ಸಿದ್ದರಾಮಯ್ಯ ರಾವಣ, ಪರಮೇಶ್ವರ್ ವಿಭೀಷಣ: ವಿ.ಶ್ರೀನಿವಾಸ ಪ್ರಸಾದ್
ಮೈಸೂರು,ಮಾ.13: ಮುಖ್ಯಮಂತ್ರಿ ಸಿದ್ದರಾಮಯ್ಯ ರಾವಣ, ಪರಮೇಶ್ವರ್ ರಾವಣನ ತಮ್ಮ ವಿಭೀಷಣ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ.ಶ್ರೀನಿವಾಸ ಪ್ರಸಾದ್ ನಾನು ಮತ್ತು ಪರಮೇಶ್ವರ್ ಅಣ್ಣ ತಮ್ಮ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾವಣ ಮತ್ತು ವಿಭೀಷಣ ಅಣ್ಣ ತಮ್ಮಂದಿರು. ಸಿಎಂ ಹೋಲಿಕೆ ಮಾಡಿರುವುದು ರಾಮ ಲಕ್ಷ್ಮಣ ಸಹೋದರತ್ವ ಬಗ್ಗೆ ಅಲ್ಲ, ರಾವಣ ಮತ್ತು ವಿಭೀಷಣನ ಸಹೋದರತ್ವದ ಬಗ್ಗೆ. ಪರಮೇಶ್ವರ್ ಸೋಲಿಸಿದ್ದು ಸಿದ್ದರಾಮಯ್ಯ. ಇದು ಅವರ ರಾವಣನ ಬುದ್ಧಿ. ಅದು ಗೊತ್ತಿದ್ದೂ ಈಗ ಪರಮೇಶ್ವರ್ ಸುಮ್ಮನಿರುವುದು ವಿಭೀಷಣನ ಬುದ್ಧಿ ಎಂದು ಟೀಕಿಸಿದ್ದಾರೆ.
ಸಿದ್ದರಾಮಯ್ಯ ಹೊಗಳು ಭಟ್ಟ. ರಾಹುಲ್ ಗಾಂಧಿಯ ಶೌಟಿಂಗ್ ಕಮಾಂಡೆಂಟ್. ಠೇವಣಿ ಕಳೆದುಕೊಂಡ ರಾಹುಲ್ ಗಾಂಧಿಯನ್ನು ಮುಂದಿನ ಪ್ರಧಾನಿ ಎಂದು ಸಿದ್ದರಾಮಯ್ಯ ಹೊಗಳುತ್ತಾರೆ. ಸಿದ್ದರಾಮಯ್ಯನವರ ನಾನು ಎಂಬ ಅಹಂಕಾರವೇ ಕಾಂಗ್ರೆಸ್ ಗೆ ಮುಳುವಾಗುವುದು ಖಚಿತ. ಇದು ಆಡಳಿತ ವಿರೋಧಿ ಅಲೆಯನ್ನು ದೊಡ್ಡದಾಗಿ ಸೃಷ್ಟಿಸಿದೆ. ನಾನು ಜಿಲ್ಲಾ ಮಂತ್ರಿಯಾಗಿ ಮಾಡಿದ ಕೆಲಸವನ್ನು ತಾನೇ ಮಾಡಿದ್ದು ಎಂದು ಸಿ.ಎಂ. ಹೇಳುತ್ತಾರೆ. ಇವರ ಆಡಳಿತವನ್ನು ರಾಜರಿಗೆ ಹೋಲಿಕೆ ಮಾಡಿಕೊಂಡಿರುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು