ಮಾ.8: ಬ್ಯಾರಿ ಅಕಾಡಮಿಯಿಂದ ವಿಶ್ವ ಮಹಿಳಾ ದಿನಾಚರಣೆ
ಮಂಗಳೂರು, ಮಾ.1: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ವತಿಯಿಂದ ಮುಸ್ಲಿಂ ಮಹಿಳಾ ಸಾಹಿತ್ಯ ಸಂಘದ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆಯು ಮಾ.8ರಂದು ಕಂಕನಾಡಿಯ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 10ಕ್ಕೆ ಅಕಾಡಮಿಯ ಅಧ್ಯಕ್ಷ ಕರಂಬಾರ್ ಮುಹಮ್ಮದ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. 10:15ರಿಂದ 11:45ರ ತನಕ ‘ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಕಾರಣ ಮತ್ತು ಪರಿಹಾರ’ ಎಂಬ ವಿಷಯ ಕುರಿತು ವಿಚಾರಗೋಷ್ಠಿ ನಡೆಯಲಿದ್ದು, ಮುಸ್ಲಿಂ ಮಹಿಳಾ ಸಾಹಿತ್ಯ ಸಂಘದ ಕಾರ್ಯದರ್ಶಿ ರುಕ್ಸಾನ ಯು. ಪ್ರಬಂಧ ಮಂಡಿಸಲಿದ್ದಾರೆ. ಸಾಹಿತ್ಯ ಸಂಘದ ಅಧ್ಯಕ್ಷೆ ಸಮೀನಾ ಅಫ್ಶಾನ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಪತ್ರಕರ್ತೆಯರಾದ ಡಾ. ಸೀತಾಲಕ್ಷ್ಮಿ ಕರ್ಕಿಕೋಡಿ, ಶಹನಾಝ್ ಎಂ. ಮತ್ತು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಲಹೆಗಾರ್ತಿ ಮುಮ್ತಾಝ್ ಪಕ್ಕಲಡ್ಕ ಭಾಗವಹಿಸಲಿದ್ದಾರೆ.
ಪೂ.11:45ರಿಂದ 12 ಗಂಟೆಯ ತನಕ ಸಮಾಜ ಸೇವಕಿ ಖೈರುನ್ನಿಸಾ ಸೈಯದ್, ಸಾಹಿತಿ ಮಫಾಝ ಶರ್ಫುದ್ದೀನ್, ರ್ಯಾಂಕ್ ವಿಜೇತೆ ಆಯಿಷತ್ ರಫೀಝಾ ಅವರನ್ನು ಸನ್ಮಾನಿಸಲಾಗುವುದು.
ಮಧ್ಯಾಹ್ನ 12ರಿಂದ 1ರವರೆಗೆ ಅಕಾಡಮಿ ಸದಸ್ಯೆ ಆಯಿಷಾ ಯು.ಕೆ. ಅವರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಲಿದ್ದು, ಶಮೀಮಾ ಕುತ್ತಾರ್ (ಬ್ಯಾರಿ), ಶಬೀನಾ ಬಾನು ವೈ.ಕೆ.(ಕನ್ನಡ), ಅಸ್ಮಾ ಬಜಪೆ (ಬ್ಯಾರಿ), ಝುಲೈಖಾ ಮುಮ್ತಾಝ್ (ಬ್ಯಾರಿ), ಫೆಲ್ಸಿ ಲೋಬೊ(ಕೊಂಕಣಿ), ಸಮೀನಾ ಅಫ್ಶಾನ್(ಉರ್ದು), ರೂಪಕಲಾ ಆಳ್ವ (ತುಳು) ಮತ್ತು ಶಿಫಾ ಕೆ.ಎಂ. (ಬ್ಯಾರಿ) ಕವನ ವಾಚನ ಮಾಡಲಿದ್ದಾರೆ ಎಂದು ಅಕಾಡಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.







