ತ್ರಿಪುರಾದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಬಿಜೆಪಿ
ಹೊಸದಿಲ್ಲಿ, ಮಾ.3: ತ್ರಿಪುರಾದಲ್ಲಿ ಕಳೆದ 25 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಎಡರಂಗಕ್ಕೆ ಮೊದಲ ಬಾರಿ ಹಿನ್ನಡೆಯಾಗಿದ್ದು, ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೇರುವುದು ಬಹುತೇಕ ಖಚಿತವಾಗಿದೆ.
ತ್ರಿಪುರಾದಲ್ಲಿ ಎಡರಂಗ ಸರಕಾರದ ಆಡಳಿತ ಅಂತ್ಯಗೊಂಡಿದೆ. ದೇಶದಲ್ಲೇ ಅತ್ಯಂತ ಬಡ ಸಿಎಂ ಎಂಬ ಖ್ಯಾತಿಯ ಮುಖ್ಯ ಮಂತ್ರಿ ಮಾಣಿಕ್ ಸರ್ಕಾರ್ ಅವರು ಮುಖ್ಯ ಮಂತ್ರಿ ಹುದ್ದೆಯನ್ನು ಕಳೆದುಕೊಳ್ಳಲಿದ್ದಾರೆ.
65 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಬಿಜೆಪಿ ಮತ್ತು ಸಿಪಿಎಂ ನಡುವೆ ತ್ರಿಪುರಾದಲ್ಲಿ ನೇರ ಹಣಾಹಣಿ ನಡೆದು ಬಿಜೆಪಿ ಮೇಲುಗೈ ಸಾಧಿಸಿದೆ. ಚುನಾವಣೆ ನಡೆದಿರುವ ಒಟ್ಟು 59 ಕ್ಷೇತ್ರಗಳ ಪೈಕಿ 43ರಲ್ಲಿ ಬಿಜೆಪಿ ಮೈತ್ರಿಕೂಟ ಗೆಲುವು ದಾಖಲಿಸುವಲ್ಲಿ ಹೆಜ್ಜೆ ಇರಿಸಿದೆ. ಎಡರಂಗ 15ರಲ್ಲಿ ಮತ್ತು ಇತರರು 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಇಲ್ಲಿ ಸರಕಾರ ರಚನೆಗೆ 31 ಸ್ಥಾನಗಳ ಆವಶ್ಯಕತೆ ಇದೆ. ಬಿಜೆಪಿಗೆ ಬಹುಮತ ಗಳಿಸುವುದು ಖಚಿತವಾಗಿದೆ.
ನಾಗಲ್ಯಾಂಡ್ ನಲ್ಲಿ ಬಿಜೆಪಿ ಮೇಲುಗೈ: ನಾಗಲ್ಯಾಂಡ್ ನಲ್ಲಿ ಆಡಳಿತಾರೂಢ ಎನ್ ಪಿಎಫ್ ಗೆ ಆಘಾತವಾಗಿದ್ದು, ಬಿಜೆಪಿ ಮೈತ್ರಿಕೂಟ ಇತರರ ನೆರವಿನೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ. ಅಧಿಕಾರ ಹಿಡಿಯಲು 31 ಸದಸ್ಯರ ಬೆಂಬಲ ಅಗತ್ಯ.
ನಾಗಲ್ಯಾಂಡ್ ನಲ್ಲಿ ಬಿಜೆಪಿ ಮೈತ್ರಿಕೂಟ 31 , ಎನ್ ಪಿಎಫ್ ಮೈತ್ರಿಕೂಟ 24ರಲ್ಲಿ ಮೇಲುಗೈ ಸಾಧಿಸಿದೆ. ಇತರರು 5ರಲ್ಲಿ ಮುಂದೆ ಇದ್ದಾರೆ.
ಮೇಘಾಲಯದಲ್ಲಿ ಅತಂತ್ರ ವಿಧಾನ ಸಭೆ :ಮೇಘಾಲಯದಲ್ಲಿ ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದ್ದರೂ, ಅಧಿಕಾರವನ್ನು ಉಳಿಸಲು ಇತರರ ನೆರವು ಪಡೆಯಬೇಕಾಗಿದೆ. ಕಾಂಗ್ರೆಸ್ 23ರಲ್ಲಿ, ಎನ್ ಪಿಪಿ 12, ಬಿಜೆಪಿ 8, ಯುಡಿಪಿ ಮೈತ್ರಿಕೂಟ 7 ಮತ್ತು 9 ಕ್ಷೇತ್ರಗಳಲ್ಲಿ ಇತರರು ಮೇಲುಗೈ ಸಾಧಿಸಿದ್ದಾರೆ. ಮುಖ್ಯ ಮಂತ್ರಿ ಮುಕುಲ್ ಸಂಗ್ಮಾ ಅವರು ಅಂಪಾಟಿ ಮತ್ತು ಸಾಂಗ್ಸೊಕ್ ವಿಧಾನ ಸಭಾಕ್ಷೇತ್ರಗಳಲ್ಲಿ ಜಯ ಗಳಿಸಿದ್ದಾರೆ.