ದೇವರಿಗೆ ಐಫೋನ್ 6ಎಸ್ ಕಾಣಿಕೆ !
ದೇವಸ್ಥಾನ ಅದನ್ನು ಮಾಡಿದ್ದೇನು ಗೊತ್ತೇ?

ಸಾಂದರ್ಭಿಕ ಚಿತ್ರ
ವಿಜಯವಾಡ,ಮಾ.11: ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಮೋಪಿವೇಡಿಯಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನದ ಹುಂಡಿಯಲ್ಲಿ ಭಕ್ತನೊಬ್ಬ ದೇವರಿಗೆ ಐ ಫೋನ್ 6ಎಸ್ ಅರ್ಪಿಸಿರುವುದು ಬೆಳಕಿಗೆ ಬಂದಿದೆ. ದೇವಾಲಯ ಸಿಬ್ಬಂದಿ ಶನಿವಾರ ಹುಂಡಿ ತೆರೆದು ಹಣವನ್ನು ಎಣಿಕೆ ಮಾಡಲು ಮುಂದಾದಾಗ ಇದು ಬೆಳಕಿಗೆ ಬಂದಿದೆ.
ಇತ್ತೀಚೆಗೆ ಮೊಬೈಲ್ ವಹಿವಾಟು ಆರಂಭಿಸಿದ ಭಕ್ತ ದೇವರಿಗೆ ಕಾಣಿಕೆಯಾಗಿ ಐಫೋನ್ ಸಮರ್ಪಿಸಿರಬೇಕು ಎಂದು ಸಿಬ್ಬಂದಿ ಅಂದಾಜಿಸಿದ್ದಾರೆ. ದೇವರಿಗೆ ದುಬಾರಿ ಮೊಬೈಲ್ ಕಾಣಿಕೆಯಾಗಿ ಅರ್ಪಿಸಿರುವುದು ಬಹುಶಃ ಇದೇ ಮೊದಲು. ಈ ಬಗ್ಗೆ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಂ.ಶಾರದಾ ಕುಮಾರ್ ಅವರಿಗೆ ತಕ್ಷಣ ಮಾಹಿತಿ ನೀಡಲಾಯಿತು.
ಈ ಕಾಣಿಕೆಯನ್ನು ಏನು ಮಾಡಬೇಕು ಎಂದು ಸರ್ಕಾರಕ್ಕೆ ಇದೀಗ ದೇವಾಲಯ ಸಮಿತಿ ಸ್ಪಷ್ಟನೆ ಕೋರಿದೆ. ಆದರೆ ಧಾರ್ಮಿಕ ದತ್ತಿ ಇಲಾಖೆಯ ನಿಯಮಾವಳಿಯ ಪ್ರಕಾರ, ಹುಂಡಿಯಲ್ಲಿ ಯಾವುದೇ ಇಲೆಕ್ಟ್ರಿಕಲ್ ಸಾಧನ ಅಥವಾ ಸ್ಮಾರ್ಟ್ಫೋನ್ ಪತ್ತೆಯಾದರೆ ಅದನ್ನು ಹೂಳಬೇಕು ಎನ್ನುವುದು ಅಧೀಕ್ಷಕ ಎಂ.ಮಧುಸೂಧನ್ ಅವರ ಅಭಿಪ್ರಾಯ.
ವಿಜಯವಾಡದಿಂದ 65 ಕಿಲೋಮೀಟರ್ ದೂರದ ಈ ದೇವಸ್ಥಾನಕ್ಕೆ ಸರ್ಪದೋಷ ನಿವಾರಣೆಗಾಗಿ ಅಪಾರ ಭಕ್ತರು ಭೇಟಿ ನೀಡುತ್ತಾರೆ.





