ಡಾ.ಮಂಜುಳಾ ಯುವ ಜನತೆಗೆ ಆದರ್ಶ: ರಾಮಲಿಂಗಾರೆಡ್ಡಿ
![ಡಾ.ಮಂಜುಳಾ ಯುವ ಜನತೆಗೆ ಆದರ್ಶ: ರಾಮಲಿಂಗಾರೆಡ್ಡಿ ಡಾ.ಮಂಜುಳಾ ಯುವ ಜನತೆಗೆ ಆದರ್ಶ: ರಾಮಲಿಂಗಾರೆಡ್ಡಿ](https://www.varthabharati.in/sites/default/files/images/articles/2018/03/4/ramalinga.jpg)
ಸಿಂಧಗಿ, ಮಾ.4: ಬಡತನದಲ್ಲಿದ್ದರೂ ಆಡಂಬರದ ವಿವಾಹಕ್ಕಾಗಿ ಸಾಲ ಮಾಡುವ ಈ ಕಾಲದಲ್ಲಿ ತಮ್ಮ ಮದುವೆಯ ಹಣ ಉಳಿಸಿ ಬಡಜನರ ವಿವಾಹ ಮಾಡುತ್ತಿರುವ ಡಾ.ಮಂಜುಳಾ ಯುವ ಜನತೆಗೆ ಆದರ್ಶ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಶ್ಲಾಘಿಸಿದ್ದಾರೆ.
ರವಿವಾರ ಸಿಂದಗಿ ತಾಲೂಕು ಕ್ರೀಡಾಂಗಣದಲ್ಲಿ ಡಾ ಮಂಜುಳಾ ಫೌಂಡೇಶನ್ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ.ಮಂಜುಳಾ ಹಾಗೂ ಗೋವರ್ಧನ್ಮೂರ್ತಿ ದಂಪತಿಗೆ ಆಡಂಬರದ ಮದುವೆ ಮಾಡಿಕೊಳ್ಳುವ ಅವಕಾಶವಿತ್ತು. ಆದರೆ, ಸರಳ ವಿವಾಹವಾಗಿ, ತಮ್ಮ ಮದುವೆಯ ಹಣವನ್ನು ಬಡಜನರ ಸಾಮೂಹಿಕ ವಿವಾಹಕ್ಕೆ ವಿನಿಯೋಗಿಸಿ ಆದರ್ಶರಾಗಿದ್ದಾರೆ ಎಂದರು.
ಸಾರಿಗೆ ಸಚಿವ ಎಂ ರೇವಣ್ಣ ಮಾತನಾಡಿ, ಸಿಂದಗಿ ತಾಲೂಕಿನ ಅಭಿವೃದ್ದಿ ಬಗ್ಗೆ ಸಾಕಷ್ಟು ಕನಸುಗಳನ್ನಿಟ್ಟುಕೊಂಡಿರುವ ಡಾ.ಮಂಜುಳಾ ಫೌಂಡೇಶ್ನ ಪ್ರಾರಂಭಿಸಿದ್ದಾರೆ. ಮೂರು ವರ್ಷಗಳಲ್ಲಿ ಸಿಂದಗಿ ಕ್ಷೇತ್ರದಲ್ಲಿ ಸಾಕಷ್ಟು ಸಾಮಾಜಿಕ ಕೆಲಸ ಮಾಡಿದ್ದು, ಸರಕಾರದ ವಿವಿಧ ಇಲಾಖೆಗಳಿಂದ ನೂರಾರು ಕೋಟಿ ರೂ. ಅನುದಾನ ತಂದಿದ್ದಾರೆ. ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದು, ಸ್ಥಳೀಯರ ಆಶಯದಂತೆ ಪಕ್ಷ ಅಭ್ಯರ್ಥಿ ಆಯ್ಕೆಮಾಡುತ್ತದೆ ಎಂದು ತಿಳಿಸಿದರು.
ಡಾ ಮಂಜುಳಾ ಮಾತನಾಡಿ, ವಿವಾಹ ಎಂಬುದು ಬದುಕಿನ ಪ್ರಮುಖ ಘಟ್ಟ. ಆದರೆ ಎಷ್ಟೋ ಜನರಿಗೆ ವಿವಾಹದ ಖರ್ಚು ಭರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಆರ್ಥಿಕವಾಗಿ ಹಿಂದುಳಿದಂತಹ ಜನರ ಬದುಕಿನಲ್ಲಿ ಬೆಳಕನ್ನು ಮೂಡಿಸುವ ಉದ್ದೇಶದಿಂದ ಇಂದು 25 ಜೋಡಿಗಳಿಗೆ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ ಎಂದರು. ಕನಕ ಗುರುಪೀಠದ ಸಿದ್ದರಾಮನಪುರಿ, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹಾಜರಿದ್ದರು.