ಇಂಗ್ಲಿಷ್ ಕೆಟ್ಟದ್ದು ಎನ್ನುವ ಬದಲು ಕನ್ನಡವನ್ನು ಸಮಾನವಾಗಿ ಬೆಳೆಸಬಾರದೇಕೆ: ಮೀರಾ ಶಿವಲಿಂಗಯ್ಯ ಪ್ರಶ್ನೆ
14ನೆ ಮಂಡ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಮಂಡ್ಯ, ಫೆ.28: ಮೊದಲು ಕನ್ನಡದಲ್ಲಿ ಉನ್ನತ ಶಿಕ್ಷಣ ತರುವ ವ್ಯವಸ್ಥೆ ಪರಿಪಕ್ವವಾದರೆ ಆಗ ಎಲ್ಲ ರೀತಿಯ ಅಧ್ಯಯನಗಳೂ, ಸಂಶೋಧನೆಗಳೂ ಕನ್ನಡದಲ್ಲೆ ಆಗುತ್ತವೆ ಎಂದು 14ನೆ ಮಂಡ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಪ್ರತಿಪಾದಿಸಿದ್ದಾರೆ.
ಬುಧವಾರ ನಗರದ ಕಲಾಮಂದಿರದ ಕೆ.ಎಸ್.ಪುಟ್ಟಣ್ಣಯ್ಯ ವೇದಿಕೆಯಲ್ಲಿ ನಡೆದ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜಾಗತೀಕರಣ ಎದುರಿಸಲು ನಮ್ಮ ನುಡಿಯನ್ನು ತಾಂತ್ರಿಕವಾಗಿ ಸಿದ್ದಗೊಳಿಸಬೇಕಿದೆ. ಕನ್ನಡದಲ್ಲಿ ಕಲಿಕೆಯ ವ್ಯವಸ್ಥೆ ಆಧುನೀಕರಣಗೊಂಡರೆ ಆಗ ಪೋಷಕರು ನಮ್ಮ ಕನ್ನಡದ ಕನಸಿಗೆ ಜೊತೆಯಾಗಬಲ್ಲರು ಎಂದರು.
ಇಂದಿನ ಜೀವನಕ್ಕೆ ಜನವನ್ನು ಸಿದ್ದಪಡಿಸಲು ಇಂಗೀಷ್ ಭಾಷೆಯ ಅಭ್ಯಾಸವೂ ಬೇಕು. ಇಂಗ್ಲಿಷ್ ಭಾಷೆ ಅಧ್ಯಯನವನ್ನು ನಾವು ತೆಗಳುವ ಬದಲು, ಇದು ಕೆಟ್ಟದ್ದು ಎನ್ನುವ ಬದಲು ನಾವೇಕೆ ಕನ್ನಡವನ್ನು ಸಮಾನವಾಗಿ ಮಕ್ಕಳಲ್ಲಿ ಬೆಳಸಬಾರದು? ಕನ್ನಡ ಪುಸ್ತಕಗಳ ಪ್ರೀತಿಯನ್ನೇಕೆ ಜನರಲ್ಲಿ ಬೆಳಸಬಾರದು? ಎಂದು ಅವರು ಪ್ರಶ್ನಿಸಿದರು.
ಈಗ ಪ್ರೌಡ ಶಾಲೆವರೆಗೆ ಕನ್ನಡ ಮಾಧ್ಯಮ ಇದೆಯಾದರೂ ಬದುಕನ್ನು ಕಟ್ಟಿಕೊಡುವ ವಿದ್ಯೆಗಳನ್ನು ರೂಪಿಸುವ ಹತ್ತನೇ ಕ್ಲಾಸಿನ ಆಚೆಗಿನ ಹಂತದಲ್ಲಿ ಕನ್ನಡವನ್ನು ನೆಲೆ ನಿಲ್ಲಿಸುವ ಕೆಲಸಕ್ಕೆ ಗಮನವನ್ನು ಕೊಟ್ಟಿಲ್ಲ. ಕನ್ನಡದಲ್ಲಿ ಇಂಜಿನಿಯರಿಂಗ್, ಮೆಡಿಕಲ್, ಮ್ಯಾನೇಜ್ಮೆಂಟ್ನಂತಹ ಯಾವ ವಿದ್ಯೆಗಳನ್ನೂ ರೂಪಿಸಿಲ್ಲ. ಹಾಗಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಲು ತಂದೆತಾಯಿಗಳು ಮುಂದಾಗಬೇಕು ಎಂದು ಅವರು ಹೇಳಿದರು.
ಮಂಡ್ಯದ ಕನ್ನಡ ನುಡಿಸೊಬಗು:
ಕನ್ನಡ ಭಾಷೆಯ ನಿಜವಾದ ಶ್ರೀಮಂತಿಕೆ ಇರುವುದು ನಮ್ಮ ಗ್ರಾಮೀಣ ಆಡು ಭಾಷೆಯಲ್ಲಿ. ಮಂಡ್ಯದ ಮಾತು ಒರಟು ಎನ್ನುತ್ತಿದ್ದ ಜನ ಮಂಡ್ಯ ತಾಲೂಕಿನ ಆಡುಮಾತು, ದೇಸಿಯ ನುಡಿಗಟ್ಟುಗಳು ಸಿನಿಮಾ ಮಾಧ್ಯಮದ ಮೂಲಕ ರಂಜನೀಯವಾಗಿ ಜನಮನವನ್ನು ತಲುಪಿದೆ ಎಂದರು. ಮಂಡ್ಯದ ಭಾಷೆ ಬರೆಯಲು ಸಿಗದು. ಹಿಡಿದರೆ ಮುಟುಕಿಯಲ್ಲಿ, ಬಿಟ್ಟರೆ ಅಂಗಳದ ತುಂಬ ಹರಡಿಕೊಳ್ಳುವುದು. ವ್ಯಾಕರಣ ಹುಟ್ಟುವ ಮೊದಲು ಜನರ ನಾಲಿಗೆ ಮೇಲೆ ನಲಿದಾಡಿದ ಭಾಷಾ ಸರಸ್ವತಿಯ ಬೆಳಕು ನಮ್ಮ ಮನಸ್ಸಿಗೆ ಮುದ ನೀಡುತ್ತಿದೆ. ಮೇಕಪ್ ಇಲ್ಲದ ನಮ್ಮ ಮಂಡ್ಯ ಭಾಷೆ ಬಲು ರಂಜನೀಯ ಎಂದು ಅವರು ವಿಶ್ಲೇಷಿಸಿದರು.
ಹಾಮು(ಹಾವು), ಕಿಮಿ(ಕಿವಿ), ಕಾಪಿ(ಕಾಫಿ), ಕಾರ್ಮೆಂಟ್(ಕಾನ್ವೆಂಟ್), ಮಟ್ಟೆ(ಮೊಟ್ಟೆ) ಇವೆಲ್ಲಾ ಪದಗಳು ಆಡು ಮಾತಿನಲ್ಲಷ್ಟೆ ಸಿಗುವಂತಹದ್ದು. ಸಾಹಿತ್ಯ ಪರಿಷತ್ತು, ಕನ್ನಡದ ಕಾವಲುಪಡೆ, ಕನ್ನಡ ಸೇನೆ, ಕನ್ನಡಪರ ಸಂಘಟನೆಗಳು ಈ ಭಾಷಾ ಸೊಗಡನ್ನು ಕಾಯ್ದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ರೈತರ ಆತ್ಮಹತ್ಯೆಗೆ ಆತಂಕ:
ಸಾಲದ ಸುಳಿಯಲ್ಲಿ ಸಿಲುಕಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ ಮೀರಾ ಶಿವಲಿಂಗಯ್ಯ, ಇದನ್ನು ಜಿಲ್ಲೆಯ ಮುಖಂಡರು, ಸಾಹಿತಿಗಳು, ವಿದ್ವಾಂಸರು, ಸಂಶೋಧಕರು ಎಲ್ಲರೂ ಗಂಭೀರವಾಗಿ ಚಿಂತಿಸಬೇಕಿದೆ ಎಂದು ತಾಕೀತು ಮಾಡಿದರು.
ಆಧುನಿಕ ಬೇಸಾಯ ಪದ್ದತಿ ಅಳವಡಿಕೆಯಾಗಯಬೇಕು. ಬೆಳೆದ ಬೆಳೆಗಳಿಗೆ ನ್ಯಾಯಯುತ, ವೈಜ್ಞಾನಿಕ ಬೆಲೆ ಕೊಡಬೇಕು. ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ನೀರಿನ ಶೇಖರಣೆ, ಸದ್ಬಳಕೆಯಾಗಬೇಕು. ಮೇಕೆದಾಟು ಅಣೆಕಟ್ಟು ಕಟ್ಟಿ ಸಮುದ್ರಕ್ಕೆ ಪೋಲಾಗುತ್ತಿರುವ ನೀರನ್ನು ಉಪಯೋಗಿಸಬೇಕು ಎಂದು ಅವರು ಸಲಹೆ ನೀಡಿದರು.
ಹೆಣ್ಣುಭ್ರೂಣ ಹತ್ಯೆ ತಡೆಯಬೇಕು: ಮಹಿಳೆ ವಿದ್ಯಾವಂತೆಯಾಗಿ, ಉದ್ಯೋಗಿಯಾಗಿ ಸಂಸಾರಕ್ಕೆ ಆರ್ಥಿಕ ಬೆಂಬಲ ನೀಡುತ್ತಿದ್ದಾಳೆ. ಆದರೂ ಬೇರಾವ ಜೀವಿಗಳಲ್ಲೂ ಇಲ್ಲದ ಹೆಣ್ಣುಭ್ರೂಣ ಹತ್ಯೆಯ ಶಾಪ ಭಾರತವನ್ನು ಕಾಡುತ್ತಿರುವಂತೆ ಜಿಲ್ಲೆಯನ್ನು, ತಾಲೂಕನ್ನು ಕಾಡುತ್ತಲೇ ಇದೆ. ಇದರ ಬಗ್ಗೆ ಸಾರ್ವಜನಿಕ ಅರಿವು, ಜಾಗೃತಿ ಅತಿ ಮುಖ್ಯವಾಗಿ ಬೇಕಾಗಿದೆ ಎಂದು ಅವರು ಒತ್ತಿ ಹೇಳಿದರು.
ಮಹಿಳೆ ಜಾಗೃತಳಾಗಬೇಕು. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ದೌರ್ಜನ್ಯಗಳನ್ನು ಸಹಿಸಿ ನಲುಗದೆ ಎದುರಿಸಿ ನಿಂತು ಹೋರಾಡಿ ಕುಟಂಬದಲ್ಲಿ ಸಮಾನ ಗೌರವಗಳನ್ನು ಪಡೆಯಬೇಕು. ಜತೆಗೆ ಭಾರತೀಯ ಸಂಸ್ಕೃತಿಯಲ್ಲಿನ ವಿನಯ, ಸ್ನೇಹಶೀಲತೆ, ಸಜ್ಜನಿಕೆ, ಸನ್ನಡತೆಯನ್ನು ರೂಢಿಸಿಕೊಂಡು ಮಕ್ಕಳನ್ನು ಸುಸಂಸ್ಕೃತರನ್ನಾಗಿ ಬೆಳಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಕಣ್ಮರೆಯಾಗುತ್ತಿದ್ದ ಪೌರಾಣಿಕ ನಾಟಕಗಳು ಇತ್ತೀಚಿಗೆ ಮಂಡ್ಯದಲ್ಲಿ ಹೆಚ್ಚು ಪ್ರದರ್ಶನಗೊಳ್ಳುತ್ತಿವೆ. ಮಹಿಳೆಯರು ಈ ಕ್ಷೇತ್ರದಲ್ಲಿ ಹೆಚ್ಚು ಭಾಗವಹಿಸುತ್ತಿರುವುದು ಸ್ತುತ್ಯಾರ್ಹ. ನಾಟಕಗಳ ಪ್ರದರ್ಶನಕ್ಕೆ ಮಂಡ್ಯದಲ್ಲಿ ಬಯಲು ರಂಗಮಂದಿರದ ನಿರ್ಮಾಣ ಶೀಘ್ರದಲ್ಲಿ ಆಗಬೇಕಿದೆ ಎಂದರು.
ಜೆಎಸ್ಎಸ್ ವಿದ್ಯಾಪೀಠದ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕ ನಿರಂಜಮೂರ್ತಿ ಸಮ್ಮೇಳನ ಉದ್ಘಾಟಿಸಿದರು. ಜಿಪಂ ಸದಸ್ಯ ಚಂದಗಾಲು ಶಿವಣ್ಣ ಸಮ್ಮೇಳನ ಸಂಬಂಧ ಮೆರವಣಿಗೆ ಉದ್ಘಾಟಿಸಿದರು. ನಿಕಟಪೂರ್ವ ಅಧ್ಯಕ್ಷ ಮಂಡ್ಯ ರಮೇಶ್, ಸ್ವಾಗತ ಸಮಿತಿ ಅಧ್ಯಕ್ಷ ರವಿಕುಮಾರು ಗಣಿಗ, ಕಸಾಪ ಜಿಲ್ಲಾಧ್ಯಕ್ಷ ಸಿ.ಕೆ.ರವಿಕುಮಾರ, ತಾಲೂಕು ಅಧ್ಯಕ್ಷ ಮಹೇಶ್ ಸುಂಡಹಳ್ಳಿ, ಚಿತ್ರನಟ ಕಿರಿಕ್ ಕೀರ್ತಿ, ಇತರ ಗಣ್ಯರು ಉಪಸ್ಥಿತರಿದ್ದರು.
ರೈತರ ಅತ್ಮಹತ್ಯೆ ಕಾರಣ ಮತ್ತು ಪರಿಹಾರ ಕುರಿತು ಪ್ರೊ.ಕೆ.ಸಿ.ಬಸವರಾಜು, ಮಂಡ್ಯ ತಾಲೂಕಿನ ಅಭಿವೃದ್ಧಿ ಮತ್ತು ಸವಾಲುಗಳು ಕುರಿತು ಪ್ರೊ.ಹುಲ್ಕೆರೆ ಮಹದೇವು, ಹೊಸ ತಲೆಮಾರಿನ ಸಾಹಿತ್ಯ ಒಲವು ನಿಲುವುಗಳು ಕುರಿತು ಡಾ.ಎ.ಆರ್.ಮದನಕುಮಾರ್ ವಿಚಾರ ಮಂಡಿಸಿದರು.







