ಅವಾಚ್ಯ ಶಬ್ದ ಬಳಸಿದ ಆರೋಪ: ರೈತನಾಯಕನಿಗೆ ಚಪ್ಪಲಿಯೇಟು ಕೊಟ್ಟ ಬಿಜೆಪಿ ಕಾರ್ಯಕರ್ತೆ
ಚೆನ್ನೈ,ಮಾ.9: ಅವಾಚ್ಯ ಶಬ್ದಗಳನ್ನು ಬಳಸಿದ ಆರೋಪದಲ್ಲಿ ಬಿಜೆಪಿ ಕಾರ್ಯಕರ್ತೆ ಯೋರ್ವಳು ರೈತಸಂಘದ ನಾಯಕನಿಗೆ ಚಪ್ಪಲಿಯಿಂದ ಥಳಿಸಿದ ಘಟನೆ ತಮಿಳುನಾಡಿನ ತೂತುಕುಡಿಯಲ್ಲಿ ನಡೆದಿದ್ದು, ಇದರ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಕಳೆದ ವರ್ಷ ದಿಲ್ಲಿಯಲ್ಲಿ ತಮಿಳುನಾಡು ರೈತರು ನಡೆಸಿದ್ದ ಪ್ರತಿಭಟನೆಯ ಮುಖವಾಗಿ ಮೂಡಿಬಂದಿದ್ದ ಪಿ.ಅಯ್ಯಕಣ್ಣು ಅವರು ಗುರುವಾರ ಸಂಜೆ ತೂತುಕುಡಿಯ ತಿರುಚೆಂಡೂರು ಮುರುಗನ್ ದೇವಸ್ಥಾನದ ಹೊರಗೆ ಕರಪತ್ರಗಳನ್ನು ವಿತರಿಸುತ್ತಿದ್ದಾಗ ಅವರನ್ನು ತಡೆದ ಬಿಜೆಪಿ ಕಾರ್ಯಕರ್ತೆ ವೆಳ್ಳೈ ಅಮ್ಮಾಳ್ ಅವರನ್ನು ‘ವಂಚಕ’ ಎಂದು ಕರೆದಿದ್ದಳು. ರಾಷ್ಟ್ರೀಯ-ದಕ್ಷಿಣ ಭಾರತ ನದಿ ಜೋಡಣೆ ರೈತರ ಸಂಘದ ಅಧ್ಯಕ್ಷರಾಗಿರುವ ಅಯ್ಯಿಕಣ್ಣು ಮಹಿಳೆಯನ್ನು ಅವಾಚ್ಯ ಶಬ್ದದಿಂದ ನಿಂದಿಸಿದ್ದು, ಇದು ಆಕೆಯನ್ನು ಕೆರಳಿಸಿತ್ತು. ಉದ್ರಿಕ್ತಗೊಂಡ ಆಕೆ ಅಯ್ಯಿಕಣ್ಣುಗೆ ತಪರಾಕಿ ನೀಡಿದ್ದು, ಇದು ವಾಗ್ಯುದ್ಧಕ್ಕೆ ಕಾರಣವಾಗಿತ್ತು. ಬಳಿಕ ಆಕೆ ಕಾಲಲ್ಲಿದ್ದ ಚಪ್ಪಲಿಯನ್ನು ತೆಗೆದು ಹೊಡೆದಿದ್ದಳು.
ಆದರೆ ತಾನು ಅವಾಚ್ಯ ಶಬ್ದವನ್ನು ಬಳಸಿದ್ದೆ ಎಂಬ ಆರೋಪವನ್ನು ನಿರಾಕರಿಸಿರುವ ಅಯ್ಯೆಕಣ್ಣು, ರೈತರ ಹೋರಾಟಕ್ಕೆ ಬೆಂಬಲವನ್ನು ಕ್ರೋಢೀಕರಿಸಲು ತಾವು ಕರಪತ್ರಗಳನ್ನು ಹಂಚುವುದನ್ನು ತಡೆಯಲು ಆ ಮಹಿಳೆಗೆ ಹಕ್ಕು ಇರಲಿಲ್ಲ ಎಂದಿದ್ದಾರೆ.
ಅಯ್ಯಕಣ್ಣು ದೇವಸ್ಥಾನದ ಪಾವಿತ್ರವನ್ನು ಉಲ್ಲಂಘಿಸಿದ್ದಾರೆ ಮತ್ತು ಅವರು ದೇವಸ್ಥಾನದೊಳಗೆ ಅವಾಚ್ಯ ಶಬ್ದಗಳನ್ನು ಬಳಸಬಾರದಿತ್ತು ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷರು ಹೇಳಿದರು.
ಆದರೆ ತಾವು ದೇವಸ್ಥಾನದ ಹೊರಗಡೆ ಇದ್ದೆವು ಎಂದು ಹೇಳಿರುವ ಅಯ್ಯೆಕಣ್ಣು, ಬಿಜೆಪಿಯು ತಮ್ಮ ರ್ಯಾಲಿಯನ್ನು ವಿಫಲಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ದ್ದಾರೆ.