ಸುಂಟಿಕೊಪ್ಪ: ಮರಕ್ಕೆ ಕಾರು ಢಿಕ್ಕಿ; ಓರ್ವ ಮೃತ್ಯು
ಓರ್ವನಿಗೆ ಗಂಭೀರ ಗಾಯ
![ಸುಂಟಿಕೊಪ್ಪ: ಮರಕ್ಕೆ ಕಾರು ಢಿಕ್ಕಿ; ಓರ್ವ ಮೃತ್ಯು ಸುಂಟಿಕೊಪ್ಪ: ಮರಕ್ಕೆ ಕಾರು ಢಿಕ್ಕಿ; ಓರ್ವ ಮೃತ್ಯು](https://www.varthabharati.in/sites/default/files/images/articles/2018/03/10/10sunti01.jpg)
ಸುಂಟಿಕೊಪ್ಪ,ಮಾ.10: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಮರಕ್ಕೆ ಢಿಕ್ಕಿಯಾಗಿ ಪಲ್ಟಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟು, ಮತ್ತೊಬ್ಬ ಗಂಭೀರ ಗಾಯಗೊಂಡ ಘಟನೆ ಸುಂಟಿಕೊಪ್ಪ ಸಮೀಪದ ಕೂರ್ಗ್ಹಳ್ಳಿ ತೋಟದ ಬಳಿ ಶನಿವಾರ ಸಂಜೆ ನಡೆದಿದೆ.
ಸುಂಟಿಕೊಪ್ಪದ ಪಂಪ್ಹೌಸ್ ಬಡಾವಣೆಯ ನಿವಾಸಿ ಸೋಮಯ್ಯ ಎಂಬವರ ಪುತ್ರ ಕೌಶಿಕ್(29) ಮೃತಪಟ್ಟಿರುವ ಯುವಕನಾಗಿದ್ದಾನೆ.
ಕಳೆದ ಕೆಲವು ದಿನಗಳ ಹಿಂದೆ ಮರಣ ಹೊಂದಿದ ಅಜ್ಜಿಯ ತಿಥಿಕಾರ್ಯವನ್ನು ಮುಗಿಸಿ ಸಂಬಂಧಿಕ ಯುವಕನೊಂದಿಗೆ ಕುಶಾಲನಗರಕ್ಕೆ ತೆರಳುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ.
ಸುಂಟಿಕೊಪ್ಪದಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದ ಕಾರು( ಕೆಎ 12 ಜೆಡ್ 9247) ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿದ್ದ ಮರಕ್ಕೆ ಢಿಕ್ಕಿಯಾಗಿ ನಿಯಂತ್ರಣಕ್ಕೆ, ಬಾರದೆ ಪಲ್ಟಿ ಹೊಡೆದ ಪರಿಣಾಮ ತೋಟದೊಳಗೆ ಮಗುಚಿಬಿದ್ದಿದೆ. ಈ ವೇಳೆ ತೋಟದ ತಂತಿ ಬೇಲಿ ಮತ್ತು ಕಲ್ಲಿನ ಕಂಬಕ್ಕೆ ಢಿಕ್ಕಿ ಹೊಡೆದಿದ್ದು, ಚಾಲಕ ಕೌಶಿಕ್ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದೆ. ನಂತರ ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸುವ ಸಂದರ್ಭ ದಾರಿ ಮದ್ಯೆ ಮೃತಪಟ್ಟಿದ್ದಾನೆ.
ಮತ್ತೊಬ್ಬ ಆತನ ಸಂಬಂಧಿ ರಿತೇಶ್ ( 34) ಭುಜ, ತಲೆ, ಕೈಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಸ್ಥಳಕ್ಕೆ ಸುಂಟಿಕೊಪ್ಪ ಪಿಎಸ್ಐ ಜಯರಾಮ್ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.