ಮಂಡ್ಯ: ಮತಗಟ್ಟೆಗಳ ವರ್ಗೀಕರಣ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ
![ಮಂಡ್ಯ: ಮತಗಟ್ಟೆಗಳ ವರ್ಗೀಕರಣ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ ಮಂಡ್ಯ: ಮತಗಟ್ಟೆಗಳ ವರ್ಗೀಕರಣ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ](https://www.varthabharati.in/sites/default/files/images/articles/2018/02/28/28MDY-5.jpg)
ಮಂಡ್ಯ, ಫೆ.28: ಜಿಲ್ಲೆಯ ಎಲ್ಲಾ ಮತಗಟ್ಟೆಗಳ ವರ್ಗಿಕರಣ ವರದಿಯನ್ನು ವಿಧಾನಸಭಾ ಕ್ಷೇತ್ರವಾರು ಆಯ್ಕೆಯಾಗಿರುವ ಚುನಾವಣಾ ನೋಡಲ್ ಅಧಿಕಾರಿಗಳು ಎರಡು ದಿನಗಳೊಳಗೆ ಜಿಲ್ಲಾ ಚುನಾವಣಾ ಶಾಖೆಗೆ ಸಲ್ಲಿಸಬೇಕು ಎಂದು ಜಿಲ್ಲಾಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಸೂಚಿಸಿದ್ದಾರೆ.
ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚುನಾವಣಾ ನೋಡಲ್ ಅಧಿಕಾರಿಗಳು ಹಾಗೂ ತಹಶೀಲ್ದಾರ್ ಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 1,780 ಮತಗಟ್ಟೆಗಳಿದ್ದು, ದುರ್ಬಲ, ಅತೀಸೂಕ್ಷ್ಮ, ಸೂಕ್ಷ್ಮ ಹಾಗೂ ಸಾಮಾನ್ಯ ಮತಗಟ್ಟೆಗಳಾಗಿ ವರ್ಗಿಕರಣ ಮಾಡಬೇಕಿದೆ ಎಂದರು.
ವಿಧಾನಸಭಾ ಕ್ಷೇತ್ರವಾರು ಆಯ್ಕೆಯಾಗಿರುವ ಎಲ್ಲಾ ಚುನಾವಣಾ ನೋಡಲ್ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ತಾಲೂಕು ತಹಶೀಲ್ದಾರ್ ಗಳು, ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಮತಗಟ್ಟೆಗಳ ವರ್ಗಿಕರಣ ವರದಿಯನ್ನು ಶೀಘ್ರ ಸಲ್ಲಿಸಲು ಕ್ರಮವಹಿಸಬೇಕು ಎಂದು ಅವರು ಹೇಳಿದರು.
ಮತಗಟ್ಟೆಗಳ ವರ್ಗಿಕರಣ ಭದ್ರತಾ ಹಾಗೂ ನ್ಯಾಯ ಸಮ್ಮತಚುನಾವಣೆ ನಡೆಸಲು ಸಹಕಾರಿಯಾಗಲಿದೆ. ಮತಗಟ್ಟೆಗಳ ಬದಲಾವಣೆ ಬಯಸಿದಲ್ಲಿ, ಸೂಕ್ತ ಕಾರಣದೊಂದಿಗೆ ಲಿಖಿತ ರೂಪದಲ್ಲಿ ವರದಿ ನೀಡಿದಲ್ಲಿ ಜಿಲ್ಲಾ ಚುನಾವಣಾ ಶಾಖೆಯಿಂದ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.
ಮಸ್ಟರಿಂಗ್, ಡಿಮಸ್ಟರಿಂಗ್ ಹಾಗೂ ಮತ ಎಣಿಕೆ ಕಾರ್ಯಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡಿ, ತರಬೇತಿ ನೀಡಿಬೇಕಿದೆ. ಉಸ್ತುವಾರಿ ಘಟಕ ತಾಲೂಕು ಹಂತದಲ್ಲೂ ರಚನೆ ಮಾಡುವ ಮೂಲಕ ದಿನದ ಇಪ್ಪತ್ತು ನಾಲ್ಕು ಗಂಟೆ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.
ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಉಪ ಕಾರ್ಯದರ್ಶಿ ಕೃಷ್ಣರಾಜು, ಉಪ ವಿಭಾಗಾಧಿಕಾರಿಗಳಾದ ರಾಜೇಶ್, ಯಶೋಧಾ, ವಿಧಾನ ಚುನಾವಣಾ ನೋಡಲ್ ಅಧಿಕಾರಿಗಳು, ಇತರ ಅಧಿಕಾರಿಗಳು, ತಹಸೀಲ್ದಾರ್ ಗಳು ಸಭೆಯಲ್ಲಿ ಹಾಜರಿದ್ದರು.