ಮೈಸೂರು: 'ಪ್ರಜಾಪ್ರಭುತ್ವ ಉಳಿವಿಗಾಗಿ ನಾವು-ನೀವು' ಸಮಾಲೋಚನಾ ಸಭೆ
ಮೈಸೂರು,ಮಾ.13: ಈ ದೇಶದ ಸಂವಿಧಾನ ಕಳ್ಳ, ಕಾಕರ ಕೈಯಲ್ಲಿ ಸಿಲುಕಿದ್ದು, ಅದನ್ನು ಕಿತ್ತುಹಾಕಿ ಪ್ರಜಾಪ್ರಭುತ್ವವನ್ನು ಉಳಿಸುವ ಜವಾಬ್ದಾರಿ ಬಹುಜನ ಬಂಧುಗಳ ಕೈಯಲ್ಲಿದೆ ಎಂದು ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಹೇಳಿದರು.
ನಗರದ ಶಿವಾಜಿ ರಸ್ತೆಯಲ್ಲಿರುವ ಉತ್ಸವ್ ಫಂಕ್ಷನ್ ಹಾಲ್ನಲ್ಲಿ ಮಂಗಳವಾರ ಎಸ್.ಡಿ.ಪಿ.ಐ ಪಕ್ಷದ ವತಿಯಿಂದ 'ಪ್ರಜಾಪ್ರಭುತ್ವ ಉಳಿವಿಗಾಗಿ ನಾವು-ನೀವು' ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ವರಿಗೂ ಸಮಬಾಳು ಸಮಪಾಲು ಎಂಬ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ತೆಗೆದು ಹಾಕಿ ಮನು ಸಂವಿಧಾನವನ್ನು ಹೇರಲು ಹುನ್ನಾರ ನಡೆಯುತ್ತಿದೆ. ಸಮಾನತೆ, ಸೋದರತೆ, ಬ್ರಾತೃತ್ವದ ಪ್ರಜಾಪ್ರಭುತ್ವವನ್ನು ನಾಶಮಾಡಲು ಸ್ವಯಂ ಸೇವಕ ಸಂಘ 1925ರಲ್ಲಿಯೇ ಪ್ರತಿಜ್ಞೆ ಮಾಡಿದ್ದಾರೆ. ಅದಾಗಲೇ 25 ಭೂಮಿಕೆಯನ್ನು ಸಿದ್ದಪಡಿಸಲಾಗಿದೆ. ಅದರಲ್ಲಿ ಪ್ರಮುಖವಾಗಿ ಮೂರು ಅಂಶಗಳನ್ನು ತಮ್ಮ ಮೇಲೆ ಯುದ್ಧರಿತಿ ಬಳಸಲು ತೀರ್ಮಾನಿಸಿದ್ದಾರೆ. ಒಂದು ಹಿಂದೂ ರಾಷ್ಟ್ರ ನಿರ್ಮಾಣ, ಅಂಬೇಡ್ಕರ್ ಸಂವಧಾನದ ಬದಲು ಮನು ಸಂವಿಧಾನ ಹೇರುವುದು ಹಾಗೂ ಮೀಸಲಾತಿಯನ್ನು ತೆಗೆಯುವ ಷಡ್ಯಂತರ ನಡೆಯುತ್ತಿದೆ. ಇದನ್ನು ಮನದಲ್ಲಿಟ್ಟುಕೊಂಡು ಸೂಕ್ತ ವ್ಯಕ್ತಿಗಳನ್ನು ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಬೇಕಾಗಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಸುಳ್ಳಿನ ಸಾಮ್ರಾಜ್ಯದ ಮಹಾನ್ ಕಳ್ಳ, ಈ ದೇಶದ ಜನರಿಗೆ ಸುಳ್ಳುಗಳನ್ನು ಹೇಳಿಯೇ ನಂಬಿಸುತ್ತಿದ್ದಾನೆ. ಕಪ್ಪು ಹಣ ತಂದು ಎಲ್ಲರ ಬ್ಯಾಂಕ್ ಖಾತೆಗೆ 15 ಲಕ್ಷ ಹಣ ಹಾಕುವುದಾಗಿ ಹೇಳಿದರು. ಅದು ಸಾಧ್ಯವಾಯಿತೆ? ಒಂದು ದೇಶ ಒಂದು ತೆರಿಗೆ ಎಂದು ಹೇಳುವ ಇವರು ಒಂದೇ ದೇಶ ಒಂದೆ ಶಿಕ್ಷಣ, ಒಂದೇ ದೇಶ ಒಂದೇ ಜಾತಿ ಎಂದು ಮಾಡಲಿ ಎಂದು ಸವಾಲು ಹಾಕಿದರು.
ಭಾರತ್ ಮಾತಾಕಿ ಜೈ ಎಂದು ಹೆಳುತ್ತಾರೆ. ಆದರೆ ದಲಿತಿ ಹೆಣ್ನುಮಕ್ಕಳ ಬಟ್ಟೆ ಬಿಚ್ಚುತ್ತಾರೆ. ಈ ದೇಶದಲ್ಲಿ ದಲಿತರು ಹಿಂದುಳಿದವರು, ಮುಸಲ್ಮಾನರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿವೆ. ಉತ್ತರ ಪ್ರದೇಶದ ಮುಖ್ಯಮಂತ್ರಿ 1200 ಜನರನ್ನು ಎನ್ಕೌಂಟರ್ ಮಾಡಿಸುತ್ತಾನೆ. ಅದರಲ್ಲಿ 800 ಜನ ಮುಸಲ್ಮಾನರು. ಇಂತಹ ಸಂವಿಧಾಠನ ವಿರೋಧಿ ಬಿಕಾರಿಗಳನ್ನು ಈ ದೇಶದಿಂದ ಓಡಿಸಬೇಕಾಗಿಕದೆ ಎಂದು ಜ್ಞಾನಪ್ರಕಾಶ್ ಸ್ವಾಮೀಜಿ ಹೇಳಿದರು.
ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ದಲಿತ ಚಿಂತಕ ಡಾ.ಕೃಷ್ಣಮೂರ್ತಿ ಚಮರಂ ಮಾತನಾಡಿದರು. ವೇದಿಕೆಯಲ್ಲಿ ಎಸ್.ಡಿ.ಪಿ.ಐ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯಅಬ್ದುಲ್ ನಜೀಬ್, ಆಲೂರು ಮಲ್ಲಣ್ಣ, ಚೋರನಹಳ್ಳಿ ಶಿವಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.