ಬಿಜೆಪಿಯಲ್ಲಿ ಮಹಿಳೆಯರು ಟಿಕೆಟ್ ಕೇಳುವ ಪರಿಸ್ಥಿತಿಯೇ ಇಲ್ಲ: ವಕೀಲೆ ಶ್ರೀದೇವಿ
![ಬಿಜೆಪಿಯಲ್ಲಿ ಮಹಿಳೆಯರು ಟಿಕೆಟ್ ಕೇಳುವ ಪರಿಸ್ಥಿತಿಯೇ ಇಲ್ಲ: ವಕೀಲೆ ಶ್ರೀದೇವಿ ಬಿಜೆಪಿಯಲ್ಲಿ ಮಹಿಳೆಯರು ಟಿಕೆಟ್ ಕೇಳುವ ಪರಿಸ್ಥಿತಿಯೇ ಇಲ್ಲ: ವಕೀಲೆ ಶ್ರೀದೇವಿ](https://www.varthabharati.in/sites/default/files/images/articles/2018/03/14/shreedevi press meet.jpg)
ಚಿಕ್ಕಮಗಳೂರು, ಮಾ.14: ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮಹಿಳಾಪರ ನಿಲುವು ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿದ್ದು, ಈ ಪಕ್ಷಗಳು ಮಹಿಳೆಯರ ರಾಜಕೀಯ ಬೆಳವಣಿಗೆಯನ್ನು ಸಹಿಸುವುದಿಲ್ಲ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅರಿವಿರುವ ತಾನು ಈ ಬಾರಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸುತ್ತೇನೆ ಎಂದು ಮಾಜಿ ಕಾಂಗ್ರೆಸ್ ಶಾಸಕಿ ಬಿ.ಎಲ್.ಸುಬ್ಬಮ್ಮ ಅವರ ಮಗಳು, ಖ್ಯಾತ ವಕೀಲೆ ಹಾಗೂ 1994ರ ಚುನಾವಣೆಯ ಬಿಜೆಪಿ ಅಭ್ಯರ್ಥಿ ಟಿ.ಶ್ರೀದೇವಿ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತನ್ನ ತಾಯಿ ಬಿ.ಎಲ್.ಸುಬ್ಬಮ್ಮ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಶಾಸಕಿಯಾಗಿ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಇಂದಿಗೂ ಕ್ಷೇತ್ರದ ಜನಮಾನಸದಲ್ಲಿವೆ. ಅವರ ಒಡನಾಟದಲ್ಲೇ ಬೆಳೆದ ತನಗೆ ರಾಜಕೀಯ ಕ್ಷೇತ್ರ ಹೊಸತಲ್ಲ. ತಾಯಿಯ ಪ್ರಾಮಾಣಿಕತೆ, ಆದರ್ಶ ಗುಣಗಳನ್ನು ಹತ್ತಿರದಿಂದ ಕಂಡು ಬೆಳೆದ ನಾನು ರಾಜಕೀಯ ಕ್ಷೇತ್ರದ ಮೂಲಕ ಸಮಾಜ ಸೇವೆ ಮಾಡುವ ಕನಸು ಕಂಡಿದ್ದೆ. ಈ ಕಾರಣಕ್ಕೆ 1991ರಲ್ಲಿ ಬಿಜೆಪಿ ಪಕ್ಷದ ಸಕ್ರೀಯ ಕಾರ್ಯಕರ್ತೆಯಾಗಿದ್ದೆ. 1994ರ ಚುನಾವಣೆಯಲ್ಲಿ ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತಾನು ಕಡಿಮೆ ಅಂತರದ ಮತಗಳಿಂದ ಪರಾಭವಗೊಂಡಿದ್ದೆ. ಅಂದಿನ ನನ್ನ ಸೋಲಿಗೆ ಬಿಜೆಪಿ ಪಕ್ಷದ ಮುಖಂಡರೇ ಕಾರಣರಾಗಿದ್ದರು. ಅಂದಿನಿಂದ ರಾಜಕೀಯ ಕ್ಷೇತ್ರದಿಂದ ವಿಮುಖಳಾಗಿ ವಕೀಲ ವೃತ್ತಿಯಲ್ಲೇ ತಲ್ಲೀನನಾಳಗಿದ್ದೆ ಎಂದ ಅವರು, ಪ್ರಸಕ್ತ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಸಿದ್ಧಾಂತಕ್ಕಿಂತ ಹಣ ಮಾಡುವುದೇ ರಾಜಕೀಯವಾಗಿದೆ. ಬಡವರು, ರೈತರ ಹಾಗೂ ಮಹಿಳೆಯರ ಪರ ಎಂಬ ಈ ಪಕ್ಷಗಳ ನಿಲುವು ಕೇವಲ ಮಾತಿಗಷ್ಟೇ ಸೀಮಿತವಾಗಿದೆ. ಮೂರೂ ಪಕ್ಷಗಳು ಮಹಿಳೆಯರ ರಾಜಕೀಯ ಬೆಳವಣಿಗೆಗೆ ಪ್ರೋತ್ಸಾಹ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿವೆ ಎಂದು ಆರೋಪಿಸಿದರು.
ಕ್ಷೇತ್ರದ ಹಾಲಿ ಶಾಸಕರು ಹಾಗೂ ಹಿಂದಿನ ಶಾಸಕರು ಅಭಿವೃದ್ಧಿಯನ್ನು ನಿರ್ಲಕ್ಷ್ಯಿಸಿದ್ದಾರೆ. ಬಾಬಾ ಬುಡನ್ಗಿರಿಯಂತಹ ಸೌಹಾರ್ದ ಧಾರ್ಮಿಕ ಕ್ಷೇತ್ರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆಯೇ ಹೊರತು ವಾಸ್ತವ ಸ್ಥಿತಿ ಅಡಿಯಲ್ಲಿ ಪರಿಹಾರಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದ ಅವರು, ಬಿಜೆಪಿಯ ಸಕ್ರೀಯ ಕಾರ್ಯಕರ್ತೆಯಾಗಿದ್ದ ತನಗೆ ಪಕ್ಷದ ಮುಖಂಡರು 1994ರಲ್ಲಿ ಟಿಕೆಟ್ ನೀಡಿದ್ದರು. ತನ್ನ ಗೆಲುವು ನಿಚ್ಛಳವಾಗಿದ್ದರೂ ಪಕ್ಷದ ಟಿಕೆಟ್ ಆಕಾಂಕ್ಷಿಗಳ ಕುತಂತ್ರದಿಂದ ಕಡಿಮೆ ಅಂತರದಿಂದ ಸೋಲಬೇಕಾಯಿತು. ದೇಶ ಪ್ರೇಮಿಗಳ ಪಕ್ಷ ಎಂದು ಬಿಜೆಪಿ ಸೆರಿದ್ದ ತನಗೆ ನಂತರದ ಚುನಾವಣೆಗಳಲ್ಲಿ ಮಹಿಳೆ ಎಂಬ ಕಾರಣಕ್ಕಾದರೂ ಟಿಕೆಟ್ ನೀಡುತ್ತಾರೆಂದು ಭಾವಿಸಿದ್ದೆ. ಆದರೆ ಮಹಿಳೆಯರನ್ನು ಪ್ರೋತ್ಸಾಹಿಸುವ ಮನೋಭಾವನೆ ಜಿಲ್ಲೆಯ ಬಿಜೆಪಿ ಮುಖಂಡರಿಗಿಲ್ಲ. ಚಿಕ್ಕಮಗಳೂರು ಕ್ಷೇತ್ರದ ಮಟ್ಟಿಗೆ ಬಿಜೆಪಿ ಟಿಕೆಟ್ ಕೇಳುವ ಪರಿಸ್ಥಿತಿಯೇ ಇಲ್ಲ. ಆದ್ದರಿಂದ ಕ್ಷೇತ್ರದ ಅಭಿವೃದ್ಧಿಗೆ ರಚನಾತ್ಮಕ ಯೋಜನೆ ರೂಪಿಸಿಕೊಂಡಿರುವ ತಾನು ಈ ಬಾರಿ ಯಾವುದೇ ಪಕ್ಷದ ಬೆಂಬಲವಿಲ್ಲದೇ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲಿದ್ದೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಕೀಲರಾದ ಮಂಜುನಾಥ್, ಮಂಜುಳಾ ಮತ್ತಿತರರು ಉಪಸ್ಥಿತರಿದ್ದರು.