ಸಿದ್ದಾಪುರ: ಕೆಸಿಎಲ್ ಕ್ರೀಡಾಕೂಟದ ಆಟಗಾರರ ಹರಾಜು ಪ್ರಕ್ರಿಯೆ
![ಸಿದ್ದಾಪುರ: ಕೆಸಿಎಲ್ ಕ್ರೀಡಾಕೂಟದ ಆಟಗಾರರ ಹರಾಜು ಪ್ರಕ್ರಿಯೆ ಸಿದ್ದಾಪುರ: ಕೆಸಿಎಲ್ ಕ್ರೀಡಾಕೂಟದ ಆಟಗಾರರ ಹರಾಜು ಪ್ರಕ್ರಿಯೆ](https://www.varthabharati.in/sites/default/files/images/articles/2018/03/10/153.jpg)
ಸಿದ್ದಾಪುರ, ಮಾ.10: ಇಲ್ಲಿನ ಸಿಟಿ ಬಾಯ್ಸ್ ಯುವಕ ಸಂಘದ ಆಶ್ರಯದಲ್ಲಿ ಐಪಿಎಲ್ ಮಾದರಿಯ ಕೊಡಗು ಚಾಂಪಿಯನ್ಸ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದ ಐಕಾನ್ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆಗೆ ಸಿದ್ದಾಪುರ ಗ್ರಾ.ಪಂ ಅಧ್ಯಕ್ಷ ಮಣಿ ಚಾಲನೆ ನೀಡಿದರು.
ಸ್ಥಳೀಯ ಗ್ರಾಪಂ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಐಕಾನ್ ಆಟಗಾರರ ಚೀಟಿ ಎತ್ತುವ ಮೂಲಕ ಪ್ರಕ್ರಿಯೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ಗ್ರಾಮೀಣ ಭಾಗದಲ್ಲಿ ನಡೆಯುವ ಎಲ್ಲಾ ರೀತಿಯ ಕ್ರೀಡಾಕೂಟಗಳು ಸಹಬಾಳ್ವೆಯನ್ನು ಸಾರುವುದರೊಂದಿಗೆ ಅನ್ಯೋನತೆಯನ್ನು ವೃದ್ಧಿಸುತ್ತದೆ. ಸಿದ್ದಾಪುರ ಭಾಗದಲ್ಲಿ ಸಿಟಿ ಬಾಯ್ಸ್ ಯುವಕ ಸಂಘ ಆಯೋಜಿಸುತ್ತಿರುವ ಕೆಸಿಎಲ್ ಕ್ರೀಡಾಕೂಟವು ಕಳೆದೆರಡು ವರ್ಷಗಳಿಂದ ಹಬ್ಬದ ವಾತಾವರಣವನ್ನು ಸೃಷ್ಟಿ ಮಾಡಿದ್ದು, ಜಿಲ್ಲೆಯ ಪ್ರತಿಭಾನ್ವಿತ ಆಟಗಾರರಿಗೆ ಅದ್ಭುತ ಅಡಿಪಾಯವನ್ನು ಕೆಸಿಎಲ್ ಮೂಲಕ ಒದಗಿಸಿರುವುದು ಈ ನಾಡಿನ ಹೆಮ್ಮೆಯಾಗಿದೆ ಎಂದು ಅಭಿಪ್ರಾಯಿಸಿದರು.
ಈ ಸಂದರ್ಭ ಕೆಸಿಎಲ್ ಪ್ರಚಾರ ಸಮಿತಿ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ, ಕ್ರೀಡಾಕೂಟ ಸಮಿತಿ ಅಧ್ಯಕ್ಷ ಸುರೇಶ್ ಬಿಳಿಗೇರಿ, ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಎನ್ ವಾಸು, ಗ್ರಾ.ಪಂ ಸದಸ್ಯ ಅಬ್ದುಲ್ ಖಾದರ್, ಪ್ರಮುಖರಾದ ಡೈಮಂಡ್ ಜಂಶೀದ್, ಕಲೀಲ್, ಸತೀಶ್ ಸೇರಿದಂತೆ ಇತರರು ಇದ್ದರು.
ಐಕಾನ್ ಆಟಗಾರರ ಬಿಡ್ಡಿಂಗ್: ಐಕಾನ್ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ 12 ತಂಡಗಳ ಮಾಲಿಕರು ಭಾಗವಹಿಸುವ ಮೂಲಕ 23 ಐಕಾನ್ ಆಟಗಾರರನ್ನು ಹರಾಜು ಮಾಡಿದರು. ನೆಲ್ಯಹುದಿಕೇರಿಯ ರೋನಿತ್, ಹುಂಡಿಯ ರಿಯಾಜ್, ಸೋಮವಾರಪೇಟೆಯ ಯತೀಶ್, ಸಿದ್ದಾಪುರದ ಮುಸ್ತಫ, ವಿರಾಜಪೇಟೆಯ ಶಂಸುದ್ದೀನ್, ಮೂರ್ನಾಡಿನ ಮೂರ್ತಿ, ಹೊಸಳ್ಳಿಯ ಪ್ರಭಾಕರ್ ಮತ್ತು ಹಂಚಿಕಾಡಿನ ನಿತೇಶ ಸೇರಿದಂತೆ ಕೆಲವು ಆಟಗಾರರಿಗಾಗಿ ತಂಡಗಳ ಮಾಲಿಕರು ಹೆಚ್ಚು ಪೈಪೋಟಿ ನಡೆಸಿದ್ದು ಕಂಡು ಬಂತು.
ಈ ಬಾರಿ ಕ್ರೀಡಾಕೂಟದಲ್ಲಿ ಭಾಗವಹಿಸಲು 271 ಆಟಗಾರರು ಅರ್ಜಿಯನ್ನು ಸಲ್ಲಿಸಿದ್ದು, ಅಂತಿಮ ಹಂತದ ಆಟಗಾರರ ಹರಾಜು ಪ್ರಕ್ರಿಯೆಯು ಮಾ. 13 ರಂದು ಸಿದ್ದಾಪುರದ ಚರ್ಚ್ ಸಭಾಂಗಣದಲ್ಲಿ ನಡೆಯಲಿದ್ದು, ಏಪ್ರಿಲ್ 8 ರಿಂದ 12ರ ವರೆಗೆ ಐದು ದಿನಗಳ ಕಾಲ ಸಿದ್ದಾಪುರದ ಪ್ರೌಢಶಾಲಾ ಮೈದಾನದಲ್ಲಿ ಕ್ರಿಕೆಟ್ ಉತ್ಸವ ನಡೆಯಲಿದೆ ಎಂದು ಸಮಿತಿಯ ಸಂಚಾಲಕ ಎಂ.ಎ ಅಜೀಜ್ ತಿಳಿಸಿದರು.