ಕೊಳ್ಳೇಗಾಲ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ
![ಕೊಳ್ಳೇಗಾಲ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಕೊಳ್ಳೇಗಾಲ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ](https://www.varthabharati.in/sites/default/files/images/articles/2018/03/8/1111.jpg)
ಕೊಳ್ಳೇಗಾಲ, ಮಾ.08: ಮಹಿಳಾ ಸಬಲೀಕರಣದಿಂದ ರಾಷ್ಟ್ರದ ಸಬಲೀಕರಣ ಎಂಬ ಅಂತಿಮ ಸತ್ಯವನ್ನು ಎಲ್ಲರೂ ಅರಿತು ಮಹಿಳೆಯರನ್ನು ಸಬಲರನ್ನಾಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯ ಪ್ರವೃತ್ತರಾಗಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರೂ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರೂ ಆದ ಎಸ್.ಜೆ. ಕೃಷ್ಣ ಹೇಳಿದರು.
ನಗರದ ಗುರುಭವನದಲ್ಲಿ ಗುರುವಾರ ಶ್ರೀ ಮಲೈ ಮಹದೇಶ್ವರ ಮಹಿಳಾ ಕಳಂಜಿಯ ಒಕ್ಕೂಟ, ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರ ಬಗ್ಗೆ ಅನುಕಂಪಕ್ಕಿಂತ, ಅವರ ಅಭಿವೃದ್ಧಿಗೆ ಪೂರಕವಾದ ಪ್ರೋತ್ಸಾಹ ಅಗತ್ಯ ಎಂದ ಅವರು ಮಹಿಳಾ ಸಬಲೀಕರಣ ಯೋಜನೆಗಳ ಅನುಷ್ಠಾನದಲ್ಲಿ ಇಚ್ಚಾಸಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಮಹಿಳಾ ದಿನಾಚರಣೆ ಒಂದು ದಿನದ ದಿನಾಚರಣೆಯಾಗದೆ ದಿನ ನಿತ್ಯವೂ ಮಹಿಳಾ ದಿನಾಚರಣೆ ಆಗಬೇಕು ಎಂದು ತಿಳಿಸಿದರು.
ಮಹಿಳೆಯರು ತಮ್ಮ ಹಕ್ಕುಳ ಬಗ್ಗೆ ಅರಿವನ್ನು ಪಡೆದುಕೊಂಡು ಸದ್ಬಳಕೆಗೆ ಮುಂದಾಗಬೇಕು. ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ಮಹಿಳೆಯರಿಗೆ ಉಚಿತ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮಗಳನ್ನು ಮಹಿಳೆಯರು ಪಡೆಯಲು ಅನುಸರಿಸ ಬೇಕಾದ ಕ್ರಮಗಳ ಕುರಿತು ಅವರು ಮಾಹಿತಿ ನೀಡಿದರು.
ಸಾರ್ವತ್ರಿಕ ರಜೆ ಘೋಷಿಸಿ: ಧಾನ್ ಫೌಂಡೇಷನ್ ಮೈಸೂರು ವಲಯ ಸಂಯೋಜಕಿ ಸಿಂಧು ಮಾತನಾಡಿ ದೇಶದಲ್ಲಿ ವರ್ಷವಿಡೀ ನಡೆಯುವ ವಿವಿಧ ನಾಡ ಹಾಗೂ ರಾಷ್ಟ್ರೀಯ ಹಬ್ಬಗಳಿಗೆ, ಜಯಂತಿಗಳಿಗೆ ರಜೆಯನ್ನು ನೀಡಲಾಗಿದೆ. ಆದರೆ ಸಮಾಜದ ಕಣ್ಣಾಗಿರುವ ಮಹಿಳೆಯರ ಮಹತ್ವದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಈವರೆಗೆ ಯಾವುದೇ ಸರ್ಕಾರ ರಜೆ ನೀಡುವ ಬಗ್ಗೆ ಚಿಂತಿಸದಿರುವುದು ದೌರ್ಭಾಗ್ಯ ಎಂದರು.
ಮಹಿಳೆಯರ ಬಗ್ಗೆ ಕೇವಲ ಅನುಕಂಪದ ಮಾತುಗಳನ್ನಾಡುವ ಮುಖಂಡರೂ ಸಹ ಈ ವರೆಗೂ ಮಹಿಳೆಯರು ಬಹಳ ಸಂತೋಷ, ಸಂಭ್ರಮ ಸಡಗರಗಳಿಂದ ಮಹಿಳಾ ದಿನಾಚರಣೆ ಆಚರಿಸಲು ರಜೆ ಘೋಷಿಸಲು ಮುಂದಾಗದಿರುವುದು ಮಹಿಳೆಯರ ಮೇಲೆ ಇವರಿಗೆ ಇರುವ ಕಾಳಜಿಯನ್ನು ತೋರಿಸುತ್ತದೆ. ಮುಂದಿನ ವರ್ಷಗಳಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಾರ್ವತ್ರಿಕ ರಜೆ ಘೋಷಿಸಿ ಮಹಿಳೆಯರು ಸಂಭ್ರಮದಿಂದ ಈ ದಿನವನ್ನು ಆಚರಿಸಲು ಅವಕಾಶ ಮಾಡಲು ಸರ್ಕಾರ ಮುಂದಾಗಬೇಕು ಎಂದು ಅವರು ಮನವಿ ಮಾಡಿದರು.
ಹಿರಿಯ ವಕೀಲರಾದ ಡಿ. ವೆಂಕಟಾಚಲ ಮಾತನಾಡಿ ತಂದೆ ತಾಯಿ ಆಶ್ರಯದಲ್ಲಿ ಮಗಳಾಗಿ, ಗಂಡನ ಆಶ್ರಯದಲ್ಲಿ ಹೆಂಡತಿಯಾಗಿ, ಮಕ್ಕಳ ಆಶ್ರಯದಲ್ಲಿ ತಾಯಿಯಾಗಿ, ಹೆಣ್ಣು ಬದುಕಿನುದ್ದಕ್ಕೂ ಆವಲಂಬಿತ ಜೀವನ ನಡೆಸುತ್ತಾ ಬಂದಿದ್ದಾಳೆ. ಆದರೆ ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದು, ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವಂತಾಗಬೇಕಿದೆ ಎಂದು ಹೇಳಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿಪ್ರಿಯಾ ಪರಿಸರದ ಮಹತ್ವ ಕುರಿತು ಮಾತನಾಡಿ ಮಹಿಳೆಯರು ತಮ್ಮ ಮನೆಗಳಲ್ಲಿ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆ ಕೊಡುಗೆ ನೀಡಬೇಕು ಎಂದು ತಿಳಿಸಿದರು.
ತಾಲೂಕು ಪಂಚಾಯತ್ ಕೋಆರ್ಡಿನೇಟರ್ ಸ್ಟೆಲ್ಲಾಕುಮಾರಿ, ಚೆನ್ನಾಲಿಂಗನಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಪುಷ್ಪಲತಾ, ಧಾನ್ ಫೌಂಡೇಷನ್ ಕ್ಷೇತ್ರ ಸಂಯೋಜಕ ಮದನ್ ಇತರರು ಇದ್ದರು.