ಪಿಎನ್ಬಿ ವಂಚನೆ: ಸೊತ್ತುಗಳನ್ನು ಮಾರಾಟ ಮಾಡದಂತೆ ಮೋದಿ, ಚೋಕ್ಸಿಗೆ ನಿರ್ಬಂಧ ಹೇರಿದ ಎನ್ಸಿಎಲ್ಟಿ
ಮುಂಬೈ, ಮಾ.5: ಪಂಜಾಬ್ ನ್ಯಾಶನಲ್ ಬ್ಯಾಂಕ್ಗೆ 12,600 ಕೋಟಿ ರೂ. ವಂಚಿಸಿರುವ ಆರೋಪ ಎದುರಿಸುತ್ತಿರುವ ನೀರವ್ ಮೋದಿ, ಮೆಹುಲ್ ಚೋಕ್ಸಿ ಸೇರಿದಂತೆ ಇವರೊಂದಿಗೆ ಸಂಪರ್ಕ ಹೊಂದಿರುವ 62 ಇತರ ವಜ್ರಾಭರಣ ವ್ಯಾಪಾರಿಗಳು ಹಣ ವಾಪಸ್ ಪಡೆಯದಂತೆ, ವರ್ಗಾಯಿಸದಂತೆ ಹಾಗೂ ಸೊತ್ತುಗಳನ್ನು ಮಾರಾಟ ಮಾಡದಂತೆ ರಾಷ್ಟ್ರೀಯ ಕಂಪೆನಿ ಕಾನೂನು ಪೀಠವು (ಎನ್ಸಿಎಲ್ಟಿ) ನಿರ್ಬಂಧ ಹೇರಿದೆ.
ಮೋದಿ, ಚೋಕ್ಸಿ ಹಾಗೂ ಇತರ ಆರೋಪಿಗಳು ಯಾವುದೇ ರೀತಿಯ ವ್ಯವಹಾರಗಳನ್ನು ನಡೆಸದಂತೆ ನಿರ್ಬಂಧ ಹೇರಬೇಕೆಂದು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಬಿಎಸ್ವಿ ಪ್ರಕಾಶ್ ಕುಮಾರ್ ಮತ್ತು ವಿ. ನಲ್ಲಸೇನಾಪತಿಯ ಮುಂಬೈ ಎನ್ಸಿಎಲ್ಟಿ ಪೀಠವು ಈ ಆದೇಶವನ್ನು ನೀಡಿದೆ. ಕಂಪೆನಿ ಕಾಯ್ದೆ 2013ರ ಸೆಕ್ಷನ್ 221 ಅಥವಾ ಸೀಮಿತ ಹೊಣೆಗಾರಿಕೆ ಜೊತೆಗಾರಿಕೆ ಕಾಯ್ದೆ (ಎಲ್ಎಲ್ಪಿ) 2008ರ ಸೆಕ್ಷನ್ 43ರಡಿಯಲ್ಲಿ ದತ್ತಿ ಸಂಸ್ಥೆಗಳು ಮತ್ತು ವ್ಯಕ್ತಿಗಳು ಬರುವುದಿಲ್ಲವಾದರೂ ಈ ಹಗರಣದಲ್ಲಿ ಹಣವನ್ನು ವೈಯಕ್ತಿಕ ಮತ್ತು ಸಂಸ್ಥೆಗಳ ಹೆಸರಿಗೆ ವರ್ಗಾಯಿಸಲಾಗಿದೆ ಎಂದು ಸಚಿವಾಲಯ ಆರೋಪಿಸಿರುವ ಕಾರಣ ಸಚಿವಾಲಯದ ಹಿತದೃಷ್ಟಿಯಿಂದ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಪೀಠವು ಸ್ಪಷ್ಟ ಮಾಡಿದೆ.
ನೀರವ್ ಮೋದಿ ಖರೀದಿಸಿರುವ ಶೇರುಗಳನ್ನು ಮಾರಾಟ ಮಾಡದಂತೆ ಬಾಂಬೆ ಸ್ಟಾಕ್ ಎಕ್ಸ್ಚೇಂಜ್, ರಾಷ್ಟ್ರೀಯ ಸ್ಟಾಕ್ ಎಕ್ಸ್ಚೇಂಜ್ ಹಾಗೂ ಸೆಬಿಗೆ ನಿರ್ದೇಶನ ನೀಡಬೇಕೆಂದು ಸಚಿವಾಲಯ ಮನವಿ ಮಾಡಿದೆ.