ದಾವಣಗೆರೆ: ಶಾಶ್ವತ ಪುನರ್ವಸತಿ ನೀಡಲು ನಿರ್ಲಕ್ಷ್ಯ ವಹಿಸಿರುವ ಮಹಾನಗರ ಪಾಲಿಕೆ ವಿರುದ್ಧ ಪ್ರತಿಭಟನೆ
![ದಾವಣಗೆರೆ: ಶಾಶ್ವತ ಪುನರ್ವಸತಿ ನೀಡಲು ನಿರ್ಲಕ್ಷ್ಯ ವಹಿಸಿರುವ ಮಹಾನಗರ ಪಾಲಿಕೆ ವಿರುದ್ಧ ಪ್ರತಿಭಟನೆ ದಾವಣಗೆರೆ: ಶಾಶ್ವತ ಪುನರ್ವಸತಿ ನೀಡಲು ನಿರ್ಲಕ್ಷ್ಯ ವಹಿಸಿರುವ ಮಹಾನಗರ ಪಾಲಿಕೆ ವಿರುದ್ಧ ಪ್ರತಿಭಟನೆ](https://www.varthabharati.in/sites/default/files/images/articles/2018/03/12/3.jpg)
ದಾವಣಗೆರೆ,ಮಾ.12: ಬಡವರಿಗೆ, ನಿರ್ಗತಿಕರಿಗೆ ಶಾಶ್ವತ ಪುನರ್ವಸತಿ, ಸೂರು ನೀಡಲು ನಿರ್ಲಕ್ಷ್ಯ ವಹಿಸಿರುವ ಮಹಾನಗರ ಪಾಲಿಕೆ ವಿರುದ್ಧ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ನಾಗರಿಕ ಮೂಲಸೌಕರ್ಯ ಹೋರಾಟ ವೇದಿಕೆಯಿಂದ ಹೆಗಡೆ ನಗರ, ಚಂದ್ರೋದಯ ನಗರ ನಿವಾಸಿಗಳು ನಗರದಲ್ಲಿ ಪ್ರತಿಭಟನೆ ನಡೆಸಿ, ಪಾಲಿಕೆಗೆ ಮುತ್ತಿಗೆ ಹಾಕಿದರು.
ನಗರದ ರಿಂಗ್ ರಸ್ತೆಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಪಿಬಿ ರಸ್ತೆ ಮುಖಾಂತರ ಪಾಲಿಕೆ ಮುಂದೆ ಜಮಾಯಿಸಿ, ಪಾಲಿಕೆ ವಿರುದ್ಧ ಘೋಷಣೆ ಕೂಗಿದ್ದಲ್ಲದೇ, ಪಾಲಿಕೆಗೆ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ವೇದಿಕೆ ಸಂಚಾಲಕ ಜೆ. ಅಮಾನುಲ್ಲಾಖಾನ್ ಮಾತನಾಡಿ, ಪಾಲಿಕೆ ವ್ಯಾಪ್ತಿಯ ರಿಂಗ್ ರಸ್ತೆ ನಿವೇಶನಗಳಲ್ಲಿ ಸುಮಾರು 35 ವರ್ಷಗಳಿಂದ ಬಡವರು, ಕೂಲಿ ಕಾರ್ಮಿಕರು ಮನೆಗಳನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ, ರಿಂಗ್ ರಸ್ತೆ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ಅಲ್ಲಿನ ನಿರ್ಗತಿಕರಿಗೆ ಪುನರ್ವಸತಿ ಕಲ್ಪಿಸುವಂತೆ ಅನೇಕ ಬಾರಿ ಹೋರಾಟ ನಡೆಸಿದರೂ ನಗರಾಡಳಿತ, ಜಿಲ್ಲಾಡಳಿತ ಸೂಕ್ತ ಪರಿಹಾರ ವ್ಯವಸ್ಥೆ ಮಾಡದೇ ನಿರ್ಲಕ್ಷ್ಯ ತಾಳಿದೆ ಎಂದು ಅವರು ದೂರಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಈ ಹಿಂದೆ 23 ಎಕರೆ ಜಾಗದಲ್ಲಿ ಅವೈಜ್ಞಾನಿಕವಾಗಿ ಕೊಳಚೆ ನೀರುಶುದ್ಧೀಕರಣ ಘಟಕ ಸ್ಥಾಪಿಸಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದ್ದನ್ನು ಖಂಡಿಸಿ ನಮ್ಮ ವೇದಿಕೆ ಹೋರಾಟ ನಡೆಸಿದಾಗ ಘಟಕ ವೈಜ್ಞಾನಿಕವಾಗಿ ಅಭಿವೃದ್ಧಿ ಪಡಿಸುವುದಾಗಿ ಪಾಲಿಕೆ ತೀರ್ಮಾನ ಕೈಗೊಂಡಿತ್ತು. ಅಲ್ಲದೆ, ಈ ಪ್ರದೇಶದಲ್ಲಿ ಒಂದು ಕ್ರೀಡಾಂಗಣ ನಿರ್ಮಿಸುವಂತೆ ಮನವಿ ಮಾಡಿದಾಗ ಅದಕ್ಕೂ ಪಾಲಿಕೆ ಒಪ್ಪಿತ್ತು. ಆದರೆ, ತೀರ್ಮಾನವಾಗಿ 7 ವರ್ಷ ಕಳೆದರೂ ಕ್ರೀಡಾಂಗಣ, ಉದ್ಯಾವನಗಳ ಅಭಿವೃದ್ಧಿ ಕಂಡಿಲ್ಲ ಎಂದು ಅವರು ಆರೋಪಿಸಿದರು.
ಸಾರ್ವಜನಿಕ ಹಿತಾಸಕ್ತಿ ಕಾಪಾಡದೇ, 35 ವರ್ಷಗಳಿಂದ ವಾಸಿಸುತ್ತಿದ್ದರೂ ಅವರಿಗೆ ಶಾಶ್ವತ ಪುನರ್ವಸತಿ ಕಲ್ಪಿಸದ ಪಾಲಿಕೆ ಇರುವುದಾದರೂ ಯಾಕೆ ಎಂದು ಪ್ರಶ್ನಿಸಿದ ಅವರು, ಈ ಕೂಡಲೇ ಅಲ್ಲಿನ ಜನರಿಗೆ ಶಾಶ್ವತ ಸೂರು, ಪುನರ್ವಸತಿ, ಮೂಲಸೌಲಭ್ಯ ಕಲ್ಪಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸಲೀಂಸಾಬ್, ಚಂದ್ರೋದಯ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಹಸೇನ್ ಸಾಬ್, ಮುಖಂಡರಾದ ಮನ್ಸೂರ್ ಅಲಿ, ಖಾದರ್ ಬಾಷಾ, ಸೈಯದ್ ರಜುಲ್ ಸಾಬ್, ಬಾಷಾ ಸಾಬ್, ಬಶೀರ್ ಸಾಬ್, ಮಹಬೂಬ್, ಅಬ್ದುಲ್, ರಸೂಲಿ, ಖಲಾಂದರ್ ಸಾಬ್, ದಾದಾಪೀರ್, ರತ್ನಮ್ಮ, ರೇಣುಕಾ, ಸೀತಮ್ಮ, ಗೌರಮ್ಮ ಹಾಜರಿದ್ದರು.