ಕಾರ್ತಿಯನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಿದ ಸಿಬಿಐ
ಹೊಸದಿಲ್ಲಿ,ಮಾ.1: ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಕಾರ್ತಿ ಚಿದಂಬರಂ ಅವರ ಒಂದು ದಿನದ ಕಸ್ಟಡಿ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಸಿಬಿಐ ಗುರುವಾರ ಅವರನ್ನು ದಿಲ್ಲಿಯ ನ್ಯಾಯಾಲಯದಲ್ಲಿ ಹಾಜರು ಪಡಿಸಿತು.
ಕಾರ್ತಿಯವರನ್ನು 14 ದಿನಗಳ ಅವಧಿಗೆ ತನ್ನ ವಶಕ್ಕೆ ಒಪ್ಪಿಸುವಂತೆ ಸಿಬಿಐ ವಿಶೇಷ ನ್ಯಾಯಾಧೀಶ ಸುನಿಲ ರಾಣಾ ಅವರನ್ನು ಕೋರಿತು. ಹಿರಿಯ ನ್ಯಾಯವಾದಿಯಾಗಿರುವ ಕಾರ್ತಿ ತಾಯಿ ನಳಿನಿ ಚಿದಂಬರಂ ಅವರು ನ್ಯಾಯಾಲಯದಲ್ಲಿ ಪುತ್ರನ ಜೊತೆಯಲ್ಲಿ ಕುಳಿತುಕೊಂಡಿದ್ದರು.
ಹಿರಿಯ ನ್ಯಾಯವಾದಿ ಅಭಿಷೇಕ ಮನು ಸಿಂಘ್ವಿ ಅವರು ಕಾರ್ತಿ ಪರ ವಾದಿಸಿದ ವಕೀಲರ ತಂಡದ ನೇತೃತ್ವ ವಹಿಸಿದ್ದರು.
ಕಾರ್ತಿ ಅವರನ್ನು 15 ದಿನಗಳ ಅವಧಿಗೆ ತನ್ನ ವಶಕ್ಕೆ ನೀಡುವಂತೆ ಸಿಬಿಐ ಬುಧವಾರ ಕೋರಿಕೊಂಡಿತ್ತಾದರೂ, ನ್ಯಾಯಾಧೀಶರು ಒಂದು ದಿನದ ಪೊಲೀಸ್ ಕಸ್ಟಡಿ ವಿಧಿಸಿದ್ದರು.
2007ರಲ್ಲಿ ಪಿ.ಚಿದಂಬರಂ ಅವರು ಕೇಂದ್ರ ವಿತ್ತಸಚಿವರಾಗಿದ್ದಾಗ 305 ಕೋ.ರೂ.ಗಳ ವಿದೇಶಿ ಹಣವನ್ನು ಸ್ವೀಕರಿಸಲು ಐಎನ್ಎಕ್ಸ್ ಮೀಡಿಯಾಕ್ಕೆ ಅನುಮತಿ ನೀಡಿದ ಸಂದರ್ಭ ಅಕ್ರಮಗಳು ನಡೆದಿದ್ದು, ಇದರಲ್ಲಿ ಕಾರ್ತಿ ಪಾತ್ರವಿದೆ ಎಂದು ಆರೋಪಿಸಿ ಕಳೆದ ವರ್ಷದ ಮೇ 15ರಂದು ಎಫ್ಐಆರ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಬ್ರಿಟನ್ನಿಂದ ವಾಪಸಾಗಿದ್ದ ಕಾರ್ತಿಯನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದರು.