಇದಕ್ಕೆ ದ್ವನಿಗೂಡಿಸಿದ ಕಾಂಗ್ರೆಸ್ ಸದಸ್ಯರಾದ ಸುಧೀಶ್ವರ್, ಎನ್.ಮಹೇಶ್,ಎಂ.ಪಿ.ಮಹೇಶ್ ಅವರು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ವಿರುದ್ದ ಏರು ದ್ವನಿಯಲ್ಲಿಯೇ ಮಾತಿನ ಚಕಮುಖಿ ನಡೆಸಿದರು.
ಈ ವೇಳೆ ಎರಡು ಪಕ್ಷಗಳ ಸದಸ್ಯರನ್ನು ಸಮಾಧಾನ ಪಡಿಸಿದ ಸದಸ್ಯ ಟಿ.ಆರ್.ನಾಗರಾಜು,ಇಂದಿರಾ ಕ್ಯಾಂಟೀನ್ ತೆರೆದಿರುವುದರಿಂದ ಬಡವರಿಗೆ ಒಳ್ಳೆಯ ಆಹಾರ ಸಿಗುತ್ತಿದೆ. ಒಂದೊಮ್ಮೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಅದನ್ನು ಅಪ್ಪಾಜಿ ಕ್ಯಾಂಟೀನ್ ಅಂತಲೋ, ಬಿಜೆಪಿ ಅಧಿಕಾರಕ್ಕೆ ಬಂದರೆ ಅಣ್ಣ ಕ್ಯಾಂಟೀನ್ ಹೆಸರಿನಲ್ಲಿ ಮುಂದುವರೆಸುವ ಸಾಧ್ಯತೆ ಇದೆ. ಆದ್ದರಿಂದ ಸಂಪನ್ಮೂಲ ಕ್ರೋಡೀಕರಿಸಲು ಹೆಚ್ಚಿನ ಅದ್ಯತೆ ನೀಡಿ, ಇಲ್ಲವೆ ಹೆಚ್ಚಿನ ಅನುದಾನಕ್ಕೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಸಲಹೆ ನೀಡಿದರು.
ಸದಸ್ಯರು ಸಲಹೆಗೆ ಸ್ಪಂದಿಸಿ ಆಯುಕ್ತರು ಇಂದಿರಾ ಕ್ಯಾಂಟೀನ್ಗೆ ಪಾಲಿಕೆಯ ಎಸ್.ಎಫ್.ಸಿ. ನಿಧಿಯಲ್ಲಿ ಅನುದಾನ ಒದಗಿಸಲಾಗುವುದು. ಅಲ್ಲದೆ ಹೆಚ್ಚಿನ ಅನುದಾನಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸುವ ಮೂಲಕ ಚರ್ಚೆಗೆ ತೆರೆ ಎಳೆದರು.
ಸಭೆಯಲ್ಲಿ ಉಪಮೇಯರ್ ಫರ್ಜಾನಾ ಖಾನಂ, ಆಯುಕ್ತರಾದ ಮಂಜುನಾಥಸ್ವಾಮಿ ಉಪಸ್ಥಿತರಿದ್ದರು.