ಮದುವೆ ಅನೂರ್ಜಿತಗೊಳಿಸಿದ್ದ ಕೇರಳ ಹೈಕೋರ್ಟ್ ಆದೇಶವನ್ನು ತಳ್ಳಿಹಾಕಿದ ಸುಪ್ರಿಂ ಕೋರ್ಟ್
ಕಾನೂನು ಹೋರಾಟದಲ್ಲಿ ಗೆದ್ದ ಹಾದಿಯಾ-ಶಫಿನ್
ಹೊಸದಿಲ್ಲಿ,ಮಾ.8: ಗುರುವಾರ ಮಹತ್ವದ ಬೆಳವಣಿಗೆಯೊಂದರಲ್ಲಿ ಸರ್ವೋಚ್ಚ ನ್ಯಾಯಾಲಯವು ಕೇರಳ ನಿವಾಸಿ ಹಾದಿಯಾ ತನ್ನ ಪತಿಯೊಂದಿಗೆ ಬಾಳಲು ಸ್ವತಂತ್ರಳಾಗಿದ್ದಾರೆ ಎಂದು ತೀರ್ಪು ನೀಡಿದೆ. ಹಾದಿಯಾ ಇಸ್ಲಾಂ ಧರ್ಮಕ್ಕೆ ಮತಾಂತರ ಗೊಂಡ ಬಳಿಕ ಶಫಿನ್ ಜಹಾನ್ ಜೊತೆ ಮಾಡಿಕೊಂಡಿದ್ದ ಮದುವೆಯನ್ನು ಅನೂರ್ಜಿತಗೊಳಿಸಿದ್ದ ಕೇರಳ ಉಚ್ಚ ನ್ಯಾಯಾಲಯದ ಆದೇಶವನ್ನು ಅದು ತಳ್ಳಿಹಾಕಿದೆ. ಹಾದಿಯಾಳ ಮದುವೆಯ ವಿಷಯದಲ್ಲಿ ಉಚ್ಚ ನ್ಯಾಯಾಲಯವು ಹಸ್ತಕ್ಷೇಪ ಮಾಡಬಾರದಿತ್ತು ಎಂದು ಅದು ಟೀಕಿಸಿದೆ.
ಅಖಿಲಾ ಯಾನೆ ಹಾದಿಯಾಳ ತಂದೆ ಕೆ.ಎಂ.ಅಶೋಕನ್ ಸಲ್ಲಿಸಿದ್ದ ದೂರಿನ ಮೇರೆಗೆ ಕೇರಳ ಉಚ್ಚ ನ್ಯಾಯಾಲಯವು ಅವರ ವಿವಾಹವನ್ನು ರದ್ದುಗೊಳಿಸಿತ್ತು. ತನ್ನ ಪುತ್ರಿಯ ‘ಬ್ರೇನ್ ವಾಷ್’ ಮಾಡಲಾಗಿದೆ ಮತ್ತು ‘ಲವ್ ಜಿಹಾದ್’ನ ಬಲಿಪಶುವಾಗಿ ಆಕೆಯನ್ನು ಇಸ್ಲಾಮ್ಗೆ ಮತಾಂತರಿಸಲಾಗಿದೆ ಎಂದು ಅಶೋಕನ್ ಆರೋಪಿಸಿದ್ದರು.
ತನ್ನ ಹೆತ್ತವರ ಮನೆಯಲ್ಲಿ ವಾಸವಿರುವಂತೆ ಉಚ್ಚ ನ್ಯಾಯಾಲಯವು ಹಾದಿಯಾಗೆ ಆದೇಶಿಸಿತ್ತು. ತಾನು ಹಲವಾರು ತಿಂಗಳುಗಳನ್ನು ಅಕ್ಷರಶಃ ಬಂಧನದಲ್ಲಿ ಮತ್ತು ಪೊಲೀಸರ ನಿಗಾದಲ್ಲಿ ಕಳೆದಿರುವುದಾಗಿ ಹಾದಿಯಾ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದರು.
ಕಳೆದ ವರ್ಷದ ನವೆಂಬರ್ನಲ್ಲಿ ಹಾದಿಯಾಳನ್ನು ತನ್ನ ಬಳಿ ಕರೆಸಿಕೊಂಡು ಆಕೆಯೊಂದಿಗೆ ಖುದ್ದಾಗಿ ಮಾತನಾಡಿದ್ದ ಸರ್ವೋಚ್ಚ ನ್ಯಾಯಾಲಯವು, ತಮಿಳುನಾಡಿನ ಸೇಲಮ್ನಲ್ಲಿರುವ ಹೋಮಿಯೊಪತಿ ಕಾಲೇಜಿನಲ್ಲಿ ತನ್ನ ಇಂಟರ್ನ್ಶಿಪ್ ಪೂರ್ಣ ಗೊಳಿಸಲು ಆಕೆಗೆ ಅವಕಾಶ ನೀಡಬೇಕು ಎಂದು ಆದೇಶಿಸಿತ್ತು. ತನ್ನ ಸಂಪೂರ್ಣ ಸ್ವಾತಂತ್ರ್ಯವನ್ನು ಮರಳಿಸಬೇಕು ಎಂದು ನಂತರ ಮನವಿ ಮಾಡಿಕೊಂಡಿದ್ದ ಹಾದಿಯಾ, ತಾನು ಪೊಲೀಸರ ನಿಗಾದಲ್ಲಿದ್ದೇನೆ ಮತ್ತು ಪತಿಯಿಂದ ದೂರವಿದ್ದೇನೆ ಎಂದು ಬೆಟ್ಟು ಮಾಡಿದ್ದರು.
ತಮ್ಮ ಮದುವೆಯನ್ನು ರದ್ದುಗೊಳಿಸಿದ್ದ ಕೇರಳ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಶಫಿನ್ ಜಹಾನ್ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ ಅವರನ್ನೊಳಗೊಂಡ ಪೀಠವು ಇಂದು ತನ್ನ ತೀರ್ಪನ್ನು ಪ್ರಕಟಿಸಿತು.
‘ಲೈಂಗಿಕ ದಾಸಿ ಅಥವಾ ಮಾನವ ಬಾಂಬ್’ ಆಗಿ ಬಳಸಲು ಸಿರಿಯಾದಲ್ಲಿ ಭಯೋತ್ಪಾದಕರ ಹಿಡಿತದಲ್ಲಿರುವ ಪ್ರದೇಶಗಳಿಗೆ ತನ್ನ ಪುತ್ರಿಯನ್ನು ಸಾಗಿಸುವ ಹುನ್ನಾರವು ತನ್ನ ಪ್ರಯತ್ನಗಳಿಂದಾಗಿ ವಿಫಲಗೊಂಡಿದೆ ಎಂದು ಅಶೋಕನ್ ಈ ವಾರದ ಪೂರ್ವಾರ್ಧದಲ್ಲಿ ಅರ್ಜಿಯೊಂದರಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದರು.
ತಾನು ಸ್ವಂತ ಇಚ್ಛೆಯಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ ಮತ್ತು ಮುಸ್ಲಿಂ ಆಗಿ ಬದುಕಲು ಬಯಸಿದ್ದೇನೆ. ಶಫಿನ್ ಜಹಾನ್ನನ್ನು ತಾನು ಸ್ವಂತ ಇಚ್ಛೆಯಿಂದ ವಿವಾಹವಾಗಿದ್ದೇನೆ ಮತ್ತು ಆತನ ಪತ್ನಿಯಾಗಿ ಬಾಳಲು ನ್ಯಾಯಾಲಯದ ಅನುಮತಿ ಯನ್ನು ಕೋರುತ್ತಿದ್ದೇನೆ ಎಂದು ಹಾದಿಯಾ ಕಳೆದ ತಿಂಗಳು ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಪ್ರಮಾಣಪತ್ರಕ್ಕೆ ಉತ್ತರವಾಗಿ ಅಶೋಕನ್ ಈ ಅರ್ಜಿಯನ್ನು ಸಲ್ಲಿಸಿದ್ದರು.
ಹಾದಿಯಾ ವಯಸ್ಕಳಾಗಿದ್ದಾಳೆ, ಹೀಗಾಗಿ ಶಫೀನ್ ಜಹಾನ್ ಜೊತೆ ಆಕೆಯ ವಿವಾಹವನ್ನು ಪ್ರಶ್ನಿಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಈ ವರ್ಷ ವಿಚಾರಣೆಯ ಸಂದರ್ಭದಲ್ಲಿ ಹೇಳಿತ್ತು. ಶಫೀನ್ ಜಹಾನ್ ಭಯೋತ್ಪಾದಕರೊಂದಿಗೆ ನಂಟು ಹೊಂದಿದ್ದಾನೆ ಎಂಬ ಆರೋಪದ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆಯು ತನ್ನ ತನಿಖೆಯನ್ನು ಮುಂದುವರಿಸಬಹುದು, ಆದರೆ ಅದು ಹಾದಿಯಾಳ ವಿವಾಹದ ಶಾಸನಬದ್ಧತೆಯನ್ನು ತನಿಖೆ ಮಾಡುವಂತಿಲ್ಲ ಎಂದೂ ಅದು ಸ್ಪಷ್ಟಪಡಿಸಿತ್ತು.