ಕಂಚಿ ಶ್ರೀಗಳ ಸಮಾಧಿ ಸಂದರ್ಭ ಭುಗಿಲೆದ್ದ ಕೋಲಾಹಲ
ಕಾಂಚೀಪುರಂ,ಮಾ.1: ಬುಧವಾರ ನಿಧನರಾದ ಕಂಚಿ ಕಾಮಕೋಠಿ ಪೀಠದ ಶಂಕರಾಚಾರ್ಯ ಶ್ರೀಜಯೇಂದ್ರ ಸರಸ್ವತಿ ಅವರ ಅಂತಿಮ ಸಂಸ್ಕಾರ ಗುರುವಾರ ನೆರವೇರಿತು. ಈ ಸಂದರ್ಭ ಅವರನ್ನು ವೃಂದಾವನಸ್ಥರಾಗಿಸುವ ಪ್ರಕ್ರಿಯೆಯನ್ನು ವೀಕ್ಷಿಸಲು ಜನರಿಗೆ ಅಧಿಕಾರಿಗಳು ಅವಕಾಶ ನೀಡದ್ದರಿಂದ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು.
ಬಲವಂತದಿಂದ ಮುನ್ನುಗ್ಗಲು ಯತ್ನಿಸಿದ್ದ ಭಕ್ತರನ್ನು ಭದ್ರತಾ ಹೊಣೆಯನ್ನು ವಹಿಸಿಕೊಂಡಿದ್ದ ಸ್ವಯಂಸೇವಕರು ತಳ್ಳಾಡಿದ ಘಟನೆಗಳೂ ನಡೆದವು.
ಶ್ರೀಗಳ ಪಾರ್ಥಿವ ಶರೀರವನ್ನು ಸಮಾಧಿ ಮಾಡಲು ವೃಂದಾವನಕ್ಕೆ ಸಾಗಿಸಿದ ಬೆನ್ನಲ್ಲೇ ಮಠದ ಅಧಿಕಾರಿಗಳು ಅದರ ಎದುರು ಪರದೆಯನ್ನು ಇಳಿಬಿಟ್ಟು ಹೊರಗಡೆ ಕಾದು ನಿಂತಿದ್ದ ಭಕ್ತರನ್ನು ವೀಕ್ಷಣೆಯ ಅವಕಾಶದಿಂದ ವಂಚಿತರನ್ನಾಗಿಸಿದ್ದರು.
ಅದುವರೆಗೂ ಅಭಿಷೇಕದಂತಹ ಅಂತ್ಯಸಂಸ್ಕಾರ ವಿಧಿಗಳನ್ನು ನೇರವಾಗಿ ಪ್ರಸಾರಿಸುತ್ತಿದ್ದ ಎಲ್ಇಡಿ ಪರದೆಗಳು ವಿಧಿವಿಧಾನಗಳು ವೃಂದಾವನಕ್ಕೆ ಸ್ಥಳಾಂತರ ಗೊಂಡಾಗ ಸ್ತಬ್ಧಗೊಂಡಿದ್ದು ಭಕ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.
ವೃಂದಾವನದ ವಿವಿಧ ಪ್ರವೇಶದ್ವಾರಗಳ ಮೂಲಕ ಸಮಾಧಿ ಪ್ರಕ್ರಿಯೆಯನ್ನು ವೀಕ್ಷಿಸಲು ಭಕ್ತರು ಮುಂದಾದಾಗ ನೂಕುನುಗ್ಗಲಿನ ಸ್ಥಿತಿ ಸೃಷ್ಟಿಯಾಗಿತ್ತು. ಕಾರ್ಯಕ್ರಮದ ಅಂತಿಮ ಹಂತದಲ್ಲಿ ಮಠದ ಅಧಿಕಾರಿಗಳು ವೃಂದಾವನದ ಎಲ್ಲ ಮೂರೂ ಪ್ರವೇಶದ್ವಾರಗಳನ್ನು ಮುಚ್ಚಿದ್ದರು.