ಸುಪ್ರೀಂಕೋರ್ಟ್ ಗೆ ಅವಮಾನ ಮಾಡಿದ ರವಿಶಂಕರ್: ಉವೈಸಿ ಕಿಡಿ
ಹೊಸದಿಲ್ಲಿ, ಮಾ.7: ಅಯೋಧ್ಯೆ ವಿವಾದದ ಕುರಿತು ನೀಡಿರುವ ಹೇಳಿಕೆಗಾಗಿ ರವಿಶಂಕರ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಅಖಿಲ ಭಾರತ ಮಜ್ಲಿಸ್ ಇ ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ)ನ ಮುಖ್ಯಸ್ಥ ಅಸಾದುದ್ದೀನ್ ಉವೈಸಿ, ಈ ಹೇಳಿಕೆಯಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ಅವಮಾನವಾಗಿದೆ ಎಂದು ತಿಳಿಸಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ಮುಂದಿನ ಲೋಕಸಭಾ ಚುನಾವಣೆ ನಡೆಯುವವರೆಗೆ ನಡೆಸಬಾರದು ಎಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಇಸ್ಲಾಂ ಪ್ರಕಾರ ವಿವಾದಿತ ಪ್ರದೇಶದಲ್ಲಿ ನೀವು ಪ್ರಾರ್ಥಿಸುವಂತಿಲ್ಲ. ಹಾಗಾಗಿ ಅಲ್ಲಿ ಮಸೀದಿ ನಿರ್ಮಿಸಲು ಸಾಧ್ಯವಿಲ್ಲ. ಈ ರೀತಿ ಎಲ್ಲರೂ ಗೆದ್ದಂತೆ ಎಂದು ರವಿಶಂಕರ್ ಸುದ್ದಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು. “ನ್ಯಾಯಾಲಯವು ಮಂದಿರದ ವಿರುದ್ಧ ತೀರ್ಪು ನೀಡಿದರೆ ರಕ್ತಪಾತವೇ ನಡೆಯಬಹುದು. ಬಹುಸಂಖ್ಯಾತ ಹಿಂದೂಗಳು ಅದಕ್ಕೆ ಅವಕಾಶ ಮಾಡುತ್ತಾರೆ ಎಂದು ನೀವು ಭಾವಿಸುತ್ತೀರ?, ಅವರು ಮುಸ್ಲಿಂ ಸಮುದಾಯದ ವಿರುದ್ಧ ತಿರುಗಿಬೀಳುತ್ತಾರೆ” ಎಂದು ರವಿಶಂಕರ್ ತಿಳಿಸಿದ್ದರು. ಈ ರೀತಿಯ ಹೇಳಿಕೆ ನೀಡುವ ಮೂಲಕ ರವಿಶಂಕರ್ ನ್ಯಾಯಾಲಯದ ಅವಮಾನ ಮಾಡಿದ್ದಾರೆ ಎಂದು ಉವೈಸಿ ಆರೋಪಿಸಿದ್ದಾರೆ. ಒಂದು ಸಮುದಾಯದ ಪರ ತೀರ್ಪು ಬರದಿದ್ದರೆ ಭಾರತವು ಸಿರಿಯದಂತೆ ಆಗಲಿದೆ ಎಂಬ ರವಿಶಂಕರ್ ಅವರ ಹೇಳಿಕೆಯ ನಂತರ ಘನ ನ್ಯಾಯಾಲಯವು ಈ ಪ್ರಕರಣದ ವಿಚಾರಣೆಯನ್ನು ಮುಂದಿನ ಲೋಕಸಭಾ ಚುನಾವಣೆ ನಡೆಯುವವರೆಗೆ ನಡೆಸಬಾರದು. ಯಾಕೆಂದರೆ ಅಯೋಧ್ಯಾ ವಿಷಯದಲ್ಲಿ ರಾಜಕೀಯ ನಡೆಸಲಾಗುತ್ತಿದೆ ಎಂದು ಉವೈಸಿ ಅಭಿಪ್ರಾಯಪಟ್ಟಿದ್ದಾರೆ. ರವಿಶಂಕರ್ ಅವರ ಹೇಳಿಕೆ ಅವರು ಶಾಂತಿಯನ್ನು ಬಯಸುವ ವ್ಯಕ್ತಿಯಲ್ಲ ಮತ್ತು ಅವರಿಗೆ ಸಂವಿಧಾನದ ಮೇಲೆ ನಂಬಿಕೆಯಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ಉವೈಸಿ ತಿಳಿಸಿದ್ದಾರೆ.