ಈ ಬಾರಿ ಜೆಡಿಎಸ್ನಿಂದ ಸರಕಾರ ರಚನೆ : ಹೆಚ್.ಡಿ. ದೇವೇಗೌಡ ವಿಶ್ವಾಸ
![ಈ ಬಾರಿ ಜೆಡಿಎಸ್ನಿಂದ ಸರಕಾರ ರಚನೆ : ಹೆಚ್.ಡಿ. ದೇವೇಗೌಡ ವಿಶ್ವಾಸ ಈ ಬಾರಿ ಜೆಡಿಎಸ್ನಿಂದ ಸರಕಾರ ರಚನೆ : ಹೆಚ್.ಡಿ. ದೇವೇಗೌಡ ವಿಶ್ವಾಸ](https://www.varthabharati.in/sites/default/files/images/articles/2018/03/2/H.D.jpg)
ಹಾಸನ,ಮಾ.2; ಮುಂದೆ ನಡೆಯಲಿರುವವ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಜೆಡಿಎಸ್ ಪಕ್ಷದಿಂದ ಸರಕಾರ ರಚನೆ ಮಾಡೆ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಹಾಗೂ ಹಾಲಿ ಸಂಸದ ಹೆಚ್.ಡಿ. ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈ ಬಾರಿ ಸರಕಾರ ರಚನೆ ಮಾಡಿಯೇ ತೀರುವೆ ಎಂಬುದನ್ನು ಯಾವ ಅಹಂನಿಂದ ಹೇಳುತ್ತಿಲ್ಲ. ಇದರಲ್ಲಿ ದೇವರ ಪರೀಕ್ಷೆ ಇದ್ದು, ಅದರಲ್ಲಿ ಪ್ರಾದೇಶಿಕ ಪಕ್ಷಕ್ಕೆ ಜನರು ಒಲವು ತೋರಲಿದ್ದಾರೆ. ನನ್ನ ಹೋರಾಟದ ಫಲದಿಂದ ಬಿಎಸ್ಪಿ, ಸಿಪಿಐಎಂ, ಎನ್ಸಿಪಿ ಜೊತೆ ಈಗಾಗಲೇ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ, ಮುಂದೆ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಹೋಗಲ್ಲ, ಮುಂದಿನ ಲೋಕಸಭೆ ಚುನಾವಣೆಯಲ್ಲೂ ಬಿಎಸ್ಪಿ ಜೊತೆ ಇರುತ್ತೇನೆ ಎಂದು ಕಡಾ ಖಂಡಿತವಾಗಿ ಹೇಳಿದರು.
ಪ್ರಾದೇಶಿಕ ಪಕ್ಷವು ಮೊದಲು ಗಟ್ಟಿಯಾಗಬೇಕು. ರಾಜ್ಯಸಭೆ ಚುನಾವಣೆಯಲ್ಲಿ ನಾವು ಅಭ್ಯರ್ಥಿ ಹಾಕುತ್ತೇವೆ, ಸೋಲು ಗೆಲುವು ಬೇರೆ, ಬೆಂಬಲ ಕೊಡಿ ಎಂದು ಯಾರ ಜೊತೆಯೂ ಮಾತನಾಡಲು ಹೋಗಿಲ್ಲ ಎಂದರು.
ಕಾವೇರಿಗಾಗಿ 1964 ರಿಂದ ಹೋರಾಟ ಮಾಡಿದ್ದೇನೆ, ಮುಂದೆಯೂ ಮಾಡುತ್ತೇನೆ. ರಾಜ್ಯ ಸರಕಾರ ಏನು ಮಾಡುತ್ತೋ ನನಗೆ ಗೊತ್ತಿಲ್ಲ, ನಾನು ಲೋಕಸಭೆಯಲ್ಲಿ ಹೋರಾಟ ಮಾಡಲು ನಿರ್ಧರಿಸಿದ್ದೇನೆ. ವಿಧಾನ ಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲೂ ನಮ್ಮ ಪಕ್ಷದಿಂದ ಅಭ್ಯರ್ಥಿಗಳು ಸ್ಪರ್ದೆ ಮಾಡಲಿದ್ದಾರೆ ಎಂದು ಹೇಳಿದರು.