ದನ ಕಳವು ಪ್ರಕರಣ : ಆರೋಪಿ ಸೆರೆ
ಮಂಗಳೂರು, ಫೆ. 28: ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ವರ್ಷ ನಡೆದ ದನ ಕಳವು ಆರೋಪದ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ರೌಡಿ ನಿಗ್ರಹ ದಳದ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿನ ಆರೋಪಿಯನ್ನು ಮಲ್ಲೂರು ಉದ್ದಬೆಟ್ಟುನಿವ ನಿಝಾಮುದ್ದೀನ್ ಯಾನೆ ನಿಝಾಮ್ (20) ಎಂದು ಗುರುತಿಸಲಾಗಿದೆ.
2017ರ ನ. 18 ರಂದು ಮಲ್ಲೂರು ಗ್ರಾಮದ ಪಲ್ಲಿಬೆಟ್ಟು ಬಳಿ ಕಳವು ಮಾಡಿದ್ದ ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕೈಕಾಲುಗಳನ್ನು ಕಟ್ಟಿಹಾಕಿಕೊಂಡು ಮಾರುತಿ ಓಮ್ನಿ ಕಾರಿನಲ್ಲಿ ಆರೋಪಿಗಳಾದ ಅಮ್ಮೆಮಾರ್ ಇಮ್ರಾನ್, ಮಲ್ಲೂರು ಉದ್ದಬೆಟ್ಟು ನಿವಾಸಿಗಳಾದ ನಿಝಾಮುದ್ದೀನ್, ಮುಸ್ತಫಾ ಹಾಗೂ ಮಲ್ಲೂರಿನ ಫೌಝಾನ ಎಂಬವರು ಗದ್ದೆಯಲ್ಲಿ ಕಟ್ಟಿ ಹಾಕಿದ್ದರು ಎಂದು ಆರೋಪಿಸಲಾಗಿತ್ತು.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದಾಗ ಆರೋಪಿಗಳು ಮಾರುತಿ ಓಮ್ನಿ ಕಾರೊಂದರಲ್ಲಿ ಪರಾರಿಯಾಗಿದ್ದರು. ಈ ಆರೋಪಿಗಳ ಪೈಕಿ ನಿಝಾಮುದ್ದೀನ್ನನ್ನು ರೌಡಿ ನಿಗ್ರಹ ದಳದ ಪೊಲೀಸರು ಮಲ್ಲೂರು ಬಸ್ಸ್ಟಾಂಡ್ ಬಳಿಯಿಂದ ದಸ್ತಗಿರಿ ಮಾಡಿದ್ದಾರೆ. ಈತನ ಮೇಲೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ 6 ದನ ಕಳ್ಳತನದ ಪ್ರಕರಣಗಳ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಮಂಗಳೂರು ದಕ್ಷಿಣ ಉಪ ವಿಭಾಗ ಎ.ಸಿ.ಪಿ ಯವರ ಆದೇಶದಂತೆ ರೌಡಿ ನಿಗ್ರಹ ದಳದ ಸಿಬ್ಬಂದಿಯವರು ಮತ್ತು ಗ್ರಾಮಾಂತರ ಠಾಣಾ ಸಿಬ್ಬಂದಿ ಭಾಗವಹಿಸಿದ್ದರು.







