ಕರ್ನಾಟಕದ ವೇಗದ ಬೌಲರ್ ಅರವಿಂದ್ ವಿದಾಯ

ಹೊಸದಿಲ್ಲಿ, ಫೆ. 27:ಕರ್ನಾಟಕ ಕ್ರಿಕೆಟ್ ತಂಡ ವಿಜಯ್ ಹಝಾರೆ ಟ್ರೋಫಿ ಜಯಿಸಿದ ಬೆನ್ನಿಗೇ ಹಿರಿಯ ಕ್ರಿಕೆಟಿಗ ಶ್ರೀನಾಥ್ ಅರವಿಂದ್ ದೇಶೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದರು.
‘‘2008ರಲ್ಲಿ ಸೌರಾಷ್ಟ್ರದ ವಿರುದ್ಧ ರಣಜಿ ಟ್ರೋಫಿ ಪಂದ್ಯ ಆಡುವ ಮೂಲಕ ನನ್ನ ವೃತ್ತಿಜೀವನ ಆರಂಭಿಸಿದ್ದೆ. ಅದೇ ತಂಡದ ವಿರುದ್ಧ ವಿಜಯ್ ಹಝಾರೆ ಟ್ರೋಫಿ ಜಯಿಸುವ ಮೂಲಕ ಕ್ರಿಕೆಟ್ಗೆ ವಿದಾಯ ಹೇಳುತ್ತಿದ್ದೇನೆ. ನನಗೆ ಬೆಂಬಲಿಸಿರುವ ಕೆಎಸ್ಸಿಎ, ಆಯ್ಕೆಗಾರರು, ನನ್ನ ಕೋಚ್ಗಳು, ನನ್ನ ಹೆತ್ತವರು, ಹಾಗೂ ಸ್ನೇಹಿತರಿಗೆ ಕೃತಜ್ಞತೆ ಸಲ್ಲಿಸುವೆ’’ ಎಂದು ಎಡಗೈ ವೇಗದ ಬೌಲರ್ ಅರವಿಂದ್ ಹೇಳಿದ್ದಾರೆ.
ದಿಢೀರ್ ನಿವೃತ್ತಿ ಘೋಷಿಸಿರುವ ಅರವಿಂದ್ ಮಾ.4 ರಿಂದ ಆರಂಭ ವಾಗಲಿರುವ ದೇವಧರ್ ಟ್ರೋಫಿಯಲ್ಲಿ ಕರ್ನಾಟಕದ ತಂಡದಲ್ಲಿ ಆಡುವುದಿಲ್ಲ. ಯುವ ಆಟಗಾರರಿಗೆ ಅವಕಾಶ ನೀಡುವ ಉದ್ದೇಶದಿಂದ ನಿವೃತ್ತಿಯಾಗಿದ್ದಾಗಿ 33ರ ಹರೆಯದ ಅರವಿಂದ್ ಹೇಳಿದ್ದಾರೆ.
ಅರವಿಂದ್ ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ(ಕೆಪಿಎಲ್)ಬೆಳಗಾವಿ ಪ್ಯಾಂಥರ್ಸ್ ತಂಡದ ನಾಯಕನಾಗಿದ್ದರು. ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ಅರವಿಂದ್ 2011ರಿಂದ 2017ರ ತನಕ ಒಟ್ಟು 38 ಪಂದ್ಯಗಳನ್ನು ಆಡಿದ್ದು, 45 ವಿಕೆಟ್ಗಳನ್ನು ಕಬಳಿಸಿದ್ದಾರೆ. ಕಳೆದ ತಿಂಗಳು ನಡೆದ 2018ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಬಿಕರಿಯಾಗದೇ ಉಳಿದಿದ್ದರು.
ಅರವಿಂದ್ 56 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ 186 ವಿಕೆಟ್ಗಳನ್ನು ಉರುಳಿಸಿದ್ದು 41 ಲೀಸ್ಟ್ ಎ ಪಂದ್ಯಗಳಲ್ಲಿ 57 ವಿಕೆಟ್ ಸಂಪಾದಿಸಿದ್ದರು.
2014-15ರ ಋತುವಿನಲ್ಲಿ ಎಲ್ಲ ಮಾದರಿ ಕ್ರಿಕೆಟ್ನಲ್ಲಿ ಕರ್ನಾಟಕದ ಪರ 54 ವಿಕೆಟ್ಗಳನ್ನು ಕಬಳಿಸಿರುವುದು ಅರವಿಂದ್ ವೃತ್ತಿಜೀವನದ ಪ್ರಮುಖ ಸಾಧನೆಯಾಗಿದೆ. ಅರವಿಂದ್ಗೆ 2011ರಲ್ಲಿ ಚೊಚ್ಚಲ ಏಕದಿನ ಕ್ರಿಕೆಟ್ ಆಡುವ ಅವಕಾಶ ಲಭಿಸಿದರೂ ಮಂಡಿನೋವಿನಿಂದಾಗಿ ಇದು ಸಾಧ್ಯವಾಗಲಿಲ್ಲ.
ಧರ್ಮಶಾಲಾದಲ್ಲಿ 2015ರಲ್ಲಿ ನಡೆದ ದಕ್ಷಿಣ ಆಫ್ರಿಕ ವಿರುದ್ಧ ಟ್ವೆಂಟಿ-20 ಪಂದ್ಯದಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯ ಆಡುವ ಅವಕಾಶ ಲಭಿಸಿತ್ತು. ಆಗ ಅವರು ಭಾರತದ ಪರ ಏಕೈಕ ವಿಕೆಟ್ ಪಡೆದಿದ್ದರು.
ಕಳೆದ ಐದು ವರ್ಷಗಳಿಂದ ಕರ್ನಾಟಕ ತಂಡ ದೇಶೀಯ ಕ್ರಿಕೆಟ್ನಲ್ಲಿ ಯಶಸ್ವಿ ಪ್ರದರ್ಶನ ನೀಡಲು ಅರವಿಂದ್ ಗಮನಾರ್ಹ ಕೊಡುಗೆ ನೀಡಿದ್ದರು. ವಿನಯಕುಮಾರ್ ಹಾಗೂ ಅಭಿಮನ್ಯು ಮಿಥುನ್ರೊಂದಿಗೆ ವೇಗದ ಬೌಲಿಂಗ್ ವಿಭಾಗದಲ್ಲಿ ಸ್ಥಾನ ಪಡೆದಿದ್ದ ಅವರು ಕರ್ನಾಟಕ ತಂಡ 2013-14 ಹಾಗೂ 2014-15ರಲ್ಲಿ ರಣಜಿ ಟ್ರೋಫಿ, ಇರಾನಿ ಕಪ್ ಹಾಗೂ ವಿಜಯ್ ಹಝಾರೆ ಟ್ರೋಫಿ ಪ್ರಶಸ್ತಿ ಜಯಿಸಲು ನೆರವಾಗಿದ್ದರು.
2008ರಲ್ಲಿ ಸೌರಾಷ್ಟ್ರದ ವಿರುದ್ಧ ರಣಜಿ ಟ್ರೋಫಿ ಪಂದ್ಯ ಆಡುವ ಮೂಲಕ ನನ್ನ ವೃತ್ತಿಜೀವನ ಆರಂಭಿಸಿದ್ದೆ. ಅದೇ ತಂಡದ ವಿರುದ್ಧ ವಿಜಯ್ ಹಝಾರೆ ಟ್ರೋಫಿ ಜಯಿಸುವ ಮೂಲಕ ಕ್ರಿಕೆಟ್ಗೆ ವಿದಾಯ ಹೇಳುತ್ತಿದ್ದೇನೆ. ನನಗೆ ಬೆಂಬಲಿಸಿರುವ ಕೆಎಸ್ಸಿಎ, ಆಯ್ಕೆಗಾರರು, ನನ್ನ ಕೋಚ್ಗಳು, ನನ್ನ ಹೆತ್ತವರು, ಹಾಗೂ ಸ್ನೇಹಿತರಿಗೆ ಕೃತಜ್ಞತೆ ಸಲ್ಲಿಸುವೆ
►ಅರವಿಂದ್, ಎಡಗೈ ವೇಗದ ಬೌಲರ್







