ಮುಂಬೈ : ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲು 35 ಸಾವಿರ ರೈತರು ತಯಾರಿ
ಮುಂಬೈ,ಮಾ.11: ಕೃಷಿ ಕ್ಷೇತ್ರದಲ್ಲಿ ಮಹಾರಾಷ್ಟ್ರ ಎದುರಿಸುತ್ತಿರುವ ಗಂಭೀರ ಬಿಕ್ಕಟ್ಟಿಗೆ ಸ್ಪಂದಿಸುವಲ್ಲಿ ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ ಸರಕಾರವು ಸಂಪೂರ್ಣ ವಿಫಲವಾಗಿದೆಯೆಂದು ಆರೋಪಿಸಿ ವಿಧಾನಸಭಾ ಚಲೋ ಜಾಥಾ ಹಮ್ಮಿಕೊಂಡಿರುವ ಮಹಾರಾಷ್ಟ್ರದ 35 ಸಾವಿರಕ್ಕೂ ಅಧಿಕ ರೈತರು ರವಿವಾರ ಮುಂಬೈ ತಲುಪಿದ್ದು, ಸೋಮವಾರ ವಿಧಾನಸಭೆಗೆ ಮುತ್ತಿಗೆ ಹಾಕಲಿದ್ದಾರೆ. ಸುಡುಬಿಸಿಲನ್ನೂ ಲೆಕ್ಕಿಸದೆ ಕಳೆದ ಐದು ದಿನಗಳಿಂದ 180 ಕಿ.ಮೀ.ಕ್ರಮಿಸಿರುವ ರೈತ ಜಾಥಾ ಇಂದು ಬೆಳಗ್ಗೆ ಮುಂಬೈ ತಲುಪಿದೆ. ಸಂಪೂರ್ಣ ಸಾಲ ಮನ್ನಾ ಹಾಗೂ ಹಲವಾರು ವರ್ಷಗಳಿಂದ ಉಳುಮೆ ಮಾಡುತ್ತಿರುವ ಜಮೀನುಗಳನ್ನು ಆದಿವಾಸಿ ರೈತರಿಗೆ ವರ್ಗಾಯಿಸಬೇಕು ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಅವರು ಮಹಾರಾಷ್ಟ್ರದ ವಿಧಾನಸಭೆ ಮಂತ್ರಾಲಯ ಕಟ್ಟಡಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಈ ಹೋರಾಟದಲ್ಲಿ ಭಾರೀ ಸಂಖ್ಯೆಯ ಆದಿವಾಸಿ ರೈತರೂ ಕೈಜೋಡಿಸಿದ್ದು, ಇದು ತಮ್ಮ ಸಾವುಬದುಕಿನ ಪ್ರಶ್ನೆಯಾಗಿದೆಯೆಂದು ಹೇಳಿಕೊಂಡಿದ್ದಾರೆ.
ಎಡಪಂಥೀಯ ನಿಲುವುಹೊಂದಿರುವ ಅಖಿಲ ಭಾರತ ಕಿಸಾನ್ ಸಬಾ (ಎಐಕೆಎಸ್) ನೇತೃತ್ವದಲ್ಲಿ ಆಯೋಜಿಸಲಾದ ಈ ಬೃಹತ್ ಕಾಲ್ನಡಿಗೆ ಜಾಥಾವು ಮಂಗಳವಾರ ನಾಸಿಕ್ನಲ್ಲಿ ಆರಂಭಗೊಂಡಿತ್ತು.
ಏಐಕೆಎಸ್ ಅಧ್ಯಕ್ಷ ಅಶೋಕ್ ಧಾವ್ಲೆ ಈ ಮಧ್ಯೆ ಸುದ್ದಿಗಾರರ ಜೊತೆ ಮಾತನಾಡುತ್ತಾ, ತಾವು ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಅವರು ರೈತರ ಬೇಡಿಕೆಗಳನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಮುಂದಿಡುವುದಾಗಿ ಭರವಸೆ ನೀಡಿದ್ದಾರೆಂದು ತಿಳಿಸಿದರು. ಶಿವಸೇನಾ ನಾಯಕ ಆದಿತ್ಯ ಠಾಕ್ರೆ ಕೂಡಾ ರವಿವಾರ ರೈತರನ್ನು ಭೇಟಿ ಮಾಡಿದ್ದು, ಅವರ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಎನ್ಸಿಪಿ ಹಾಗೂ ರಾಜ್ಠಾಕ್ರೆ ನೇತೃತ್ವದ ಎಂಎನ್ಎಸ್ ಪಕ್ಷಗಳೂ ತಮ್ಮ ಬೆಂಬಲವನ್ನು ಘೋಷಿಸಿವೆ.
ರೈತರು ವಿಧಾನಸಭಾ ಮುತ್ತಿಗೆ ಕಾರ್ಯಕ್ರಮವನ್ನು ಶಾಂತಿಯುತವಾಗಿ ನಡೆಸಲಿದ್ದು, ಮುಂಬೈ ಮಹಾನಗರದ ನಾಗರಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದೆಂದು ಅಶೋಕ್ ಧಾವ್ಲೆ ಭರವಸೆ ನೀಡಿದ್ದಾರೆ.
‘‘ ನಾವು 25 ಸಾವಿರ ಜನರೊಂದಿಗೆ ರ್ಯಾಲಿಯನ್ನು ಆರಂಭಿಸಿದ್ದು, ಈಗ ನಮ್ಮ ಸಂಖ್ಯೆ 50 ಸಾವಿರದ ಗಡಿಯನ್ನು ತಲುಪಿದೆ. ನಾಳೆ ಅದು ಇನ್ನಷ್ಟು ಹೆಚ್ಚಾಗಲಿದೆ. ಆದರೆ ನಗರದ ಜನತೆಗೆ ಇದರಿಂದ ಯಾವುದೇ ಅಡ್ಡಿಯಾಗದು. ಪೂರ್ವಾಹ್ನ 11 ಗಂಟೆಗೆ ರ್ಯಾಲಿ ಆರಂಭಗೊಳ್ಳಲಿರುವುದರಿಂದ 10ನೇ ತರಗತಿಯ ಪರೀಕ್ಷೆ ಹಾಜರಾಗುವ ವಿದ್ಯಾರ್ಥಿಗಳಿಗೆ ಯಾವುದೇ ಅನನುಕೂಲವಾಗದು ಎಂದು ಧಾವ್ಲೆ ತಿಳಿಸಿದರು.
ಅವಿಶ್ರಾಂತ ಹೋರಾಟ
ನಾಸಿಕ್ನಿಂದ ಮಂಗಳವಾರ ಈ ಬೃಹತ್ ರ್ಯಾಲಿಯನ್ನು ಆರಂಭಿಸಿದ ರೈತರು 180 ಕಿ.ಮೀ. ದಾರಿಯನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿಕೊಂಡು ಬಂದಿದ್ದಾರೆ. ಒಂದು ಸಾದಾ ಊಟ ಮಾಡಿಯೇ ದಿನಗಳೆದ ಅವರು ಅಲ್ಲಲ್ಲಿ ಸ್ವಲ್ಪ ಹೊತ್ತು ವಿರಮಿಸಿ ತಮ್ಮ ಪಾದಯಾತ್ರೆಯನ್ನು ಮುಂದುವರಿಸಿದ್ದರು ಹಾಗೂ ಬಟಾಬಯಲಿನಲ್ಲಿ ನಿದ್ರಿಸಿದ್ದರು. ನಸುಕಿನಲ್ಲೇ ಪಾದಯಾತ್ರೆ ಆರಂಭಿಸುವ ಅವರು, ಮಧ್ಯಾಹ್ನದವರೆಗೆ ಎಲ್ಲಿಯೂ ನಿಲ್ಲುತ್ತಿರಲಿಲ್ಲ.
ಮಹಾ ರೈತರ ಮುಖ್ಯ ಬೇಡಿಕೆಗಳು
1. ರೈತರ ಸಂಪೂರ್ಣ ಸಾಲ ಮನ್ನಾ
2. ರೈತರ ಕೃಷಿಉತ್ಪನ್ನಗಳಿಗೆ ಅವುಗಳ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಅಧಿಕ ಬೆಲೆಯನ್ನು ನೀಡಬೇಕು ಹಾಗೂ ಅವುಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕು.