ಈ ಸಂಸ್ಥೆ ತನ್ನ ಗ್ರಾಹಕರಿಗೆ 400 ಕೋ.ರೂ. ವಂಚಿಸಿದ್ದು ಹೇಗೆ ಗೊತ್ತಾ ?
ಮುಂಬೈ, ಮಾ.8: ಅಧಿಕ ಬಡ್ಡಿದರದ ಆಮಿಷವೊಡ್ಡಿ ಹಲವರಿಂದ ಬೃಹತ್ ಮೊತ್ತದ ಠೇವಣಿ ಸಂಗ್ರಹಿಸಿದ ‘ಸಾಗರ್ ಇನ್ವೆಸ್ಟ್ಮೆಂಟ್’ ಎಂಬ ಸಂಸ್ಥೆಯೊಂದು 400 ಕೋಟಿ ರೂ. ವಂಚಿಸಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸಂಸ್ಥೆಯ ನಿರ್ದೇಶಕ, ಆತನ ಪತ್ನಿ ಹಾಗೂ ಇಬ್ಬರು ಬಂಧುಗಳನ್ನು ಬದ್ಲಾಪುರ ಪೊಲೀಸರು ಬಂಧಿಸಿದ್ದಾರೆ.
ಸಾಗರ್ ಸಂಸ್ಥೆಯು ಠೇವಣಿಗೆ ಶೇ.15ರಷ್ಟು ಬಡ್ಡಿ ನೀಡುವ ಆಮಿಷ ಒಡ್ಡಿದ್ದು, ಇದನ್ನು ನಂಬಿ 4,000 ಜನ ಒಟ್ಟು 400 ಕೋಟಿ ರೂ. ಠೇವಣಿ ಇರಿಸಿದ್ದರು. ಆದರೆ ಠೇವಣಿಯ ಮೇಲೆ 2017ರ ನವೆಂಬರ್ನಿಂದ ಬಡ್ಡಿ ಪಾವತಿಯಾಗಿಲ್ಲ. ಈ ಹಿನ್ನೆಲೆಯಲ್ಲಿ 300 ಠೇವಣಿದಾರರು ನೀಡಿದ ದೂರಿನ ಹಿನ್ನೆಲೆಯಲ್ಲಿ ಸಂಸ್ಥೆಯ ನಿರ್ದೇಶಕ ಶ್ರೀರಾಮ್ ಸಮುದ್ರ, ಆತನ ಪತ್ನಿ ಅನಘ ಹಾಗೂ ಇಬ್ಬರು ಬಂಧುಗಳನ್ನು ಬಂಧಿಸಿರುವುದಾಗಿ ಡಿಸಿಪಿ ಸಂದೀಪ್ ಭಾಜಿಬಾಕ್ರೆ ತಿಳಿಸಿದ್ದಾರೆ.
1988ರಿಂದ ಕಾರ್ಯಾಚರಿಸುತ್ತಿರುವ ಸಾಗರ್ ಇನ್ವೆಸ್ಟ್ಮೆಂಟ್ ಸಂಸ್ಥೆ ಸೆಬಿ ಅನುಮೋದಿತ ಸಬ್- ಬ್ರೋಕರ್ ಸಂಸ್ಥೆ ಎಂದು ಹೇಳಿಕೊಂಡಿತ್ತು. ಹೂಡಿಕೆ, ಜೀವವಿಮೆ, ನಿವೃತ್ತಿ ಬಳಿಕದ ಹೂಡಿಕೆ ಯೋಜನೆಗಳ ಕುರಿತು ಸಲಹೆ ನೀಡುವ ಕಾರ್ಯ ನಿರ್ವಹಿಸುತ್ತಿತ್ತು. ಅಲ್ಲದೆ ತನ್ನಲ್ಲಿ ಇರಿಸುವ ಠೇವಣಿಗೆ ಶೇ.15ರ ದರದಲ್ಲಿ ಬಡ್ಡಿ ನೀಡುವುದಾಗಿ ತಿಳಿಸಿತ್ತು ಎಂದು ಡಿಸಿಪಿ ವಿವರಿಸಿದ್ದಾರೆ. ಸಂಸ್ಥೆಯಲ್ಲಿ ಹೂಡಿಕೆ ಮಾಡಿ ವಂಚನೆಗೊಳಗಾದವರಲ್ಲಿ ಬಹುತೇಕರು ಹಿರಿಯ ನಾಗರಿಕರಾಗಿದ್ದಾರೆ ಎಂದು ವರದಿ ತಿಳಿಸಿದೆ.