ಅಣ್ಣಾ ಹಝಾರೆ ಚಳವಳಿಗೆ ನ್ಯಾ. ಸಂತೋಷ್ ಹೆಗ್ಡೆ ಬೆಂಬಲ
ಹೈದರಾಬಾದ್, ಮಾ.14: ಲೋಕಪಾಲರ ನೇಮಕಕ್ಕೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಝಾರೆ ನಡೆಸಲು ಉದ್ದೇಶಿಸಿರುವ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವುದಾಗಿ ಕರ್ನಾಟಕದ ಮಾಜಿ ಲೋಕಾಯುಕ್ತ ನ್ಯಾ. ಎನ್.ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಮಾ.23ರಂದು ಅಣ್ಣಾ ಹಝಾರೆ ಹೊಸದಿಲ್ಲಿಯಲ್ಲಿ ನಡೆಸಲಿರುವ ಉಪವಾಸ ಸತ್ಯಾಗ್ರಹದಲ್ಲಿ ತಾನು ಭಾಗಿಯಾಗುತ್ತೇನೆ ಎಂದು ಹೆಗ್ಡೆ ಹೇಳಿದ್ದಾರೆ. ಹೆಗ್ಡೆ ಕೇಂದ್ರ ಸರಕಾರದ ಮಾಜಿ ಸಾಲಿಸಿಟರ್ ಜನರಲ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಇತ್ತೀಚೆಗೆ ಹಝಾರೆ ಬೆಂಗಳೂರಿಗೆ ಭೇಟಿ ನೀಡಿದ್ದಾಗ ಅವರು ನಡೆಸುತ್ತಿರುವ ಹೋರಾಟದಲ್ಲಿ ಸೇರಿಕೊಳ್ಳುವಂತೆ ಆಹ್ವಾನಿಸಿದರು. ಹಝಾರೆ ನಡೆಸುತ್ತಿರುವ ಚಳವಳಿ ರಾಜಕೀಯ ರಹಿತವಾಗಿರುವವರೆಗೆ ಅದರಲ್ಲಿ ಕೈಜೋಡಿಸಲು ನಿರ್ಧರಿಸಿದ್ದೇನೆ .ಚಳವಳಿಯಲ್ಲಿ ತನ್ನ ಸಕ್ರಿಯ ಪಾಲ್ಗೊಳ್ಳುವಿಕೆ ಹಝಾರೆ ಯಾವ ಬೇಡಿಕೆಯನ್ನು ಸರಕಾರದ ಮುಂದಿಡುತ್ತಾರೆ ಎಂಬುದನ್ನು ಅವಲಂಬಿಸಿದೆ ಎಂದು ಹೆಗ್ಡೆ ತಿಳಿಸಿದ್ದಾರೆ.
ಲೋಕಪಾಲ, ಲೋಕಾಯುಕ್ತರ ನೇಮಕ ಹಾಗೂ ಚುನಾವಣಾ ಸುಧಾರಣೆ ಕುರಿತು ಸೂಕ್ತ ಮಸೂದೆಯನ್ನು ಅಂಗೀಕರಿಸಬೇಕು ಎಂಬ ಬೇಡಿಕೆ ಈಡೇರದಿದ್ದರೆ ಮಾರ್ಚ್ 23ರಂದು ದಿಲ್ಲಿಯಲ್ಲಿ ಮುಷ್ಕರ ನಡೆಸುವುದಾಗಿ ಹಝಾರೆ ತಿಳಿಸಿದ್ದಾರೆ. ಲೋಕಪಾಲರ ನೇಮಕ ಕುರಿತಂತೆ ಎನ್ಡಿಎ ಸರಕಾರ ಸಕ್ರಿಯ ಕ್ರಮ ಕೈಗೊಳ್ಳುತ್ತಿಲ್ಲ. ಲೋಕಪಾಲರ ನೇಮಕವಾದರೆ ಅದರಿಂದ ತನಗೆ ತೊಂದರೆಯಾಗಲಿದೆ ಎಂದು ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ಭಯಪಡುತ್ತಿದೆ. ಆದ್ದರಿಂದಲೇ ಲೋಕಪಾಲರ ನೇಮಕಕ್ಕೆ ಸಾಧ್ಯವಾದಷ್ಟು ವಿಳಂಬಧೋರಣೆ ಅನುಸರಿಸುತ್ತಿದೆ. ಈಗಿನ ಪ್ರಧಾನಿ ಗುಜರಾತ್ನ ಮುಖ್ಯಮಂತ್ರಿಯಾಗಿದ್ದಾಗಲೂ ಅಲ್ಲಿ ಲೋಕಾಯುಕ್ತರನ್ನು ನೇಮಕ ಮಾಡಿಕೊಂಡಿರಲಿಲ್ಲ. ಗುಜರಾತ್ ಹೈಕೋರ್ಟ್ ಆದೇಶ ನೀಡಿದ ಬಳಿಕವಷ್ಟೇ ಲೋಕಾಯುಕ್ತರ ನೇಮಕವಾಗಿತ್ತು ಎಂದು ಹೆಗ್ಡೆ ಹೇಳಿದರು.