ಹನೂರು: ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವ
ಹನೂರು,ಮಾ.6 : ಪಟ್ಟಣದ ಅದಿದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವದ ಎರಡನೇ ದಿನ ಹನೂರು ಪಟ್ಟಣ ಸೇರಿದಂತೆ ಸುತ್ತಮತ್ತಲಿನ ಗ್ರಾಮಸ್ಥರು ದೇಗುಲಕ್ಕೆ ಪ್ರತಿ ಮನೆಯಿಂದ ತಯಾರಿಸಿದ ತಂಪುಜ್ಯೋತಿಯನ್ನು(ತಂಬಿಟ್ಟು) ದೇವಸ್ಥಾನಕ್ಕೆ ತಂದು ವಿಶೇಷ ಪೂಜೆಯನ್ನು ಸಲ್ಲಿಸಿ ದೇವಿಗೆ ಅರ್ಪಿಸಿ ದೇವಿಯ ಕೃಪೆಗೆ ಪಾತ್ರರಾದರು.
15 ದಿನವಿರುವಂತೆಯೇ ತಮಟೆ ಸಾರುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ದೇವಸ್ಥಾನದ ಅರ್ಚಕರಿಗೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಕಂಕಣ ಕಟ್ಟಿ ದೇವಸ್ಥಾನದ ಮುಂಭಾಗ ಮೂರು ಕವಡಿನ ಒಂದು ಕಂಬವನ್ನು ಹಾಕಿ ಅದರ ಮೇಲೆ ಕರಗವನ್ನು ಇಟ್ಟು ಪೂಜೆ ಸಲ್ಲಿಸಲಾಗುತ್ತಿತ್ತು. ಜಾತ್ರೆಯ ಎರಡನೇ ದಿನವಾದ ಇಂದು ಪ್ರತಿ ಮನೆಯಿಂದ ತಯಾರಿಸಿದ ತಂಪುಜ್ಯೋತಿಯನ್ನು(ತಂಬಿಟ್ಟು) ದೇವಸ್ಥಾನಕ್ಕೆ ತಂದು ವಿಶೇಷ ಪೂಜೆಯನ್ನು ಸಲ್ಲಿಸಿದರು
ದೇವಸ್ಥಾನದ ಆಡಳಿತ ಮಂಡಳಿಯಿಂದ ಸಕಲ ಸಿದ್ದತೆ: ಹನೂರು ಪಟ್ಟಣ ಸೇರಿದಂತೆ ನೆರೆಯ ರಾಜ್ಯ ತಮಿಳುನಾಡು ಹಾಗೂ ನೆರೆಯ ಜಿಲ್ಲೆ ಮೈಸೂರು , ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕನಕಪುರ ಸೇರಿದಂತೆ ಈ ಜಾತ್ರೆ ಮಹೋತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಲ್ಲಿದ್ದು ದೇವಸ್ಥಾನ ಆಡಳಿತ ಮಂಡಳಿಯು ಇಲ್ಲಿಗೆ ಆಗಮಿಸುವ ಭಕ್ತಾದಿಗಳಿಗೆ ಬೆಳ್ಳಿಗ್ಗಿನ ಉಪಹಾರ, ಮದ್ಯಾಹ್ನ ಮತ್ತು ರಾತ್ರಿ ಸಮಯದಲ್ಲಿ ಊಟ ಉಪಾಚಾರಗಳನ್ನು ಒದಗಿಸಿದೆ.
ಜಾತ್ರ ಮಹೋತ್ಸವದ ಹಿನ್ನಲೆ ದೇಗುಲದ ಗರ್ಭಗುಡಿ ಹಾಗೂ ಆವರಣವನ್ನು ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತಲ್ಲದೇ, ಮುಖ್ಯ ರಸ್ತೆ ಸೇರಿದಂತೆ ಎಲ್ಲಾ ಬೀದಿಗಳು ತಳೀರು ತೋರಣ ಹಾಗೂ ವಿದ್ಯುತ್ ದೀಪಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು.