ಕೌಶಲ್ಯ ಭಾಗ್ಯ ಯೋಜನೆಯಡಿ 3950 ಅಭ್ಯರ್ಥಿಗಳಿಗೆ ತರಬೇತಿ: ಡಾ.ಲೋಕೇಶ್
![ಕೌಶಲ್ಯ ಭಾಗ್ಯ ಯೋಜನೆಯಡಿ 3950 ಅಭ್ಯರ್ಥಿಗಳಿಗೆ ತರಬೇತಿ: ಡಾ.ಲೋಕೇಶ್ ಕೌಶಲ್ಯ ಭಾಗ್ಯ ಯೋಜನೆಯಡಿ 3950 ಅಭ್ಯರ್ಥಿಗಳಿಗೆ ತರಬೇತಿ: ಡಾ.ಲೋಕೇಶ್](https://www.varthabharati.in/sites/default/files/images/articles/2018/03/2/02.jpg)
ಶಿವಮೊಗ್ಗ,ಮಾ.2: ಕೌಶಲ್ಯ ಭಾಗ್ಯ ಯೋಜನೆಯಡಿ ಆಯ್ಕೆಯಾಗಿರುವ ಜಿಲ್ಲೆಯ 3950 ಅಭ್ಯರ್ಥಿಗಳಿಗೆ ಮಾರ್ಚ್ 8ರಿಂದ 10ರವರೆಗೆ ಮೂರು ದಿನಗಳ ಕಾಲ ತರಬೇತಿ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ತಿಳಿಸಿದ್ದಾರೆ.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೌಶಲ್ಯ ತರಬೇತಿ ನೀಡುವ ಕುರಿತಾಗಿ ಕರೆಯಲಾಗಿದ್ದ ವಿವಿಧ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಸೂಚನೆಗಳನ್ನು ನೀಡಿದರು. ಫೆಬ್ರವರಿ 8ರಿಂದ 10ರವರೆಗೆ ಜಿಲ್ಲೆಯ ಎಲ್ಲಾ ಐಟಿಐಗಳಲ್ಲಿ ಹಾಗೂ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೌಶಲ್ಯ ತರಬೇತಿ ಕಾರ್ಯಕ್ರಮ ನಡೆಯಲಿದೆ. ಈ ತರಬೇತಿ ಕಾರ್ಯಕ್ರಮದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್, ಸಾಫ್ಟ್ ಸ್ಕಿಲ್ ತರಬೇತಿ, ಓರಿಯೆಂಟೇಶನ್ ನೀಡಲಾಗುವುದು. ಕಾರ್ಯಕ್ರಮದ ಅನುಷ್ಟಾನಕ್ಕಾಗಿ ಮೂರು ಸಂಸ್ಥೆಗಳನ್ನು ಸರ್ಕಾರ ಗುರುತಿಸಿದ್ದು, ಅವರೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಕೌಶಲ್ಯ ಭಾಗ್ಯ ಯೋಜನೆಯಡಿ ಅಭ್ಯರ್ಥಿಗಳ ಶೈಕ್ಷಣಿಕ ಹಿನ್ನೆಲೆ ಇತ್ಯಾದಿಗಳನ್ನು ಗಮನಿಸಿ ಸೂಕ್ತ ಉದ್ಯೋಗ ಕೌಶಲ್ಯ ನೀಡಿ ಅವರನ್ನು ಉದ್ಯೋಗಾರ್ಹಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೆ ಸುಮಾರು 18ಸಾವಿರ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಕೌಶಲ್ಯ ತರಬೇತಿಗಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಮಾರ್ಚ್ 17ರಂದು ಚಿತ್ರದುರ್ಗದಲ್ಲಿ ವಿಭಾಗ ಮಟ್ಟದ ಉದ್ಯೋಗ ಮೇಳ ನಡೆಯುತ್ತಿದ್ದು, ಈ ಮೇಳದಲ್ಲಿ ಉದ್ಯೋಗ ಪಡೆದುಕೊಳ್ಳುವ ನಿಟ್ಟಿನಲ್ಲಿ ಅಭ್ಯರ್ಥಿಗಳನ್ನು ಅವರಿಗೆ ಸೂಕ್ತವಾದ ಕ್ಷೇತ್ರದಲ್ಲಿ ವೃತ್ತಿ ಕೌಶಲ್ಯ ನೀಡಬೇಕಾಗಿದೆ ಎಂದು ಅವರು ಹೇಳಿದರು. ಕಾರ್ಯಾಗಾರವನ್ನು ಬ್ಯಾಚ್ಗಳಲ್ಲಿ ನಿರ್ವಹಿಸಬೇಕು. ಕೊಠಡಿಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ, ಕುಡಿಯುವ ನೀರು, ಕಾಲೇಜಿನಲ್ಲಿ ಶೌಚಾಲಯವನ್ನು ಸುಸ್ಥಿತಿಯಲ್ಲಿಡಬೇಕು ಎಂದು ಸೂಚನೆ ನೀಡಿದರು.
ಆಶಾದೀಪ ಕಾರ್ಯಕ್ರಮ: ಕೌಶಲ್ಯ ಭಾಗ್ಯ ಯೋಜನೆಯಡಿ ತರಬೇತಿ ಪಡೆದು ಉದ್ಯೋಗ ಪಡೆಯುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳ ಇಎಸ್ಐ ಮತ್ತು ಪಿಎಫ್ ಮೊತ್ತವನ್ನು ಎರಡು ವರ್ಷಗಳ ಕಾಲ ಸರ್ಕಾರ ಭರಿಸಲಿದೆ. ಕೌಶಲ್ಯ ಭಾಗ್ಯ ಯೋಜನೆಯಡಿ ತರಬೇತಿ ಪಡೆದ ಅಭ್ಯರ್ಥಿಗಳ ಉದ್ಯೋಗ ಸಾಧ್ಯತೆಯನ್ನು ಹೆಚ್ಚಿಸಲು ಹಾಗೂ ಕಂಪೆನಿಗಳಿಗೆ ಈ ನಿಟ್ಟಿನಲ್ಲಿ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು
ಜಿಲ್ಲಾ ಕಾರ್ಮಿಕ ಅಧಿಕಾರಿ ಬಾಲಕೃಷ್ಣ ಅವರು ತಿಳಿಸಿದರು.
ಜಿಲ್ಲಾ ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಅಧಿಕಾರಿ ಖಲಂದರ್ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು, ವಿವಿಧ ಕಾಲೇಜುಗಳ ಪ್ರಾಂಶುಪಾಲರು ಸಭೆಯಲ್ಲಿ ಉಪಸ್ಥಿತರಿದ್ದರು.