ಹೊತ್ತಿನ ಊಟಕ್ಕೆ ಹೋರಾಡುವವರನ್ನು ಸಾಯಿಸುವುದು ಸಂಸ್ಕೃತಿಯೇ ?: ಪಿಣರಾಯಿ ವಿಜಯನ್
ಕೊಚ್ಚಿನ್, ಮಾ. 2: ಹಸಿವಿನಿಂದ ಒದ್ದಾಡುತ್ತಿದ್ದ ಬುಡಕಟ್ಟು ಜನಾಂಗದ ಯುವಕನನ್ನು ಕ್ರೂರ ಹಾಗೂ ಅಮಾನವೀಯವಾಗಿ ಸಾಯಿಸಿದ ಘಟನೆ ಬಗ್ಗೆ ಕೇರಳ ಸಮಾಜ ಚರ್ಚಿಸಬೇಕು. ಲೇಖಕರು ಮಾನವೀಯತೆಯ ಪ್ರೀತಿ ಮತ್ತು ಅಕ್ಕರೆಯನ್ನು ಬೆಳೆಸಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಲಹೆ ಮಾಡಿದರು.
"ಹೊತ್ತಿನ ಊಟಕ್ಕಾಗಿ ಹೋರಾಟ ನಡೆಸುವ ವ್ಯಕ್ತಿಯನ್ನು ಕೊಲ್ಲುವ ಸಮಾಜವನ್ನು ಸಾಂಸ್ಕೃತಿಕ ಸಾಕ್ಷರ ಸಮಾಜ ಎಂದು ಕರೆಯಬಹುದೇ? ಎಂಬ ಪ್ರಶ್ನೆಯನ್ನು ಎಲ್ಲ ಕೇರಳಿಗರು ತಮ್ಮ ಮನಸ್ಸಿನಲ್ಲಿ ಕೇಳಿಕೊಳ್ಳಬೇಕು ಮತ್ತು ಈ ಬಗ್ಗೆ ಕಲಾಪ ನಡೆಸಬೇಕು. ಇಂಥ ಪ್ರಶ್ನೆಗಳು ಮನಸ್ಸಿನ ಅಂಧಕಾರವನ್ನು, ಕಳೆದು ಜ್ಞಾನದ ಬೆಳಕನ್ನು ತರಲು ಸಾಧ್ಯ ಎಂದು ಅವರು ಪ್ರತಿಪಾದಿಸಿದರು.
ಇಲ್ಲಿನ ಮೆರೈನ್ ಡ್ರೈವ್ನಲ್ಲಿ ಸಾಹಿತ್ಯ ಪ್ರವರ್ತಕ ಸಹಕಾರ ಸಂಘ ಏರ್ಪಡಿಸಿದ್ದ ಕೀರ್ತಿ ಅಂತಾರಾಷ್ಟ್ರೀಯ ಪುಸ್ತಕ ಮೇಳ ಉದ್ಘಾಟಿಸಿ ಮಾತನಾಡಿದ ಅವರು, "ದೇಶದಲ್ಲಿ ಸಮಾಜವನ್ನು ಹಿಂದಕ್ಕೆ ಒಯ್ಯುವ ಪ್ರಯತ್ನಗಳು ನಡೆಯುತ್ತಿವೆ" ಎಂದು ವಿಷಾದಿಸಿದರು.
"ದೇಶವನ್ನು ಅಂಧಕಾರಕ್ಕೆ ತಳ್ಳುವ ಪ್ರಯತ್ನಗಳನ್ನು ಇಂಥ ಪುಸ್ತಕ ಮೇಳಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವಿರೋಧಿಸಬೇಕು. ಮಾನವತೆ ಬಗೆಗಿನ ಪ್ರೀತಿ ಮತ್ತು ಅನುಕಂಪವನ್ನು ಬೆಳೆಸಬೇಕು. ಸಮಾಜದ ಬಗ್ಗೆ ನಾವು ಯೋಚಿಸಬೇಕು. ಸಮಾಜದ ಬಗೆಗಿನ ಕಳಕಳಿಯನ್ನು ಕಳೆದುಕೊಂಡರೆ, ಜಗತ್ತು ನಮ್ಮನ್ನು ಸಾಂಸ್ಕೃತಿಕವಾಗಿ ಸಾಕ್ಷರ ಸಮಾಜ ಎಂದು ಪರಿಗಣಿಸದು" ಎಂದು ಹೇಳಿದರು.