5 ದಿನಗಳ ಕಾಲ ಕಾರ್ತಿ ಚಿದಂಬರಂ ಸಿಬಿಐ ಕಸ್ಟಡಿಗೆ
ಹೊಸದಿಲ್ಲಿ, ಮಾ.1: ಐಎನ್ಎಕ್ಸ್ ಮೀಡಿಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕಾರ್ತಿ ಚಿದಂಬರಮ್ನನ್ನು ದಿಲ್ಲಿ ನ್ಯಾಯಾಲಯವು ಗುರುವಾರದಂದು ಮಾರ್ಚ್ 6ರ ವರೆಗೆ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ. ಕಾರ್ತಿ ವಿದೇಶಕ್ಕೆ ತೆರಳಿದ ಸಂದರ್ಭದಲ್ಲಿ ಹಣ ಪಾವತಿಯಾದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ ಎಂದು ಸಿಬಿಐ ಆರೋಪಿಸಿರುವ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಧೀಶರಾದ ಸುನೀಲ್ ರಾಣಾ ಕಾರ್ತಿಯ ಕಸ್ಟಡಿಯನ್ನು ಸಿಬಿಐಗೆ ಒಪ್ಪಿಸಿದರು.
ಬುಧವಾರದಂದು ಚೆನ್ನೈಯ ವಿಮಾನ ನಿಲ್ದಾಣದಲ್ಲಿ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಪುತ್ರ ಕಾರ್ತಿಯನ್ನು ಬಂಧಿಸಿದ ಸಿಬಿಐ ಅಧಿಕಾರಿಗಳು ಆರೋಪಿಯನ್ನು 14 ದಿನಗಳ ಕಾಲ ತಮ್ಮ ಕಸ್ಟಡಿಗೆ ನೀಡಬೇಕೆಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದರು. ಕಾರ್ತಿಯನ್ನು ಭೇಟಿಯಾಗಲು ಅವರ ವಕೀಲರಿಗೆ ಬೆಳಿಗ್ಗೆ ಒಂದು ಗಂಟೆ ಹಾಗೂ ಸಂಜೆ ಒಂದು ಗಂಟೆಯ ಅವಧಿಯನ್ನು ನ್ಯಾಯಾಲಯ ನೀಡಿದೆ. ಆದರೆ ಅವರಿಗೆ ಮನೆಯ ಆಹಾರವನ್ನು ನೀಡಲು ಮಾಡಿದ ಮನವಿಯನ್ನು ತಳ್ಳಿಹಾಕಿದೆ. ಕಾರ್ತಿ ಧರಿಸಿರುವ ಚೈನು ಮತ್ತು ಉಂಗುರವನ್ನು ಧಾರ್ಮಿಕ ಕಾರಣಗಳಿಂದಾಗಿ ಉಳಿಸಿಕೊಳ್ಳಲು ನ್ಯಾಯಾಲಯ ಅನುಮತಿ ನೀಡಿದೆ. ಹಿರಿಯ ವಕೀಲೆಯಾಗಿರುವ ಕಾರ್ತಿಯ ತಾಯಿ ನಳಿನಿ ಚಿದಂಬರಂ ವಿಚಾರಣೆಯ ಸಮಯದಲ್ಲಿ ಆತನ ಬಳಿಯೇ ಕುಳಿತಿದ್ದರು. ತಂದೆ ಪಿ. ಚಿದಂಬರಂ, ನಾನಿದ್ದೇನೆ ಹೆದರಬೇಡ ಎಂದು ಮಗನಿಗೆ ಧೈರ್ಯ ಹೇಳುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. 2017ರ ಆಗಸ್ಟ್ 27ರಿಂದ ಯಾವುದೇ ಸಮನ್ಸ್ ನೀಡದಿರುವಾಗ ಹೀಗೆ ಬಂಧಿಸುವ ಅಗತ್ಯವಾದರೂ ಏನಿತ್ತು?, ಕಾರ್ತಿ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಸಿಬಿಐ ಆರೋಪಿಸಿದೆ. ಹಾಗಿದ್ದರೆ ಕಾರ್ತಿ ವಿರುದ್ಧ ಸಮನ್ಸ್ ಜಾರಿ ಮಾಡಬೇಕಿತ್ತು. ಆದರೆ ಸಿಬಿಐ ಹಾಗೆ ಮಾಡಲಿಲ್ಲ ಎಂದು ಕಾರ್ತಿ ಪರ ವಕೀಲರಾದ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಂಘ್ವಿ ನ್ಯಾಯಾಲಯದಲ್ಲಿ ವಾದಿಸಿದ್ದಾರೆ. ಐಎನ್ಎಕ್ಸ್ ಹಣ ವಂಚನೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಕಾರ್ತಿ ಚಿದಂಬರಂ ಅವರ ಚಾರ್ಟರ್ಡ್ ಅಕೌಂಟೆಂಟ್ ಎಸ್. ಭಾಸ್ಕರರಾಮನ್ ಅವರ ಜಾಮೀನು ಅರ್ಜಿಯನ್ನು ದಿಲ್ಲಿ ನ್ಯಾಯಾಲಯವು ಗುರುವಾರದಂದು ತಿರಸ್ಕರಿಸಿದೆ.