ನಮ್ಮ ಕುಟುಂಬದಿಂದ ಚುನಾವಣೆಗೆ ಸ್ಪರ್ಧಿಸುವುದು ಖಚಿತ: ಸುನೀತಾ ಪುಟ್ಟಣ್ಣಯ್ಯ
ಮೈಸೂರು,ಮಾ.12: ನಮ್ಮ ಕುಟುಂಬದಿಂದ ಚುನಾವಣೆಗೆ ಸ್ಪರ್ಧಿಸುವುದು ಖಚಿತವಾಗಿದೆ. ಆದರೆ ಯಾರು ಎಂಬುದು ಇನ್ನೂ ತೀರ್ಮಾನವಾಗಿಲ್ಲ ಎಂದು ಶಾಸಕ ದಿ.ಪುಟ್ಟಣ್ಣಯ್ಯ ಪತ್ನಿ ಸುನೀತಾ ಪುಟ್ಟಣ್ಣಯ್ಯ ತಿಳಿಸಿದರು.
ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ವರಾಜ್ ಇಂಡಿಯಾ ಪಕ್ಷದಿಂದಲೇ ಸ್ಪರ್ಧೆ ನಡೆಸಲಾಗುತ್ತದೆ. ನಮ್ಮನ್ನು ಯಾವ ಪಕ್ಷ ಕೂಡ ಆಹ್ವಾನ ಮಾಡಿಲ್ಲ. ನಾವೂ ಯಾವುದೇ ಪಕ್ಷಕ್ಕೂ ಹೋಗಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬೆಂಬಲ ಸೂಚಿಸಿದ್ದಾರೆ. ಯಾರೇ ಬೆಂಬಲಿಸಿದರೂ ಸ್ವಾಗತ ಇದೆ. ಪುಟ್ಟಣ್ಣಯ್ಯನವರ ಸಾವಿನ ದುಃಖದಲ್ಲೇ ಇದ್ದೇವೆ. ಚುನಾವಣೆಗೆ ಯಾರು ಸ್ಪರ್ಧೆ ಮಾಡಬೇಕೆನ್ನುವ ಕುರಿತು ಈಗಲೇ ತೀರ್ಮಾನ ಮಾಡಿಲ್ಲ. ನಮಗೆ ತೀರ್ಮಾನ ಮಾಡಲು ಕಾಲಾವಕಾಶ ಬೇಕಾಗಿದೆ ಎಂದರು.
ಪುಟ್ಟಣ್ಣಯ್ಯನವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ, ಸ್ಥಗಿತಗೊಂಡಿದ್ದ ಬಹುಮಾನ ವಿತರಣಾ ಕಾರ್ಯಕ್ರಮ ಮತ್ತೊಂದು ದಿನಕ್ಕೆ ನಿಗದಿಪಡಿಸಲಾಗಿದೆ. ಜಾತ್ರಾ ಮಹೋತ್ಸವದ ಸ್ಥಳದಲ್ಲೇ ರಾಸುಗಳ ಮಾಲೀಕರನ್ನು ಕರೆದು ಬಹುಮಾನ ನೀಡಲು ತೀರ್ಮಾನಿಸಲಾಗಿದೆ. ಪುಟ್ಟಣ್ಣಯ್ಯ ಅಕಾಲಿಕ ನಿಧನದಿಂದ ರೈತರು ಜಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದರು. ಪುಟ್ಟಣ್ಣಯ್ಯ ನಿಧನಕ್ಕೆ ಕಂಬನಿ ಮಿಡಿದ ರೈತರನ್ನು ನೆನೆಯುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೇ ತಿಂಗಳ 16 ರಂದು ಜಾತ್ರೆ ಗೆ ಬಂದಿದ್ದ 175 ರಾಸುಗಳ ಮಾಲೀಕರನ್ನು ಕರೆದು ಬಹುಮಾನ ನೀಡಲಾಗುವುದು. ಮಂಡ್ಯ ಜಿಲ್ಲೆ ಪಾಂಡುಪುರದ ಬೇಬಿ ಬೆಟ್ಟದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಬಡಗಲಪುರ ನಾಗೇಂದ್ರ ಸೇರಿದಂತೆ ಪುಟ್ಟಣ್ಣಯ್ಯ ಬೆಂಬಲಿಗರು ಉಪಸ್ಥಿತರಿದ್ದರು.