ಮೈಸೂರು: ದಲಿತ ಯುವಕನನ್ನು ಪ್ರೀತಿಸಿದ ಪುತ್ರಿಗೆ ವಿಷ ಕುಡಿಸಿ ಕೊಂದ ಹೆತ್ತವರು
ಮೈಸೂರು, ಮಾ. 2: ಮರ್ಯಾದಾ ಹತ್ಯೆ ಘಟನೆಯೊಂದರಲ್ಲಿ, ದಲಿತ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದ ಮಗಳಿಗೆ ಆಕೆಯ ಹೆತ್ತವರೇ ಬಲವಂತವಾಗಿ ವಿಷ ಕುಡಿಸಿ ಸಾಯಿಸಿದ ಆಘಾತಕಾರಿ ಘಟನೆ ಮೈಸೂರು ಸಮೀಪದ ಗೊಲ್ಲನಬೀಡು ಗ್ರಾಮದಿಂದ ವರದಿಯಾಗಿದೆ.
ಸುಷ್ಮಾ (20) ಸಾವಿಗೀಡಾಗಿ ಒಂದು ವಾರದ ನಂತರ ಪೊಲೀಸರು ಸ್ವಯಂಪ್ರೇರಣೆಯಿಂದ ಪ್ರಕರಣದ ತನಿಖೆ ಕೈಗೆತ್ತಿಕೊಂಡಾಗ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು.
ಸುಷ್ಮಾಳ ತಂದೆ ಕುಮಾರ್ ಗೌಡನನ್ನು ಪೊಲೀಸರು ವಿಚಾರಣೆಗಾಗಿ ವಶ ಪಡಿಸಿಕೊಂಡಿದ್ದರೆ, ತಾಯಿ ಮತ್ತು ಮಾವ ನಾಪತ್ತೆಯಾಗಿದ್ದಾರೆ. ಸುಷ್ಮಾ ನೆರೆಯ ಆಲನಹಳ್ಳಿ ಗ್ರಾಮದಲ್ಲಿ ವೃತ್ತಿಯಲ್ಲಿ ಪೈಂಟರ್ ಆಗಿದ್ದ ದಲಿತ ಯುವಕನೊಂದಿಗೆ ಪ್ರೇಮ ಹೊಂದಿದ್ದರೆನ್ನಲಾಗಿದೆ. ಕುಮಾರ್ ಗೌಡ ಹಾಗೂ ಜಯಂತಿ ದಂಪತಿಯ ಮೂವರು ಪುತ್ರಿಯರಲ್ಲಿ ಹಿರಿಯವಳಾಗಿದ್ದ ಆಕೆ ಕಾಲೇಜು ಶಿಕ್ಷಣವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿದ್ದರು. ಆಕೆಯ ಪ್ರೇಮದ ಬಗ್ಗೆ ಅರಿತಿ ಗೌಡ ಕಳೆದ ಡಿಸೆಂಬರ್ ತಿಂಗಳಲ್ಲಿ ಕೆಲ ಪಂಚಾಯತ್ ಸದಸ್ಯರ ಜತೆ ಸೇರಿ ಯುವಕನ ಸ್ನೇಹ ಬಿಟ್ಟು ಬಿಡುವಂತೆ ಹೇಳಿದ್ದರೂ ಸುಷ್ಮಾ ಒಪ್ಪದೇ ಇದ್ದಾಗ ಅವಳನ್ನು ಹುಲಿಕೆರೆಯಲ್ಲಿರುವ ಸಂಬಂಧಿಕರ ಮನೆಗೆ ಕಳುಹಿಸಲಾಗಿತ್ತು. ನಂತರ ಆಕೆಯನ್ನು ಕನಿಷ್ಠ ಮೂರು ಬಾರಿ ಮನೆಗೆ ಕರೆಸಿ ದಲಿತ ಯುವಕನ ಸ್ನೇಹ ಬಿಟ್ಟು ಬಿಡುವಂತೆ ಹೇಳಲಾಗಿತ್ತು. ನಾಲ್ಕನೇ ಬಾರಿ ಫೆಬ್ರವರಿ 20ರಂದು ಕರೆದಾಗ ಆಕೆಯ ತಾಯಿ ಆಕೆಗೆ ವಿಷ ಮಿಶ್ರಿತ ಕಿತ್ತಳೆ ಜ್ಯೂಸ್ ನೀಡಿದ್ದಳು. ಸ್ವಲ್ಪ ಕುಡಿದಾಗಲೇ ಇದರ ರುಚಿ ಸರಿಯಾಗಿಲ್ಲ ಎಂದು ಸುಷ್ಮಾ ಅನ್ನುತ್ತಿದ್ದಂತೆಯೇ ಜಯಂತಿ ಮತ್ತಾಕೆಯ ಸಹೋದರ ಕೆಂಪಣ್ಣ ಆಕೆಯ ಮೂಗು ಮುಚ್ಚಿ ಬಲವಂತವಾಗಿ ಜ್ಯೂಸ್ ಕುಡಿಸಿದ್ದರು.,ಬೆಳಗ್ಗೆ 10.30ಕ್ಕೆ ಜ್ಯೂಸ್ ನೀಡಲಾಗಿದ್ದರೆ ಸಂಜೆ 4 ಗಂಟೆಯ ತನಕ ಆಕೆ ಹೊರಳಾಡಿ ಪ್ರಾಣ ಬಿಟ್ಟಿದ್ದಳು. ಅದೇ ಸಂಜೆ 5 ಗಂಟೆಗೆ ಅವಸವಸರವಾಗಿ ಆಕೆಯ ಅಂತ್ಯಕ್ರಿಯೆ ನಡೆಸಲಾಗಿತ್ತು.