ಮಂಡ್ಯ: ವಿದ್ಯುತ್ ತಂತಿ ಬಿದ್ದು ಯುವಕ ಮೃತ್ಯು
ಮಂಡ್ಯ, ಮಾ.13: ಜಮೀನಿನ ಬಳಿಗೆ ತೆರಳಿದ್ದ ಯುವಕನ ಮೇಲೆ ಕಂಬದಿಂದ ತುಂಡಾದ ವಿದ್ಯುತ್ ತಂತಿ ಬಿದ್ದು ಮೃತಪಟ್ಟಿರುವ ಘಟನೆ ತಾಲೂಕಿನ ಮೊತ್ತಹಳ್ಳಿಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಕೊತ್ತತ್ತಿ ಗ್ರಾಮದ ನಂಜುಂಡೇಗೌಡರ ಪುತ್ರ ಕೆ.ಎನ್.ರುದ್ರೇಶ್(28) ಮೃತಪಟ್ಟ ಯುವಕನಾಗಿದ್ದು, ಈತ ಜಮೀನಿಗೆ ನೀರುಣಿಸಲು ತೆರಳುತ್ತಿದ್ದಾಗ ಏಕಾಏಕಿ ಕಂಬದಿಂದ ಕಡಿತಗೊಂಡ ವಿದ್ಯುತ್ ತಂತಿ ಬಿದ್ದು ಈ ಘಟನೆ ಸಂಭವಿಸಿದೆ.
ಚೀರಾಡುತ್ತಿದ್ದ ರುದ್ರೇಶನನ್ನು ಅಕ್ಕಪಕ್ಕದ ಜಮೀನಿನ ಬಳಿಯಿದ್ದ ರೈತರು ಕೂಡಲೇ ಆಸ್ಪತ್ರೆಗೆ ಸಾಗಿಸುವ ಯತ್ನ ನಡೆಸಿದರು. ಆದರೆ, ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆ ರುದ್ರೇಶ್ ಮೃತಪಟ್ಟನು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಕೊತ್ತತ್ತಿ ಸೆಸ್ಕ್ ಅಭಿಯಂತರ ಚೌಹಾಣ್, ಮೇಲಧಿಕಾರಿಗಳು ಮತ್ತು ಮಂಡ್ಯ ಗ್ರಾಮಾಂತರ ಠಾಣೆ ಸಬ್ಇನ್ಸ್ ಪೆಕ್ಟರ್ ಅಜರುದ್ದೀನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಿಹಾರಕ್ಕೆ ಒತ್ತಾಯ: ಸೆಸ್ಕ್ ಇಲಾಖೆ ನಿರ್ಲಕ್ಷ್ಯವೇ ರುದ್ರೇಶ್ ಸಾವಿಗೆ ಕಾರಣವಾಗಿದ್ದು, ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.