ಬಲಪಂಥೀಯ ಶಕ್ತಿಗಳ ನೇರ ಟಾರ್ಗೆಟ್ ಸಂವಿಧಾನವೇ ಆಗಿದೆ: ಡಾ. ಮನಿಷಾ ಗುಪ್ತಾ
![ಬಲಪಂಥೀಯ ಶಕ್ತಿಗಳ ನೇರ ಟಾರ್ಗೆಟ್ ಸಂವಿಧಾನವೇ ಆಗಿದೆ: ಡಾ. ಮನಿಷಾ ಗುಪ್ತಾ ಬಲಪಂಥೀಯ ಶಕ್ತಿಗಳ ನೇರ ಟಾರ್ಗೆಟ್ ಸಂವಿಧಾನವೇ ಆಗಿದೆ: ಡಾ. ಮನಿಷಾ ಗುಪ್ತಾ](https://www.varthabharati.in/sites/default/files/images/articles/2018/03/8/01.jpg)
ಶಿವಮೊಗ್ಗ, ಮಾ. 8: 'ಬಲಪಂಥೀಯ ಶಕ್ತಿಗಳ ಅಬ್ಬರದಿಂದ ಗೌರಿ ಲಂಕೇಶ್, ಕಲಬುರ್ಗಿ, ಪನ್ಸಾರೆಯಂತಹ ವಿಚಾರವಾದಿಗಳ ಹತ್ಯೆಯಾಗಿದೆ. ಮುಸ್ಲಿಮರು, ಕ್ರಿಶ್ಚಿಯನ್ನರು, ದಲಿತರು ದಾಳಿಗೊಳಗಾಗುತ್ತಿದಾರೆ ಎಂದು ನಮಗೆ ಅನ್ನಿಸಬಹುದು. ಆದರೆ ಆ ಶಕ್ತಿಯ ನೇರ ಟಾರ್ಗೆಟ್ ಸಂವಿಧಾನವಾಗಿದೆ' ಎಂದು ಪ್ರಗತಿಪರ ಚಿಂತಕಿ ಡಾ. ಮನಿಷಾ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯಸಭೆಯಲ್ಲಿ ಇವರಿಗೆ ಬಹುಮತ ಬಂದ ತತ್ಕ್ಷಣವೇ, ಸಂವಿಧಾನ ಉಲ್ಲಂಘಿಸಿ ಹಿಂದೂ ಧಾರ್ಮಿಕ ಮೂಲಭೂತವಾದ ಹೇರಲು ಸಿದ್ದರಾಗಿದ್ದಾರೆ. ಇದು ಹೀಗೆ ಮುಂದುವರಿದರೆ ಕೆಲ ಮುಸ್ಲಿಂ, ಕ್ರಿಶ್ಚಿಯನ್, ಬುದ್ದಿಸ್ಟ್ ಮೂಲಭೂತವಾದಿ ದೇಶಗಳ ಪರಿಸ್ಥಿತಿ ನಮ್ಮ ದೇಶಕ್ಕೂ ಬರಬಹುದು. ಆ ಪರಿಸ್ಥಿತಿ ನಮಗೆ ಬರಬಾರದು. ಹಾಗಾಗಿ ಸಂವಿಧಾನದಲ್ಲಿ ಧರ್ಮಕ್ಕೆ ಆಸ್ಪದವಿರಬಾರದು. ನಾನು ಬದುಕಿರುವವರೆಗೂ ಸಂವಿಧಾನವನ್ನು ಬದಲಿಸಲು, ತಿರುಚಲು ಬಿಡುವುದಿಲ್ಲ. ಅದು ನನ್ನ ಶವದ ಮೇಲೆಯೇ ಎಂದು ನಾವು ಶಪಥ ಮಾಡಬೇಕು ಎಂದು ಕರೆ ನೀಡಿದರು.
ಹೋರಾಟದ ಫಲ: ಮಹಿಳಾ ದಿನಾಚರಣೆ ಎಂದರೇನು? ಇದನ್ನು ಯಾವ ರೀತಿ ನಾವು ಅರ್ಥ ಮಾಡಿಕೊಳ್ಳುತ್ತೇವೆ? ವಜ್ರಾಭರಣಗಳ ಮೇಲೆ 25% ಡಿಸ್ಕೌಂಟ್ ಸಿಗುವುದೇ? ಇಲ್ಲ ನಾವು ಫೇರ್ ಅಂಡ್ ಲವ್ಲಿ ಹಚ್ಚುವುದೆ ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದ ಅವರು, 'ದುಡಿಯುವ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ, ಕೆಲಸದ ಅವಧಿ ಕಡಿಮೆ ಮಾಡಿ 12 ಗಂಟೆಗೆ ಸೀಮಿತಗೊಳಿಸಲು, ಶೋಷಣೆ ತಪ್ಪಿಸಲು ನಿರಂತರವಾಗಿ ಹೋರಾಡಿ ಜಯಶಾಲಿಯಾದ ದಿನವಾಗಿದೆ. ಈ ಮುಷ್ಕರ ಯಶ್ವಸಿಯಾಗಲು ಕಾರಣವೆಂದರೆ ಎಲ್ಲಾ ವರ್ಗದ ಮಹಿಳೆಯರು ಒಟ್ಟಾಗಿ ಹೋರಾಟ ನಡೆಸಿದ್ದಾಗಿದೆ ಎಂದರು.
ಇಂದಿನ ನಮ್ಮ ಮುಂದಿರುವ ಸವಾಲುಗಳು ಯಾವುವು? ಮಹಿಳಾ ಚಳವಳಿ ಪ್ರಭುತ್ವಕ್ಕೆ, ಮಾರುಕಟ್ಟೆಗೆ ಉಪಯೋಗವಾಬಾರದು. ಬದಲಿಗೆ ಶೋಷಿತರಿಗೆ ದನಿಯಾಗಬೇಕು. ಮಹಿಳಾ ಚಳವಳಿಗೆ ಲಾಭವಾಗುವಂತೆ ನಾವು ಮಾಡಬೇಕು. ಎಲ್ಲಾ ಚಳವಳಿಯಲ್ಲಿಯೂ ಸ್ತ್ರಿವಾದಿ ಹೋರಾಟವೂ ಅದರ ಮುಖ್ಯಧಾರೆಯಾಗುವುದು ಹೇಗೆ ಎಂದು ಚಿಂತಿಸಬೇಕಿದೆ ಎಂದರು.
ಸಿಂಹಸ್ವಪ್ನ: ಗೌರಿ ಲಂಕೇಶ್ರವರು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ ಮಾನಸಿಕವಾಗಿ ನಮ್ಮೊಂದಿಗಿದ್ದಾರೆ. ಅವರನ್ನು ಕೊಂದವರಿಗೆ ಸತ್ತ ಮೇಲೂ ಅವರು ಸಿಂಹಸ್ವಪ್ನವಾಗಿದ್ದಾರೆ. ನಾವು ಸತ್ತರೂ ಕೂಡ ನಿಮಗೆ ಹೆಚ್ಚು ಅಪಾಯಕಾರಿಯಾಗುತ್ತೆವೆ ಎಂದು ಕೊಲೆಗಡುಕರಿಗೆ ಎಚ್ಚರಿಕೆ ಕೊಡಬೇಕಿದೆ ಎಂದು ಕರೆ ನೀಡಿದರು.
ಪ್ರಸ್ತುತ ಸಂವಿಧಾನವನ್ನು ಜಾರಿಯಾಗಲು ಪಟ್ಟಭದ್ರರು ಬಿಡುತ್ತಿಲ್ಲ. ಬದಲಿಗೆ ಎಲ್ಲಾ ರಂಗಗಳನ್ನು ಖಾಸಗೀಕರಣ ಮಾಡುತ್ತಿದ್ದಾರೆ. ಇದರಿಂದ ಶೋಷಿತರು ಮತ್ತಷ್ಟು ಶೋಷಿಸಲ್ಪಡುತ್ತಿದ್ದಾರೆ. ಇಂದು ಮೀಸಲಾತಿಯ ವಿರುದ್ಧದ ಮಾತುಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಕೆಲವರು ಮೀಸಲಾತಿ ಎಂದ ತಕ್ಷಣ ಕಿರಿಕಿರಿಗೊಳ್ಳುತ್ತಾರೆ. ಅವರಿಗೆ ಮೂರ್ನಾಲ್ಕು ತಲೆಮಾರುಗಳಿಂದ ಶಿಕ್ಷಣವನ್ನು ನೀಡದೇ ಒಂದು ಸಮುದಾಯವನ್ನು ಶೋಷಿಸಿದರೆ ಆಗುವ ಹಾನಿ ಎಷ್ಟು ಎಂಬುದರ ಅರಿವಿಲ್ಲವಾಗಿದೆ ಎಂದರು.
ಖ್ಯಾತ ಲೇಖಕಿ ಉಷಾ ಅವರು ಸಮಾವೇಶವನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ ಹಿರಿಯ ಸಾಹಿತಿ ಡಿ.ಬಿ.ರಜಿಯಾ ಪುಸ್ತಕ ಬಿಡುಗಡೆ ಮಾಡಿದರು. ಡಾ. ಸಬಿತಾ ಬನ್ನಾಡಿ ಉಪಸ್ಥಿತರಿದ್ದರು.
'ಕನಸು ಕಾಣುತ್ತಲೇ ಇರಬೇಕು'
'ಅವರು ನಮ್ಮನ್ನು ಕೊಲ್ಲಲೇಬೇಕೆಂದಿಲ್ಲ. ಬದಲಿಗೆ ನಾವು ಹೋರಾಡುವುದನ್ನು, ಹಾಡುವುದನ್ನು, ಬದುಕನ್ನು ಪ್ರೀತಿಸುವುದನ್ನು ನಿಲ್ಲಿಸಿದರೆ ಸಾಕು. ಸತ್ತ ಹಾಗೆಯೇ ಆಗುತ್ತೇವೆ ಎಂಬುದನ್ನು ಮರೆಯಬಾರದು. ಹಾಗಾಗಿ ನಾವು ರೈತ ಚಳವಳಿ, ಸಮಾಜವಾದಿ ಚಳವಳಿ ಮತ್ತು ಕಾರ್ಮಿಕ ಚಳವಳಿಯ ಭಾಗ ಎಂದು ಹೇಳಬೇಕು. ನಾವು ಕನಸು ಕಾಣುತ್ತಲೇ ಇರುವುದನ್ನು, ಹಾಡುತ್ತಲೇ ಇರುವುದನ್ನು ಮುಂದುವರೆಸಬೇಕಿದೆ.
ಸ್ವಾತಂತ್ರ್ಯ ಚಳವಳಿಯ ಆಶಯಗಳು ಈಡೇರುತ್ತಿಲ್ಲ. ಪ್ರಸ್ತುತ ಬಿಳಿಯ ದೊರೆಗಳ ಬದಲಿಗೆ ಕಂದು ದೊರೆಗಳು ಬಂದು ಕುಳಿತಿದಾರೆ. ಅಂದರೆ ನಾವೇ ಆರಿಸಿ ಕಳಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು, ವೈದ್ಯರು ಎಲ್ಲರೂ ನಮ್ಮಿಂದಲೇ ಬದುಕುತ್ತಿದ್ದಾರೆ. ಆದರೆ ಒಬ್ಬ ಆದಿವಾಸಿ ಅಥವಾ ಒಬ್ಬ ಟ್ರಾನ್ಸ್ ಜೆಂಡರ್ ಅನ್ಯಾಯವಾದಾಗ ಈ ಸ್ಥಳಗಳಿಗೆ ಹೋಗಲು ಸಾಧ್ಯವೇ? ಒಬ್ಬ ಟ್ರಾನ್ಸ್ ಜೆಂಡರ್ ತಾನು ಲೈಂಗಿಕ ಅಲ್ಪ ಸಂಖ್ಯಾತರಾದ ಕಾರಣಕ್ಕೆ ಅನ್ಯಾಯವಾದರೆ ಪೋಲಿಸ್ ಸ್ಟೆಷನ್ಗೆ ಹೋದರೆ ಅವರ ಮೇಲೆಯೇ ಅತ್ಯಾಚಾರ ಮಾಡುವಂತಹ ಸಂದರ್ಭವಿದೆ. ಇಂತಹ ಸಂದರ್ಭದಲ್ಲಿ ನಾವು ಏನು ಮಾಡಬೇಕು? ನಾವು ಗಡಿಯಾರವನ್ನು ಬದಲಿಸಬೇಕಿದೆ. 24 ಗಂಟೆಯಿಂದ 48 ಗಂಟೆಗೆ ಬದಲಿಸಬೇಕು. ಹೇಗೆಂದರೆ ನಾವು ಒಬ್ಬರು ಇಬ್ಬರಾಗಬೇಕು, ಇಬ್ಬರು ನಾಲ್ಕು ಜನ ಆಗಬೇಕು. ಆಗ ಗಡಿಯಾರವನ್ನು ಬದಲಿಸಬಹುದು' ಎಂದು ಪ್ರಗತಿಪರ ಚಿಂತಕಿ ಡಾ. ಮನಿಷಾ ಗುಪ್ತಾ ತಿಳಿಸಿದ್ದಾರೆ.
ಶುಭಕೋರಿದ ಪ್ರಕಾಶ್ ರೈ
ಮಹಿಳಾ ಸಮಾವೇಶಕ್ಕೆ ಪ್ರಗತಿಪರ ಚಿಂತಕ, ಖ್ಯಾತ ನಟ ಪ್ರಕಾಶ್ ರೈ ಅವರು ಶುಭಕೋರಿ ಸಂದೇಶ ಕಳುಹಿಸಿದರು.
"ನಿಮ್ಮ ಸಮಾವೇಶ ನನ್ನದೂ ಹೌದು, ನನ್ನ ಪ್ರಶ್ನೆಗಳು ನಿಮ್ಮವೂ ಹೌದು, ಮುಂದಿನ ದಾರಿ ಮುಳ್ಳಿನದ್ದೇ ಇರಲಿ. ಅದನ್ನು ಗುಲಾಬಿ ಹಾದಿಯನ್ನಾಗಿ ಮಾರ್ಪಡಿಸೋಣ" ಎಂದು ರೈ ಕಳುಹಿಸಿದ್ದ ಸಂದೇಶವನ್ನು ಸಮಾವೇಶದಲ್ಲಿ ಪ್ರಸ್ತುತ ಪಡಿಸಲಾಯಿತು. ಪ್ರಕಾಶ್ ರೈ ಅವರ ಪರವಾಗಿ ಪತ್ರಕರ್ತ ಎನ್.ರವಿಕುಮಾರ್ ಅವರು ಹೂವು ಗುಚ್ಛವನ್ನು ಸಮಾವೇಶದ ಸಂಘಟಕರಿಗೆ ಅರ್ಪಿಸಿ ಶುಭಕೋರಿದರು.