ಪ್ರವೀಣ್ ತೊಗಾಡಿಯಾ ಕಾರಿಗೆ ಟ್ರಕ್ ಢಿಕ್ಕಿ
ನನ್ನ ಕೊಲೆಗೆ ಸಂಚು ನಡೆದಿದೆ ಎಂದ ವಿಹಿಂಪ ನಾಯಕ
ಅಹ್ಮದಾಬಾದ್, ಮಾ.7: ಟ್ರಕ್ ಮತ್ತು ಕಾರ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ವಿಎಚ್ಪಿ ಮುಖಂಡ ಪ್ರವೀಣ್ ತೊಗಾಡಿಯ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಗುಜರಾತ್ನ ಸೂರತ್ ಬಳಿ ಬುಧವಾರ ಸಂಭವಿಸಿದೆ. ಘಟನೆಯ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ತೊಗಾಡಿಯ ಈ ಕುರಿತು ಸ್ವತಂತ್ರ ತನಿಖೆಗೆ ಆದೇಶಿಸಬೇಕೆಂದು ಮನವಿ ಮಾಡಿದ್ದಾರೆ.
ಬುಧವಾರ ತೊಗಾಡಿಯ ತಮ್ಮ ಕಾರಿನಲ್ಲಿ ಸೂರತ್ನ ಕಮ್ರೆಜ್ ಬಳಿ ಪ್ರಯಾಣಿಸುತ್ತಿದ್ದ ವೇಳೆ ಹಿಂದಿನಿಂದ ಢಿಕ್ಕಿ ಹೊಡೆದ ಟ್ರಕ್ ಅವರ ವಾಹನವನ್ನು ಸ್ವಲ್ಪ ದೂರ ಎಳೆದುಕೊಂಡು ಹೋಗಿದೆ. ಸಾಮಾನ್ಯವಾಗಿ ಅಪಘಾತ ನಡೆದ ಸಂದರ್ಭದಲ್ಲಿ ವಾಹನ ಚಾಲಕ ಬ್ರೇಕ್ ಹಾಕುತ್ತಾನೆ. ಆದರೆ ಈ ಘಟನೆಯಲ್ಲಿ ಟ್ರಕ್ ಚಾಲಕ ಅಪಘಾತ ಸಂಭವಿಸಿದ ನಂತರವೂ ವಾಹನವನ್ನು ನಿಲ್ಲಿಸದೆ ಚಲಾಯಿಸುತ್ತಲೇ ಇದ್ದ. ನಮ್ಮ ಕಾರು ರಸ್ತೆ ವಿಭಜಕ್ಕೆ ಬಡಿದು ನಿಂತಾಗಲಷ್ಟೇ ಆತ ಬ್ರೇಕ್ ಹಾಕಿದ್ದ ಎಂದು ತೊಗಾಡಿಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಘಟನೆಯ ಹಿಂದೆ ತನ್ನನ್ನು ಹತ್ಯೆ ಮಾಡುವ ಷಡ್ಯಂತ್ರವಿರುವ ಶಂಕೆಯಿದ್ದು, ಈ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ತೊಗಾಡಿಯ ಮನವಿ ಮಾಡಿದ್ದಾರೆ. ಝಡ್ ಪ್ಲಸ್ ಭದ್ರತೆ ಹೊಂದಿರುವ ತೊಗಾಡಿಯ ಸಾಮಾನ್ಯವಾಗಿ ಬಿಗಿ ಭದ್ರತೆಯ ಮಧ್ಯೆ ಪ್ರಯಾಣಿಸುತ್ತಾರೆ. ಅವರ ವಾಹನದ ಮುಂದೆ ಒಂದು ವಾಹನ ಚಲಿಸಿದರೆ ಹಿಂದೆ ಇನ್ನೊಂದು ಹಿಂಬಾಲಕ ವಾಹನವಿರುತ್ತದೆ. ಆದರೆ ಬುಧವಾರದಂದು ಈ ವಾಹನಗಳು ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆಡಳಿತವರ್ಗದಲ್ಲಿರುವ ಯಾರೋ ಒಬ್ಬರು ಸ್ಥಳೀಯಾಡಳಿತಕ್ಕೆ ಅಪೂರ್ಣ ಸೂಚನೆಯನ್ನು ನೀಡಿದಂತೆ ತೋರುತ್ತದೆ. ಸ್ಥಳೀಯಾಡಳಿತಕ್ಕೆ ನೀಡಿರುವ ಲಿಖಿತ ಸೂಚನೆಯಲ್ಲಿ ಹಿಂಬಾಲಕ ವಾಹನವನ್ನು ಒದಗಿಸುವ ಕುರಿತು ತಿಳಿಸಿರಲಿಲ್ಲ. ಇಂಥ ಅಪೂರ್ಣ ಸೂಚನೆಯನ್ನು ನೀಡಿರುವುದಾದರೂ ಯಾರು ಮತ್ತು ಯಾಕೆ ಎಂಬುದು ನನ್ನ ಪ್ರಶ್ನೆ. ಈ ರೀತಿ ಹಿಂದೆ ಎಂದೂ ನಡೆದಿಲ್ಲ ಎಂದು ತೊಗಾಡಿಯ ತಿಳಿಸಿದ್ದಾರೆ. ಜನವರಿ 15ರಂದು ಪ್ರವೀಣ್ ತೊಗಾಡಿಯ ಇದ್ದಕ್ಕಿದ್ದಂತೆ ಅಹ್ಮದಾಬಾದ್ನಿಂದ ನಾಪತ್ತೆಯಾಗಿದ್ದರು. ನಂತರ ಪ್ರತ್ಯಕ್ಷವಾದ ಅವರು ನನ್ನನ್ನು ಎನ್ಕೌಂಟರ್ ಮಾಡಿ ಕೊಲ್ಲುವ ಸಂಚು ರೂಪಿಸಲಾಗಿದೆ ಎಂದು ಮಾಧ್ಯಮಗಳ ಮುಂದೆ ಅಲವತ್ತುಕೊಂಡಿದ್ದರು.