ಮಡಿಕೇರಿ: ಮೂಲಭೂತ ಸೌಲಭ್ಯದ ಕೊರತೆ ಖಂಡಿಸಿ ಪ್ರತಿಭಟನೆ
![ಮಡಿಕೇರಿ: ಮೂಲಭೂತ ಸೌಲಭ್ಯದ ಕೊರತೆ ಖಂಡಿಸಿ ಪ್ರತಿಭಟನೆ ಮಡಿಕೇರಿ: ಮೂಲಭೂತ ಸೌಲಭ್ಯದ ಕೊರತೆ ಖಂಡಿಸಿ ಪ್ರತಿಭಟನೆ](https://www.varthabharati.in/sites/default/files/images/articles/2018/03/5/Z AADIVASI PROTEST.jpg)
ಮಡಿಕೇರಿ, ಮಾ.5: ಕುಡಿಯುವ ನೀರು ರಸ್ತೆ ಮನೆ ಸೇರಿದಂತೆ ಮೂಲ ಸೌಕರ್ಯ ನೀಡಬೇಕೆಂದು ಒತ್ತಾಯಿಸಿ ವಿರಾಜಪೇಟೆ ತಾಲೂಕಿನ ದೇವರಪುರ ಗ್ರಾಮ ಪಂಚಾಯತ್ ಎದುರು ಆದಿವಾಸಿಗಳು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಪ್ರದೇಶದಲ್ಲಿ ಕಳೆದ ಐವತ್ತು ವರ್ಷಗಳಿಂದ ವಾಸವಾಗಿದ್ದರೂ ಜಿಲ್ಲಾಡಳಿತ ಹಾಗೂ ಸರಕಾರ ಯಾವುದೇ ಸೌಲಭ್ಯ ಕಲ್ಪಿಸದೇ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು
ಬುಡಕಟ್ಟು ಆದಿವಾಸಿ ಮುಖಂಡೆ ಪ್ರೇಮ ಮಾತನಾಡಿ, ದೇವರಪುರ ಗಿರಿಜನ ಹಾಡಿಯಲ್ಲಿ 135 ಕುಟುಂಬಗಳು ವಾಸವಾಗಿದ್ದು, ಇಂದಿಗೂ ಕುಡಿಯುವ ನೀರು, ರಸ್ತೆ, ಮನೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಗಿಡ ಮರಗಳನ್ನು ನೆಟ್ಟು ಕಾಡನ್ನು ಬೆಳೆಸಿದ ನಮಗೆ ಕಾಡಿನಲ್ಲಿ ವಾಸ ಮಾಡಲು ಅವಕಾಶ ಕಲ್ಪಿಸುತ್ತಿಲ್ಲ. ಪ್ರಭಾವಿ ವ್ಯಕ್ತಿಗಳು ನೂರಾರು ಎಕರೆ ಸರ್ಕಾರಿ ಭೂಮಿಯನ್ನು ಕಬಳಿಸಿದರೆ ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳು ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ತಂತ್ರಕ್ಕೆ ಮುಂದಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಲವು ಬಾರಿ ಪ್ರತಿಭಟನೆ ನಡೆಸಿದ್ದರೂ ಇದುವರೆಗೆ ಯಾವುದೇ ಸೌಲಭ್ಯಗಳು ದೊರೆತ್ತಿಲ್ಲ. ಹೆಬ್ಬಾಲೆ ಹಾಡಿ ವ್ಯಾಪ್ತಿಯಲ್ಲಿ 158 ಎಕರೆ ಸರ್ಕಾರಿ ಭೂಮಿಯನ್ನು ಸರ್ವೆ ಮಾಡಬೇಕು ಹಾಗೂ ಪುನರ್ ವಸತಿಯೊಂದಿಗೆ ಮೂಲ ಸೌಕರ್ಯ ಒದಗಿಸಿ ಎಂದು ಒತ್ತಾಯಿಸಿದ ಪ್ರತಿಭಟನಾಕಾರರು ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು.
ಅಧಿಕಾರಿ ಭೇಟಿ
ವಿರಾಜಪೇಟೆ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಸ್ಥಳಕ್ಕೆ ಭೇಟಿ ನೀಡಿ ಆದಿವಾಸಿಗಳೊಂದಿಗೆ ಚರ್ಚಿಸಿದರು. ಈ ಸಂದರ್ಭ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮೋಹನ್ ಹಾಗೂ ಸದಸ್ಯೆ ರಾಣಿ ಸೇರಿದಂತೆ ಮತ್ತಿತರರು ಹಾಜರಿದ್ದರು.