ವಿಪ್ ಬಂಡಾಯ ಶಾಸಕರಿಗೂ ಅನ್ವಯ: ಎಚ್.ಡಿ.ದೇವೇಗೌಡ

ಬೆಂಗಳೂರು, ಮಾ.10: ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದಿಂದ ಜಾರಿಗೊಳಿಸುವ ವಿಪ್ ಬಂಡಾಯ ಶಾಸಕರಿಗೂ ಅನ್ವಯವಾಗಲಿದ್ದು, ಅವರೂ ಅದನ್ನು ಪಾಲಿಸಬೇಕಾಗುತ್ತದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೆಗೌಡ ಇಂದಿಲ್ಲಿ ಹೇಳಿದರು.
ಶನಿವಾರ ನಗರದ ಪ್ರೆಸ್ಕ್ಲಬ್ನಲ್ಲಿ ಪತ್ರಕರ್ತ ಎಸ್.ಲಕ್ಷ್ಮೀನಾರಾಯಣ ಅವರ ‘ಕರ್ನಾಟಕ ರಾಜಕೀಯ ಪ್ರಯೋಗ ಶಾಲೆ’ ಪುಸ್ತಕ ಬಿಡುಗಡೆಗೊಳಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯಸಭಾ ಚುನಾವಣೆಗೆ ನಮ್ಮ ಪಕ್ಷದಿಂದ ಬಿ.ಎಂ.ಫಾರೂಕ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ನಮ್ಮ ಅಭ್ಯರ್ಥಿ ಗೆಲ್ಲಲು ಅಗತ್ಯವಾದ ಮತಗಳ ಕೊರತೆಯಿದ್ದು, ಪಕ್ಷೇತರ ಶಾಸಕರ ಬೆಂಬಲವನ್ನೂ ಕೋರಲಾಗುವುದು. ಉಳಿದಂತೆ ಯಾವುದೇ ರಾಷ್ಟ್ರೀಯ ಪಕ್ಷದೊಂದಿಗೆ ಮಾತುಕತೆ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿದರು.
ಏಳು ಮಂದಿ ಬಂಡಾಯ ಶಾಸಕರನ್ನು ಪಕ್ಷದಿಂದ ಈವರೆಗೆ ಉಚ್ಛಾಟನೆ ಮಾಡಿಲ್ಲ. ಜತೆಗೆ ಅವರು ಸಹ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ. ಪಕ್ಷ ಜಾರಿಗೊಳಿಸುವ ವಿಪ್ ಅವರಿಗೂ ಅನ್ವಯವಾಗಲಿದ್ದು, ಅದನ್ನು ಪಾಲಿಸಬೇಕಾಗುತ್ತದೆ ಎಂದು ದೇವೇಗೌಡರು ನುಡಿದರು.





