ಕಾರ್ತಿ ಸಿಬಿಐ ಕಸ್ಟಡಿ ಮೂರು ದಿನ ವಿಸ್ತರಣೆ
ಐಎನ್ಎಕ್ಸ್ ಮೀಡಿಯಾ ಪ್ರಕರಣ
ಹೊಸದಿಲ್ಲಿ,ಮಾ.6: ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರ ಸಿಬಿಐ ಕಸ್ಟಡಿಯನ್ನು ಇನ್ನೂ ಮೂರು ದಿನಗಳ ಕಾಲ ವಿಸ್ತರಿಸಿ ಇಲ್ಲಿಯ ವಿಶೇಷ ಸಿಬಿಐ ನ್ಯಾಯಾಲಯವು ಮಂಗಳವಾರ ಆದೇಶಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಮಾ.9ರಂದು ನಡೆಯಲಿದೆ.
ಇದಕ್ಕೂ ಮುನ್ನ ಕಾರ್ತಿ ಜಾಮೀನು ಅರ್ಜಿಯನ್ನು ವಿರೋಧಿಸಿದ ಸಿಬಿಐ,‘ಹೊಸ ವಿಷಯ’ಗಳ ಬಗ್ಗೆ ಕಾರ್ತಿ ಅವರನ್ನು ಪ್ರಶ್ನಿಸಬೇಕಾಗಿರುವುದರಿಂದ ಅವರ ಕಸ್ಟಡಿ ವಿಚಾರಣೆಯು ಅಗತ್ಯವಾಗಿದೆ ಎಂದು ಕೋರಿತ್ತು. ಒಂಭತ್ತು ದಿನಗಳ ಅವಧಿಗೆ ಅವರನ್ನು ತನ್ನ ಕಸ್ಟಡಿಗೆ ನೀಡುವಂತೆ ಅದು ನ್ಯಾಯಾಲಯವನ್ನು ಆಗ್ರಹಿಸಿತ್ತು.
ಐದು ದಿನಗಳ ಕಸ್ಟಡಿ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಕಾರ್ತಿಯವರನ್ನು ವಿಶೇಷ ನ್ಯಾಯಾಧೀಶ ಸುನಿಲ್ ರಾಣಾ ಅವರೆದುರು ಹಾಜರು ಪಡಿಸಿದ್ದ ಸಿಬಿಐ, ಕಳೆದ ನಾಲ್ಕು ದಿನಗಳಲ್ಲಿ ಪ್ರಕರಣದ ವಿಚಾರಣೆಯಲ್ಲಿ ಸಾಕಷ್ಟು ಪ್ರಗತಿಯಾಗಿದೆ ಮತ್ತು ಇನ್ನಷ್ಟು ವಿಚಾರಣೆಯ ಅಗತ್ಯವಿದೆ ಎಂದು ತಿಳಿಸಿತ್ತು.
ಎರಡು ದಿನಗಳ ಹಿಂದಷ್ಟೇ ಪ್ರಕರಣದಲ್ಲಿ ಹೊಸ ವಿಷಯಗಳು ಬೆಳಕಿಗೆ ಬಂದಿವೆ. ತನಿಖೆಯ ವಿವರಗಳನ್ನು ಬಹಿರಂಗಗೊಳಿಸುವಂತಿಲ್ಲ ಮತ್ತು ಈ ವಿಷಯಗಳ ಬಗ್ಗೆ ಪ್ರಶ್ನಿಸಲು ಅವರನ್ನು ಇನ್ನಷ್ಟು ಅವಧಿಗೆ ಸಿಬಿಐ ವಶಕ್ಕೊಪ್ಪಿಸುವ ಅಗತ್ಯವಿದೆ ಎಂದು ತನಿಖಾ ಸಂಸ್ಥೆಯ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ನ್ಯಾಯಾಲಯಕ್ಕೆ ತಿಳಿಸಿದರು.
ತನಿಖೆಯು ನಿರ್ಣಾಯಕ ಘಟ್ಟದಲ್ಲಿದ್ದು, ಕಾರ್ತಿ ಜಾಮೀನು ಅರ್ಜಿಗೆ ವಿವರವಾದ ಉತ್ತರವನ್ನು ಸಲ್ಲಿಸಲು ಸಿಬಿಐಗೆ ಎರಡು ವಾರಗಳ ಕಾಲಾವಕಾಶ ಅಗತ್ಯವಿದೆ ಎಂದು ತಿಳಿಸಿದ ಮೆಹ್ತಾ, ಕಾರ್ತಿ ತನಿಖೆಗೆ ಸಹಕರಿಸುತ್ತಿಲ್ಲ ಮತ್ತು ತನ್ನ ಫೋನ್ಗಳ ಪಾಸ್ವರ್ಡ್ಗಳನ್ನು ಹೇಳುತ್ತಿಲ್ಲ. ಪ್ರತಿಯೊಂದು ಪ್ರಶ್ನೆಗೂ ಅವರು ‘ತಾನು ರಾಜಕೀಯ ಬಲಿಪಶುವಾಗಿದ್ದೇನೆ’ ಎಂದಷ್ಟೇ ಉತ್ತರಿಸುತ್ತಿದ್ದಾರೆ ಎಂದರು.
ಕಾರ್ತಿಯವರನ್ನು ಹೇಗಾದರೂ ಮಾಡಿ ತನ್ನ ವಶದಲ್ಲಿ ಇಟ್ಟುಕೊಳ್ಳಲು ಸಿಬಿಐ ಬಯಸಿದೆ ಎಂದು ಹೇಳಿದ ಅವರ ಪರ ವಕೀಲ ಅಭಿಷೇಕ ಮನು ಸಾಂಘ್ವಿ ಅವರು, ತನ್ನ ಪುತ್ರಿಯ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಇಂದ್ರಾಣಿ ಮುಖರ್ಜಿಯಾ ಹೇಳಿಕೆಯು ಅಂಗೀಕಾರಾರ್ಹ ಸಾಕ್ಷಾಧಾರವೇ ಎಂದು ಪ್ರಶ್ನಿಸಿದರು.
ಕಾರ್ತಿಗೆ ಜಾಮೀನು ನೀಡುವಂತೆ ನ್ಯಾಯಾಲಯವನ್ನು ಕೋರಿಕೊಂಡ ಸಾಂಘ್ವಿ, ಕಸ್ಟಡಿಯಲ್ಲಿಯೇ ಇಟ್ಟುಕೊಂಡು ವಿಚಾರಣೆ ನಡೆಸಲು ಅವರು ಬಾಂಬ್ ಹೊಂದಿರುವ ಭಯೋತ್ಪಾದಕನಲ್ಲ ಎಂದು ಹೇಳಿದರು.
ಚಿದಂಬರಂ ಮತ್ತು ಹಿರಿಯ ನ್ಯಾಯವಾದಿಯಾಗಿರುವ ಅವರ ಪತ್ನಿ ನಳಿನಿ ಚಿದಂಬರಂ ಅವರು ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರು. ಹತ್ತು ನಿಮಿಷಗಳ ಅವಧಿಗೆ ಕಾರ್ತಿಯನ್ನು ಭೇಟಿಯಾಗಲು ನ್ಯಾಯಾಲಯವು ಅವರಿಗೆ ಅನುಮತಿ ನೀಡಿತ್ತು.
2007ಲ್ಲಿ ಚಿದಂಬರಂ ಅವರು ವಿತ್ತಸಚಿವರಾಗಿದ್ದಾಗ 305 ಕೋ.ರೂ.ಗಳ ವಿದೇಶಿ ಹೂಡಿಕೆಯನ್ನು ಸ್ವೀಕರಿಸಲು ಪೀಟರ್ ಮುಖರ್ಜಿಯಾ ಮತ್ತು ಇಂದ್ರಾಣಿ ಮುಖರ್ಜಿಯಾ ಅವರ ಐಎನ್ಎಕ್ಸ್ ಮೀಡಿಯಾಕ್ಕೆ ಅನುಮತಿ ನೀಡುವಲ್ಲಿ ಅಕ್ರಮಗಳು ನಡೆದಿದ್ದವು ಎಂದು ಆರೋಪಿಸಿ ಕಳೆದ ವರ್ಷದ ಮೇ.15ರಂದು ದಾಖಲಾಗಿದ್ದ ಎಫ್ಐಆರ್ಗೆ ಸಂಬಂಧಿಸಿದಂತೆ ಫೆ.28ರಂದು ಸಿಬಿಐ ಕಾರ್ತಿ ಅವರನ್ನು ಬಂಧಿಸಿತ್ತು.