ನೀರವ್ ಮೋದಿ ಅಪೀಲಿಗೆ ಉತ್ತರಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಹೈಕೋರ್ಟ್ ಸೂಚನೆ
ಹೊಸದಿಲ್ಲಿ, ಮಾ.7: ಪಿಎನ್ ಬಿ ಬ್ಯಾಂಕ್ ಬಹುಕೋಟಿ ವಂಚನೆ ಹಗರಣದಲ್ಲಿ ಆರೋಪಿಯಾಗಿರುವ ವಜ್ರೋದ್ಯಮಿ ನೀರವ್ ಮೋದಿಯ ಫೈರ್ ಸ್ಟಾರ್ ಡೈಮಂಡ್ ಇಂಟರ್ ನ್ಯಾಷನಲ್ ದಾಖಲಿಸಿರುವ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ದಿಲ್ಲಿ ಹೈಕೋರ್ಟ್ ಬುಧವಾರ ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿಗೊಳಿಸಿದೆ.
ಶೋಧ ನಡೆಸಿ ಆಸ್ತಿ ಜಪ್ತಿ ಮಾಡಲು ಜಾರಿ ನಿರ್ದೇಶನಾಲಯಕ್ಕೆ ಅನುಮತಿ ನೀಡುವ ಅಕ್ರಮ ಹಣ ವ್ಯವಹಾರ ತಡೆ ಕಾಯ್ದೆಯ ನಿಬಂಧನೆಗಳನ್ನು ಪ್ರಶ್ನಿಸಿ ಸಂಸ್ಥೆ ಅಪೀಲು ಸಲ್ಲಿಸಿತ್ತಲ್ಲದೆ ವಿತ್ತ ಸಚಿವಾಲಯ ಹಾಗೂ ಜಾರಿ ನಿರ್ದೇಶನಾಲಯದಿಂದ ಶೋಧ ವಾರಂಟ್ ಪ್ರತಿಗಳನ್ನೂ ಕೇಳಿತ್ತು. ಸಂಸ್ಥೆಗೆ ಸೇರಿದ್ದ ಸ್ಥಿರಾಸ್ತಿಗಳನ್ನು ವಶಪಡಿಸಿ ಅದನ್ನು ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಠೇವಣಿಯಿರಿಸುವ ಜಾರಿ ನಿರ್ದೇಶನಾಲಯದ ನಿರ್ಧಾರವನ್ನೂ ಸಂಸ್ಥೆ ಪ್ರಶ್ನಿಸಿತ್ತು.
ನೀರವ್ ಮೋದಿಯ ವಕೀಲ ವಿಜಯ್ ಅಗರ್ವಾಲ್ ಅವರಿಗೆ ಈ ಪ್ರಕರಣದ ವಾಸ್ತವಾಂಶಗಳ ಬಗ್ಗೆ ಖಚಿತತೆಯಿಲ್ಲ ಎಂದು ಹೈಕೋರ್ಟ್ ಪೀಠ ಹೇಳಿದೆ. "ಎಷ್ಟು ಹಣ ಅವ್ಯವಹಾರವಾಗಿದೆ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ ಹಾಗೂ ಯಾವ ಅಧಿಕಾರದನ್ವಯ ಜಾರಿ ನಿರ್ದೇಶನಾಲಯ ಆಸ್ತಿ ಶೋಧನೆಗೆ ತೊಡಗಿತ್ತು ಎಂದು ಸ್ಪಷ್ಟವಿಲ್ಲ'' ಎಂದು ಜಸ್ಟಿಸ್ ಎಸ್. ಮುರಳೀಧರ್ ಹಾಗೂ ಐಎಸ್ ಮೆಹ್ತಾ ಅವರನ್ನೊಳಗೊಂಡ ಪೀಠ ಹೇಳಿದೆ.
ಆದರೆ ಕಂಪೆನಿ ವಿರುದ್ಧದ ಕಾರ್ಯಾಚರಣೆಯನ್ನು ನಿಲ್ಲಿಸಲು ಪೀಠ ನಿರಾಕರಿಸಿತ್ತಲ್ಲದೆ ಜಾರಿ ನಿರ್ದೇಶನಾಲಯ ತನ್ನ ಪ್ರತಿಕ್ರಿಯೆ ಸಲ್ಲಿಸಿದ ನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದೆಮಧು ತಿಳಿಸಿದೆ.
ಮುಂದಿನ ವಿಚಾರಣೆಯ ದಿನಾಂಕವಾದ ಮಾರ್ಚ್ 19ರಂದು ಅಗತ್ಯ ಮಾಹಿತಿಗಳನ್ನು ನ್ಯಾಯಾಲಯದ ಮುಂದಿಡಬೇಕು ಹಾಗೂ ಈ ಪ್ರಕರಣದ ಬಗ್ಗೆ ಸ್ಪಷ್ಟ ಮಾಹಿತಿಯಿರುವ ಅಧಿಕಾರಿ ಕೂಡ ಈ ಸಂದರ್ಭ ಹಾಜರಿದ್ದು ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಮಾರ್ಚ್ 1ರಂದು ಜಾರಿ ನಿರ್ದೇಶನಾಲಯವು ಮೋದಿ ಮತ್ತಾತನ ಮಾವ ಮೆಹುಲ್ ಚೊಕ್ಸಿಗೆ ಸೇರಿದ 1,217 ಕೋಟಿ ರೂ. ಮೌಲ್ಯದ 41 ಸ್ಥಿರಾಸ್ತಿಗಳನ್ನು ಜಪ್ತಿಗೊಳಿಸಿತ್ತು. ಇದಕ್ಕೂ ಒಂದು ವಾರದ ಮೊದಲು ಒಂದು ಫಾರ್ಮ್ ಹೌಸ್ ಹಾಗೂ ಪೆಂಟ್ ಹೌಸ್ ಸೇರಿದಂತೆ 21 ಇತರ ಆಸ್ತಿಗಳನ್ನೂ ವಶಪಡಿಸಿಕೊಳ್ಳಲಾಗಿತ್ತು. ಇದರ ಹೊರತಾಗಿ ಅತ್ಯಮೂಲ್ಯ ಆಭರಣಗಳು, ವಜ್ರ, ಬ್ಯಾಂಕು ಠೇವಣಿಗಳು, ವಿಲಾಸಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ವಿಶೇಷ ನ್ಯಾಯಾಲಯವೊಂದು ಮಾರ್ಚ್ 3ರಂದು ಮೋದಿ ಹಾಗೂ ಚೊಕ್ಸಿಯ ವಿರುದ್ಧ ಜಾಮೀನುರಹಿತ ವಾರಂಟ್ ಕೂಡ ಜಾರಿಗೊಳಿಸಿತ್ತು. ಫೆಬ್ರವರಿ 15,1 7 ಹಾಗೂ 23ರಂದು ಸಮನ್ಸ್ ಜಾರಿಯಾದ ಹೊರತಾಗಿಯೂ ಇಬ್ಬರೂ ಹಾಜರಾಗಿರಲಿಲ್ಲ.