ದೇಶ ವಿಭಜಿಸಲು ಜಿನ್ನಾ ಬಯಸಿರಲಿಲ್ಲ: ಫಾರೂಕ್ ಅಬ್ದುಲ್ಲಾ
ಜಮ್ಮು, ಮಾ. 4: ಮುಹಮ್ಮದ್ ಅಲಿ ಜಿನ್ನಾ ಮುಸ್ಲಿಮರಿಗಾಗಿ ಪ್ರತ್ಯೇಕ ದೇಶ ಬಯಸಿರಲಿಲ್ಲ. ಆದರೆ, ದೇಶದಲ್ಲಿ ಮುಸ್ಲಿಮರು ಹಾಗೂ ಸಿಖ್ಖರಿಗೆ ಅಲ್ಪಸಂಖ್ಯಾತ ಸ್ಥಾನ ಮಾನ ನೀಡಲು ಭಾರತೀಯ ನಾಯಕರು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ದೇಶ ವಿಭಜನೆಗೆ ಆಗ್ರಹಿಸಿದ್ದರು ಎಂದು ಜಮ್ಮು ಹಾಗೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ತಿಳಿಸಿದ್ದಾರೆ.
ಈ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.
ದೇಶದಲ್ಲಿ ಮುಸ್ಲಿಮರು ಹಾಗೂ ಸಿಖ್ಖರಿಗೆ ಅಲ್ಪಸಂಖ್ಯಾತ ಸ್ಥಾನ ಮಾನ ನೀಡಲು ರೂಪಿಸಲಾದ ಆಯೋಗವನ್ನು ರಾಜಕೀಯ ನಾಯಕರಾದ ಜವಾಹರ್ಲಾಲ್ ನೆಹರೂ, ಮೌಲನಾ ಆಝಾದ್ ಹಾಗೂ ಸರ್ದಾರ್ ಪಟೇಲ್ ತಿರಸ್ಕರಿಸಿದ್ದರು. ಇದು ಜಿನ್ನಾ ಪ್ರತ್ಯೇಕ ಪಾಕಿಸ್ತಾನಕ್ಕೆ ಆಗ್ರಹಿಸಲು ಕಾರಣವಾಯಿತು ಎಂದು ಅಬ್ದುಲ್ಲಾ ಹೇಳಿದರು. ‘‘ಜಿನ್ನ ಅವರ ಬೇಡಿಕೆಗೆ ಜವಾಹರ್ಲಾಲ್ ನೆಹರೂ, ಮೌಲನಾ ಆಝಾದ್ ಹಾಗೂ ಸರ್ದಾರ್ ಪಟೇಲ್ ಒಪ್ಪಿಕೊಳ್ಳಲಿಲ್ಲ. ಜಿನ್ನಾ ಅವರ ಬೇಡಿಕೆಗೆ ಒಪ್ಪಿಕೊಂಡಿದ್ದರೆ, ಅವರು ಪಾಕಿಸ್ತಾನದ ಬೇಡಿಕೆ ಇರಿಸುತ್ತಿರಲಿಲ್ಲ. ಭಾರತ ವಿಭಜನೆ ಆಗುತ್ತಿರಲಿಲ್ಲ. ಬಾಂಗ್ಲಾದೇಶ ಇರುತ್ತಿರಲಿಲ್ಲ. ಪಾಕಿಸ್ತಾನ ಇರುತ್ತಿರಲಿಲ್ಲ. ಭಾರತ ಮಾತ್ರ ಇರುತ್ತಿತ್ತು’’ ಎಂದು ಅಬ್ದುಲ್ಲಾ ಹೇಳಿದ್ದಾರೆ.