ನಾಗರಿಕ ವಾಯುಯಾನ ಸಚಿವಾಲಯದ ಅಧಿಕಾರ ವಹಿಸಿಕೊಂಡ ಪ್ರಧಾನಿ ಮೋದಿ
ಹೊಸದಿಲ್ಲಿ,ಮಾ.9: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆಯಿಂದ ಕನಲಿರುವ ತೆಲುಗು ದೇಶಂ ಪಾರ್ಟಿ(ಟಿಡಿಪಿ)ಯು ಎನ್ಡಿಎ ಸರಕಾರದಿಂದ ತನ್ನ ಸಚಿವರನ್ನು ಹಿಂದೆಗೆದುಕೊಂಡ ಮತ್ತು ಅಶೋಕ ಗಜಪತಿ ರಾಜು ಪಶುಪತಿ ಅವರು ನಾಗರಿಕ ವಾಯಯಾನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಈಗ ಪ್ರಧಾನಿ ನರೇಂದ್ರ ಮೋದಿಯವರೇ ಆ ಖಾತೆಯನ್ನು ನಿರ್ವಹಿಸಲಿದ್ದಾರೆ. ಶುಕ್ರವಾರ ಅವರು ನಾಗರಿಕ ವಾಯುಯಾನ ಸಚಿವಾಲಯದ ಅಧಿಕಾರವನ್ನು ವಹಿಸಿಕೊಂಡರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಈ ಬಗ್ಗೆ ಅಗತ್ಯ ನಿರ್ದೇಶ ನೀಡಿದ್ದರು.
ಟಿಡಿಪಿ ಸಚಿವರಾಗಿದ್ದ ಪಶುಪತಿ ಮತ್ತು ವೈ.ಎಸ್.ಚೌಧರಿ ಅವರ ರಾಜೀನಾಮೆಗಳನ್ನು ರಾಷ್ಟ್ರಪತಿಗಳು ಶುಕ್ರವಾರ ಅಂಗೀಕರಿಸಿದ್ದಾರೆ. ಚೌಧರಿ ಸಹಾಯಕ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂವಿಜ್ಞಾನಗಳ ಸಚಿವರಾಗಿದ್ದರು. ಇವರಿಬ್ಬರೂ ಗುರುವಾರ ಸಂಜೆ ಪ್ರಧಾನಿಯವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರಗಳನ್ನು ಅವರಿಗೆ ಸಲ್ಲಿಸಿದ್ದರು.
Next Story