ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ಗಿಮಿಕ್: ಬಿ.ರಾಮಕೃಷ್ಣ
![ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ಗಿಮಿಕ್: ಬಿ.ರಾಮಕೃಷ್ಣ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ಗಿಮಿಕ್: ಬಿ.ರಾಮಕೃಷ್ಣ](https://www.varthabharati.in/sites/default/files/images/articles/2018/02/28/B.RAMAKRISHNA.jpg)
ಮದ್ದೂರು, ಫೆ.28: ತಾಲೂಕಿನ ಕೆ.ಹೊನ್ನಲಗೆರೆ ವ್ಯಾಪ್ತಿಯ 16 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಗೆ ಶಾಸಕ ಡಿ.ಸಿ.ತಮ್ಮಣ್ಣ ಅವರು ಶಂಕುಸ್ಥಾಪನೆ ನೆರವೇರಿಸಲು ಮುಂದಾಗಿರುವುದು ಕೇವಲ ಚುನಾವಣೆ ಕಾಲದ ಗಿಮಿಕ್ ಆಗಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಬಿ.ರಾಮಕೃಷ್ಣ ಟೀಕಿಸಿದ್ದಾರೆ.
ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಬಾಣಂಜಿಪಂತ್ ಕೆರೆ ಸೇರಿದಂತೆ ಹಲವು ಕೆರೆಗಳಿಗೆ ನೀರು ತುಂಬಿಸುವ ಸಲುವಾಗಿ ಏತನೀರಾವರಿ ಯೋಜನೆಗಳನ್ನು ಜಾರಿಗೊಳಿಸಿದ್ದರು. ನಿರ್ವಹಣೆ ಲೋಪದಿಂದಾಗಿ ಕೆಲವು ಏತನೀರಾವರಿ ಯೋಜನೆಗಳು ಸ್ಥಗಿತಗೊಂಡವು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೆ.ಹೊನ್ನಲಗೆರೆ ವ್ಯಾಪ್ತಿಯ ಕೆರೆಗಳಿಗೆ ಶಿಂಷಾ ನದಿಯಿಂದ ನೀರು ತುಂಬಿಸುವ ಏತನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ನಾನು ಹಾಗೂ ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಅವರು ಸದನದಲ್ಲಿ ಅನುದಾನ ಬಿಡುಗಡೆಗಾಗಿ ಆಗ್ರಹಿಸಿ ಹೋರಾಟ ಮಾಡಿದ್ದೆವು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಈ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಆದರೆ, ಶಾಸಕರು ಇದು ತಮ್ಮ ಸಾಧನೆ ಎಂದು ಶಂಕುಸ್ಥಾಪನೆ ಮಾಡಲು ಮುಂದಾಗಿರುವುದು ಕೇವಲ ಚುನಾವಣಾ ರಾಜಕೀಯವಾಗಿದೆ. ಇದಕ್ಕೆ ಜನರು ಮರುಳಾಗಬಾರದು ಎಂದು ಮನವಿ ಅವರು ಮಾಡಿದ್ದಾರೆ.