ನಾಡು ಕಂಡ ಶ್ರೇಷ್ಠ ಕವಿಗಳಲ್ಲಿ ಕೆ.ಎಸ್.ನರಸಿಂಹಸ್ವಾಮಿ ಒಬ್ಬರು: ಕವಿಯತ್ರಿ ಡಾ.ಲತಾ ರಾಜಶೇಖರ್
![ನಾಡು ಕಂಡ ಶ್ರೇಷ್ಠ ಕವಿಗಳಲ್ಲಿ ಕೆ.ಎಸ್.ನರಸಿಂಹಸ್ವಾಮಿ ಒಬ್ಬರು: ಕವಿಯತ್ರಿ ಡಾ.ಲತಾ ರಾಜಶೇಖರ್ ನಾಡು ಕಂಡ ಶ್ರೇಷ್ಠ ಕವಿಗಳಲ್ಲಿ ಕೆ.ಎಸ್.ನರಸಿಂಹಸ್ವಾಮಿ ಒಬ್ಬರು: ಕವಿಯತ್ರಿ ಡಾ.ಲತಾ ರಾಜಶೇಖರ್](https://www.varthabharati.in/sites/default/files/images/articles/2018/03/11/KSN Photos.jpg)
ಮೈಸೂರು,ಮಾ.11: ನಾಡು ಕಂಡ ಶ್ರೇಷ್ಠ ಕವಿಗಳಲ್ಲಿ ಕೆ.ಎಸ್ ನರಸಿಂಹಸ್ವಾಮಿಯವರು ಒಬ್ಬರಾಗಿದ್ದರು ಎಂದು ಖ್ಯಾತ ಕವಿಯತ್ರಿ ಡಾ.ಲತಾ ರಾಜಶೇಖರ್ ಅಭಿಪ್ರಾಯಪಟ್ಟರು.
ರೋಟರಿ ಸಭಾಂಗಣದಲ್ಲಿ ಗ್ರಾಮಾಂತರ ಬುದ್ಧಿ ಜೀವಿ ಬಳಗದ ವತಿಯಿಂದ ರವಿವಾರ ಕೆ.ಎಸ್.ಎನ್ ರವರ ನೆನಪಿನ ರಾಜ್ಯ ಮಟ್ಟದ ಸಾಹಿತ್ಯೋತ್ಸವ ಮತ್ತು ಬಳಗದ 33ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನರಸಿಂಹಸ್ವಾಮಿ ಅವರು ರಚಿಸಿರುವ ಕವಿತೆಗಳಲ್ಲಿ ಪ್ರೇಮ ಮತ್ತು ಪ್ರೀತಿ ಚಿರಸ್ಥಾಯಿಯಾಗಿ ಉಳಿದಿರುವುದರಿಂದ ಅವರನ್ನು ಪ್ರೇಮ ಕವಿ ಎಂದೇ ಬಿಂಬಿಸಲಾಗುತ್ತಿದೆ ಎಂದರು.
ಕೆ.ಎಸ್.ಎನ್ ರಚಿಸಿರುವ ಮೈಸೂರು ಮಲ್ಲಿಗೆ ಬಹಳ ಜನಪ್ರಿಯವಾಗಿದೆ. ಅವರ ಕವಿತೆಗಳಾಗಲೀ, ಗೀತೆಗಳಾಗಲೀ ಅವುಗಳಲ್ಲಿ ಪ್ರೀತಿ ಎಂಬುದು ಮೊಗ್ಗಾಗಿ, ಕಾಯಾಗಿ, ಹಣ್ಣಾಗಿ ಮಾಗಿ ರಸಿಕರಿಗೆ ರಸದೌತಣ ನೀಡುತ್ತವೆ. ಅವರ ಗೀತೆಗಳನ್ನು ಆಲಿಸುತ್ತಿದ್ದರೆ ಮನಸ್ಸಿಗೆ ಸಿಗುವ ಆನಂದ ಹೇಳತೀರದು. ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು, ಹೆಂಡಂತಿಯೊಬ್ಬಳು ಮನೆಯೊಳಗಿದ್ದಳೆ ನನಗದು ಕೋಟಿ ರುಪಾಯಿ ಎಂಬ ಹಾಡುಗಳು ರಚನೆಯಾಗಿ ದಶಕಗಳೇ ಕಳೆದಿದ್ದರೂ ಇಂದಿಗೂ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಇವುಗಳನ್ನು ಕೆಲವು ಪ್ರೇಮಿಗಳು ಆಲಿಸಿ ಸಂತಸ ಪಡುತ್ತಿರುವದನ್ನು ನೋಡಿದರೆ ಅವರಿಗೆ ನೀಡಿರುವ ಪ್ರೇಮ ಕವಿ ಎಂಬ ಬಿರುದು ಸೂಕ್ತವಾಗಿದೆ ಎಂದು ಹೇಳಿದರು.
ಪು.ತಿ.ನ, ಕುವೆಂಪು ಸೇರಿದಂತೆ ಹಲವಾರು ಸಾಹಿತಿಗಳು ತಮ್ಮ ವೈಯಕ್ತಿಕ ಲಾಭಕ್ಕೆ ಎಂದೂ ಮುಂದಾಗಿರಲಿಲ್ಲ. ಸಾಹಿತ್ಯಕ್ಕೆ ತನ್ನದೇ ಆದ ಘನತೆ ಗೌರವವಿದೆ. ಸಾಹಿತ್ಯವನ್ನು ಇನ್ನು ಹೆಚ್ಚಿನ ಎತ್ತರಕ್ಕೆ ಬೆಳಸಬೇಕೆಂಬುದೇ ಅವರ ಪ್ರಮುಖ ಗುರಿಯಾಗಿತ್ತು. ಅವರು ಮಾನವೀಯ ಮೌಲ್ಯಗಳಿಗಾಗಿ ಅವಿರತವಾಗಿ ಶ್ರಮಿಸಿದ ಮಹಾನ್ ಸಾಹಿತಿಗಳಾಗಿದ್ದರು. ಆದರೆ ಇಂದು ಕೆಲವು ಸಾಹಿತಿಗಳು ಓಲೈಕೆಗೆ ಮುಂದಾಗಿದ್ದು, ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿರುವುದು ವಿಷಾದನೀಯ ಎಂದರು.
ಸಮಾರಂಭದಲ್ಲಿ ಕೆ.ಎನ್.ಮಹಾಬಲ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.