‘ಸ್ಮಾರ್ಟ್ ಸಿಟಿಗಳು ನಿವಾಸಿಗಳ ಅಪೇಕ್ಷೆಯನ್ನು ಪ್ರತಿಬಿಂಬಿಸಬೇಕು’: ಬಾಲಕೃಷ್ಣ ದೋಷಿ
ಅಹ್ಮದಾಬಾದ್, ಮಾ.11: ಕಟ್ಟಡಗಳನ್ನು ವಿವೇಚನಾರಹಿತವಾಗಿ ನಿರ್ಮಿಸಲಾಗುತ್ತಿದೆ. ಇದೀಗ ನಗರಪ್ರದೇಶದ ಮೂಲಮಂತ್ರವಾಗಿರುವ ‘ಸ್ಮಾರ್ಟ್ ಸಿಟಿ’ ಯೋಜನೆ ಆ ನಗರಗಳ ನಿವಾಸಿಗಳ ಆಕಾಂಕ್ಷೆಯನ್ನು ಪ್ರತಿಬಿಂಬಿಸಬೇಕು ಮತ್ತು ಎಲ್ಲಾ ಅಂಶಗಳಿಗೂ ಗಮನ ನೀಡಿ ಅದನ್ನು ನಿರ್ಮಿಸಬೇಕು ಎಂದು ಖ್ಯಾತ ವಾಸ್ತುಶಿಲ್ಪಿ ಬಾಲಕೃಷ್ಣ ದೋಷಿ ಅಭಿಪ್ರಾಯಪಟ್ಟಿದ್ದಾರೆ.
ತನ್ನ ಪ್ರಕಾರ ಸ್ಮಾರ್ಟ್ ಸಿಟಿ ಎಂದರೆ ಸಮಗ್ರ, ಸಮರ್ಥ, ಕಡಿಮೆ ಇಂಧನ ಬಳಸುವ, ಹೆಚ್ಚು ಆಯ್ಕೆಗಳನ್ನು ನೀಡುವ, ಸ್ವ-ಸಾಮರ್ಥ್ಯವುಳ್ಳ ಹಾಗೂ ಸ್ವಾವಲಂಬಿ ನಗರವಾಗಿದೆ ಎಂದು ದೋಷಿ ಹೇಳಿದ್ದಾರೆ.
ವಾಸ್ತುಶಿಲ್ಪ ಶಾಸ್ತ್ರದ ನೋಬೆಲ್ ಪುರಸ್ಕಾರ ಎಂದೇ ಕರೆಯಲಾಗುವ ‘ಪ್ರಿಝ್ಕರ್ ಪುರಸ್ಕಾರ’ವನ್ನು ಪಡೆದ ಪ್ರಥಮ ಭಾರತೀಯನಾಗಿರುವ 90ರ ಹರೆಯದ ದೋಷಿ, ಕಳೆದ ಕೆಲವು ದಶಕಗಳಿಂದ ತಾನು ನಗರಕ್ಕೆ ಸಂಬಂಧಿಸಿದ ವಿಷಯಗಳು, ನಗರೀಕರಣ ಹಾಗೂ ವಾಸಿಸಲು ಇರುವ ಸ್ಥಳದ ಕುರಿತ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದೇನೆ ಎಂದು ತಿಳಿಸಿದ್ದಾರೆ. ದೋಷಿ ತನ್ನ ವೃತ್ತಿಜೀವನದ ಆರಂಭದಲ್ಲಿ ಕಡಿಮೆ ವೆಚ್ಚದ ಮನೆಗಳನ್ನು ನಿರ್ಮಿಸುವ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದರು. ದೋಷಿ ಅವರ ಕಡಿಮೆ ವೆಚ್ಚದ ಮನೆಯ ಕಲ್ಪನೆ ಬಳಿಕ ಸರಕಾರಗಳ ಕಾರ್ಯನೀತಿಯ ಒಂದು ಪ್ರಮುಖ ಭಾಗವಾಗಿದೆ. ಪ್ರತಿಷ್ಠಿತ ಐಐಎಂ-ಅಹ್ಮದಾಬಾದ್ ಯೋಜನೆಯ ಮುಖ್ಯ ವಾಸ್ತುಶಿಲ್ಪಿ ಅಮೆರಿಕದ ಲೂಯಿಸ್ ಕಹನ್ ಅವರ ಸಹಾಯಕನಾಗಿ ದೋಷಿ ತನ್ನ ವೃತ್ತಿಜೀವನವನ್ನು ಆರಂಭಿಸಿದ್ದರು. ಬಳಿಕ ಅವರು ಐಐಎಂ-ಬೆಂಗಳೂರು, ಸಿಇಪಿಟಿ ಅಹ್ಮದಾಬಾದ್, ಎನ್ಐಎಫ್ಟಿ ದಿಲ್ಲಿ ಮುಂತಾದ ಸಂಸ್ಥೆಗಳ ವಿನ್ಯಾಸವನ್ನು ರೂಪಿಸಿದ್ದರು ಹಾಗೂ ಇಂದೋರ್ನಲ್ಲಿ 80,000 ನಿವಾಸಿಗಳು ನೆಲೆಸಿರುವ ‘ಅರಣ್ಯ ಕಡಿಮೆ ವೆಚ್ಚದ ಮನೆ ಯೋಜನೆ’ಯ ಮುಖ್ಯ ವಾಸ್ತುಶಿಲ್ಪಿಯಾಗಿದ್ದರು.