ಮದ್ದೂರು: ಆನ್ಲೈನ್ ಮಾರುಕಟ್ಟೆ ಕುರಿತು ಕಾರ್ಯಾಗಾರ
![ಮದ್ದೂರು: ಆನ್ಲೈನ್ ಮಾರುಕಟ್ಟೆ ಕುರಿತು ಕಾರ್ಯಾಗಾರ ಮದ್ದೂರು: ಆನ್ಲೈನ್ ಮಾರುಕಟ್ಟೆ ಕುರಿತು ಕಾರ್ಯಾಗಾರ](https://www.varthabharati.in/sites/default/files/images/articles/2018/03/5/05M.D.R.3.jpg)
ಮದ್ದೂರು, ಮಾ.5: ಪಟ್ಟಣದ ತಾಲೂಕಿನ ಕೃಷಿ ಉತ್ಪನ್ನ ಮಾರಕಟ್ಟೆ ಸಮಿತಿ (ಎಪಿಎಂಸಿ)ಯ ಸಭಾಂಗಣದಲ್ಲಿ ಎಪಿಎಂಸಿ ಅಧ್ಯಕ್ಷ ಕುದುರಗುಂಡಿ ನಾಗೇಶ್ ಅವರ ಅಧ್ಯಕ್ಷತೆಯಲ್ಲಿ ಮಾರಕಟ್ಟೆಯಲ್ಲಿ ಆನ್ಲೈನ್ ವ್ಯವಸ್ಥೆ ತರುವ ಸಂಬಂಧ ಸೋಮವಾರ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರ ಮುಗಿದ ನಂತರ ಸಭೆಯಲ್ಲಿದ್ದ ಕೆಲವು ವರ್ತಕರು ಹಾಗೂ ರೈತರು ಮಾರುಕಟ್ಟೆಗೆ ಆನ್ಲೈನ್ ವ್ಯವಸ್ಥೆ ಜಾರಿಗೊಳಿಸುವುದ ಬೇಡ, ಇದರಿಂದ ರೈತರಿಗೆ ಹಾಗೂ ವರ್ತಕರಿಗೆ ಇಬ್ಬರಿಗೂ ಇಬ್ಬರು ಸಮಸ್ಯೆಯಾಗುತ್ತದೆ. ಜಾರಿ ಮಾಡಿದರೆ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಗತಿಪರ ಹೋರಾಟಗಾರ ನ.ಲಿ.ಕೃಷ್ಣ, ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷರು ಹಾಗೂ ಅಧಿಕಾರಿಗಳು ರೈತರು ಮತ್ತು ವರ್ತಕರಿಗೆ ಆನ್ಲೈನ್ ಮಾರುಕಟ್ಟೆಯಿಂದಾಗುವ ಅನುಕೂಲದ ಬಗ್ಗೆ ತಿಳುವಳಿಕೆ ನೀಡಬೇಕು. ಅದರಲ್ಲಿರುವ ಸಾಧಕ ಹಾಗೂ ಬಾಧಕಗಳನ್ನು ಲಿಖಿತವಾಗಿ ಪಡೆದು ಅವರ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಇಲ್ಲವಾದರೆ ಜಾರಿ ಕಷ್ಟವಾಗುತ್ತದೆ ಎಂದು ಸಲಹೆ ನೀಡಿದರು.
ಆನ್ಲೈನ್ ಮಾರುಕಟ್ಟೆಯ ಬಗ್ಗೆ ವರ್ತಕರು ಮತ್ತು ಸಭೆಯಲ್ಲಿದ್ದ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅಧಿಕಾರಿಗಳ ಜತೆಯಲ್ಲಿ ಚಿರ್ಚಿಸಿ ಮುಂದಿನ ಕ್ರಮ ವಹಿಸಲಾಗುವುದು ಎಂದು ಅಧ್ಯಕ್ಷಕುದುರಗುಂಡಿ ನಾಗೇಶ್ ಸ್ಪಷ್ಟಪಡಿಸಿದರು.
ರಾಷ್ಟ್ರೀಯ ಇ-ಮಾರುಕಟ್ಟೆಯ ತರಬೇತಿದಾರ ಸೈಮನ್ ಅವರು ಆನ್ಲೈನ್ ಮಾರುಕಟ್ಟೆಯ ಬಗ್ಗೆ ರೈತರಿಗೆ ಮತ್ತು ವರ್ತಕರಿಗೆ ತರಬೇತಿ ನೀಡಿದರು.
ಎಂಪಿಎಂಸಿ ಉಪಾಧ್ಯಕ್ಷ ಮಮತಾ ಶಂಕರೇಗೌಡ, ಸದಸ್ಯೆ ಕಲಾವತಿ, ಎಳನೀರು ಮಾರುಕಟ್ಟೆಯ ವರ್ತಕರ ಸಂಘದ ಅಧ್ಯಕ್ಷ ರವಿಚನ್ನಸಂದ್ರ, ಉಪಾಧ್ಯಕ್ಷ ಉಮೇಶ್, ಹಳ್ಳಿಕೆರೆ ರಾಜು, ಶಿವರಾಜು, ಸಯ್ಯದ್ ಸಾಧಿಕ್ ಇತರರು ಉಪಸ್ಥಿತರಿದ್ದರು.