ಚತ್ತೀಸ್ಗಡದಲ್ಲಿ ನಕ್ಸಲರ ದಾಳಿ: ಕನಿಷ್ಟ ಒಂಬತ್ತು ಸಿಆರ್ಪಿಎಫ್ ಯೋಧರು ಬಲಿ
ಹೊಸದಿಲ್ಲಿ, ಮಾ.13: ಕೂಂಬಿಂಗ್ ಕಾರ್ಯಾಚರಣೆಯಲ್ಲಿ ನಿರತರಾಗಿದ್ದ ಸಿಆರ್ಪಿಎಫ್ನ ವಾಹನವನ್ನು ನಕ್ಸಲರು ಸ್ಫೋಟಿಸಿದ ಪರಿಣಾಮ ಕನಿಷ್ಟ ಒಂಬತ್ತು ಸಿಆರ್ಪಿಎಫ್ ಯೋಧರು ಹುತಾತ್ಮರಾದರೆ, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಚತ್ತೀಸ್ಗಡದ ಸುಕ್ಮ ಜಿಲ್ಲೆಯಲ್ಲಿ ನಡೆದಿದೆ. ಅಧಿಕಾರಿಗಳ ಪ್ರಕಾರ, ಮಂಗಳವಾರ ಬೆಳಿಗ್ಗೆ ಎಂಟು ಗಂಟೆಯ ಹೊತ್ತಿಗೆ ನಕ್ಸಲರ ಗುಂಪು ಸಿಆರ್ಪಿಎಫ್ನ 208 ಕೋಬ್ರಾ ಪಡೆಯ ಮೇಲೆ ದಾಳಿ ನಡೆಸಿತ್ತು. ಆದರೆ ಕೋಬ್ರಾ ಪಡೆಯು ಪ್ರತಿದಾಳಿ ನಡೆಸಿದಾಗ ನಕ್ಸಲರು ಸ್ಥಳದಿಂದ ಪರಾರಿಯಾಗಿದ್ದರು. ಆದರೆ ಮಧ್ಯಾಹ್ನದ ವೇಳೆ ಮತ್ತೆ ಸುಕ್ಮ ಜಿಲ್ಲೆಯ ಕಿಸ್ತರಾಮ್ ಮತ್ತು ಪಲೋಡಿ ಮಧ್ಯೆ ಕಾಣಿಸಿಕೊಂಡ ನಕ್ಸಲ್ ಪಡೆ ಸಿಆರ್ಪಿಎಫ್ನ 212 ಬೆಟಾಲಿಯನ್ನ ವಾಹನವನ್ನು ಶಕ್ತಿಶಾಲಿ ಸ್ಫೋಟಕ ಬಳಸಿ ಸ್ಫೋಟಿಸಿದೆ. ಈ ಸ್ಫೋಟದಲ್ಲಿ ವಾಹನದೊಳಗಿದ್ದ ಒಂಬತ್ತು ಯೋಧರು ಸಾವಿಗೀಡಾದರೆ, ಉಳಿದವರನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಏರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರು ತಿಂಗಳ ಹಿಂದೆ ಮಾವೋವಾದಿಗಳು ನಡೆಸಿದ ದಾಳಿಯಲ್ಲಿ ಸಿಆರ್ಪಿಎಫ್ ನ 25 ಜವಾನರು ಬಲಿಯಾಗಿದ್ದರು. ಕಳೆದ ಸೆಪ್ಟಂಬರ್ನಲ್ಲಿ ಸುಕ್ಮದಲ್ಲಿ ರಸ್ತೆ ನಿರ್ಮಾಣ ಕಾರ್ಯದಲ್ಲಿ ನೆರವಾಗಲು ನಿಯೋಜಿಸಲಾಗಿದ್ದ 99 ಯೋಧರ ಮೇಲೆ ಬಂಡುಕೋರರು ದಾಳಿ ನಡೆಸಿದ್ದರು. ಕಳೆದ ವರ್ಷ ಮಾರ್ಚ್ನಲ್ಲಿ ಸುಕ್ಮದಲ್ಲಿ ರಸ್ತೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 12 ಸಿಆರ್ಪಿಎಫ್ ಯೋಧರನ್ನು ನಕ್ಸಲರು ಹತ್ಯೆ ಮಾಡಿದ್ದರು. ಮಾವೋವಾದಿಗಳನ್ನು ನಿಯಂತ್ರಿಸಲು ಅರೆಸೇನಾ ಪಡೆ ಮತ್ತು ಪೊಲೀಸರು ಜೊತೆಯಾಗಿ 4,000 ಚ.ಕಿ.ಮೀ ವ್ಯಾಪ್ತಿಯ ಅಬುಜ್ಮದ್ ದಟ್ಟ ಅರಣ್ಯ ಪ್ರದೇಶದಲ್ಲಿ ಮೂರು ನೆಲೆಗಳನ್ನು ಸ್ಥಾಪಿಸಿದ್ದಾರೆ. ಪ್ರತಿಯೊಂದು ನೆಲೆಯಲ್ಲಿ ಕನಿಷ್ಟ ನೂರು ಜವಾನರಿದ್ದು ಕಾಡಿನ ಮೇಲೆ ನಿರಂತರ ಕಣ್ಗಾವಲು ಇಟ್ಟಿರುತ್ತಾರೆ ಎಂದು ಸಿಆರ್ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.