ಆರ್ಟಿಇ ಅರ್ಜಿ ಸಲ್ಲಿಕೆ: ಸರ್ವರ್ ಲೋಪದೋಷ ಸರಿಪಡಿಸಲು ಪೋಷಕರ ಆಗ್ರಹ
ಬೆಂಗಳೂರು, ಮಾ.2: ಕಡ್ಡಾಯ ಶಿಕ್ಷಣ ಕಾಯ್ದೆ(ಆರ್ಟಿಇ)ಅಡಿ ವಿವಿಧ ಖಾಸಗಿ ಶಾಲೆಗಳಲ್ಲಿ ಬಡ ಮಕ್ಕಳಿಗಾಗಿ ಉಚಿತ ಪ್ರವೇಶ ಪಡೆಯಲು ಅರ್ಜಿ ಸಲ್ಲಿಸುವ ಸಲುವಾಗಿ ಸರಕಾರ ನೀಡಿರುವ ಜಾಲತಾಣ ಹಾಗೂ ಸರ್ವರ್ಗಳಲ್ಲಿನ ಲೋಪದೋಷಗಳನ್ನು ಕೂಡಲೇ ಸರಿಪಡಿಸಬೇಕು ಎಂದು ಆರ್ಟಿಇ ವಿದ್ಯಾರ್ಥಿ ವುತ್ತು ಪೋಷಕರ ಸಂಘ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಎನ್.ಯೋಗಾನಂದ, ಸರಕಾರ ಅರ್ಜಿ ಸಲ್ಲಿಸಲು ದಿನಾಂಕ ನಿಗದಿ ಮಾಡಿ 10 ದಿನಗಳು ಕಳೆಯುತ್ತಿದ್ದರೂ, ಇಂದಿಗೂ ಅನೇಕ ಕಡೆಗಳಲ್ಲಿ ಸರ್ವರ್ ದೋಷದಿಂದ ಕೂಡಿದೆ. ಅರ್ಜಿ ಸಲ್ಲಿಸಲು ಅನೇಕರು ಇಂದಿಗೂ ದಿನನಿತ್ಯ ಸೈಬರ್ ಸೆಂಟರ್ಗಳ ಎದುರು ಸಾಲಿಲ್ಲಿ ನಿಲ್ಲಬೇಕಾದ ಸ್ಥಿತಿಯಿದೆ ಎಂದರು.
ಸರಕಾರ ಸಿದ್ಧಪಡಿಸಿರುವ ವೆಬ್ಸೈಟ್ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದ್ದು, ದಿನಕ್ಕೊಂದು ಸಮಸ್ಯೆಯನ್ನು ತೋರಿಸುತ್ತಿದೆ. ಇದರಿಂದಾಗಿ ಗ್ರಾಮಾಂತರ ಪ್ರದೇಶದಿಂದ ಕೂಲಿ ಮಾಡುವ ಜನರು ದಿನನಿತ್ಯ ನಗರಕ್ಕೆ ಅಲೆಯುವಂತಾಗಿದೆ. ಅಲ್ಲದೆ, ಒಂದೇ ದಿನದಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ದಿನಕ್ಕೊಂದು ಅರ್ಜಿ ಸಲ್ಲಿಕೆಯಾದರೆ ಹೆಚ್ಚು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಹಿಂದುಳಿದವರ ಮತ್ತು ಬಡಕೂಲಿ ಕಾರ್ಮಿಕರ ಮಕ್ಕಳ ಅನುಕೂಲಕ್ಕಾಗಿ ಬೆಂಗಳೂರು ನಗರದಾದ್ಯಂತ 35 ಅರ್ಜಿ ಸಲ್ಲಿಕಾ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಅವು ಬೆಳಗ್ಗೆ 10 ರಿಂದ ಸಂಜೆ 4.30 ರವರೆಗೂ ಕಾರ್ಯನಿರ್ವಹಿಸಲಿವೆ. ಅರ್ಹ ವಿದ್ಯಾರ್ಥಿಗಳ ಪೋಷಕರು ಅಗತ್ಯವಿರುವ ಮಗುವಿನ ಆಧಾರ್ ಕಾರ್ಡ್, ತಂದೆ, ತಾಯಿ ಆಧಾರ್ ಕಾರ್ಡ್, ಪೋಷಕರ ಜಾತಿ ಮತ್ತು ಆದಾಯ ಪ್ರಮಾಣ ಪತ್ರದೊಂದಿಗೆ ಆನ್ ಲೈನ್ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ ಅಥವಾ ಯಾವುದೇ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಅವರು ತಿಳಿಸಿದರು.
ರಾಜ್ಯ ಮಟ್ಟದ ಸಹಾಯವಾಣಿಯನ್ನು ಸ್ಥಾಪಿಸಲಾಗಿದ್ದು, ಪೋಷಕರು ಈ 7022422495 ಸಂಖ್ಯೆಯನ್ನು ಸಂಪರ್ಕಿಸಬಹುದು. ಈ ಸಹಾಯವಾಣಿ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಕಾರ್ಯನಿರ್ವಹಿಸುತ್ತವೆ ಎಂದರು.