ಮಹಿಳಾ ಸರಪಂಚ್ ರನ್ನು ಇಕ್ಕಟ್ಟಿಗೆ ಸಿಲುಕಿಸಿದ ಮೂರನೇ ಮಗು ವಿವಾದ
ಅಹ್ಮದಾಬಾದ್, ಮಾ.15: ಗುಜರಾತ್ನ ಅಮ್ರೇಲಿ ಜಿಲ್ಲೆಯ ಮಹಿಳಾ ಸರಪಂಚರೊಬ್ಬರು ಮೂರನೇ ಮಗು ತಮ್ಮದಲ್ಲ ಎಂದು ಪ್ರಮಾಣೀಕರಿಸಲು ಡಿಎನ್ಎ ಪರೀಕ್ಷೆಗೆ ಒಳಗಾಗುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಕುಂಕವಾವ್ ವಾಡಿಯಾ ತಾಲೂಕಿನ ತೋರಿ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿರುವ ಜ್ಯೋತಿ ರಾಥೋಡ್ ಮೂವರು ಮಕ್ಕಳನ್ನು ಹೊಂದಿದ್ದಾರೆ ಎಂಬ ಕಾರಣಕ್ಕೆ ಅನರ್ಹರಾಗುವ ಭೀತಿ ಎದುರಿಸುತ್ತಿದ್ದಾರೆ.
ಗುಜರಾತ್ ಪಂಚಾಯತ್ರಾಜ್ ಕಾಯ್ದೆ ಪ್ರಕಾರ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಸರಪಂಚರನ್ನು ಅನರ್ಹಗೊಳಿಸಲು ಅವಕಾಶವಿದೆ. 2016ರ ಡಿಸೆಂಬರ್ನಲ್ಲಿ ಬಾಲಾಭಾಯ್ ರಾಥೋಡ್ ಎಂಬುವವರು ಜ್ಯೋತಿ ಆಯ್ಕೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಮೂವರು ಮಕ್ಕಳನ್ನು ಹೊಂದಿರುವ ಇವರು, ಮೂರನೇ ಹೆಣ್ಣುಮಗು ಇರುವ ಮಾಹಿತಿ ಮುಚ್ಚಿಟ್ಟಿದ್ದಾರೆ ಎಂದು ಆಪಾದಿಸಿದ್ದರು.
ಈ ದೂರಿನ ಹಿನ್ನೆಲೆಯಲ್ಲಿ ಪಂಚಾಯತ್ರಾಜ್ ಕಾಯ್ದೆಗೆ 2005ರಲ್ಲಿ ತಂದ ತಿದ್ದುಪಡಿಗೆ ಅನುಗುಣವಾಗಿ ಜ್ಯೋತಿಯವರನ್ನು ಅನರ್ಹಗೊಳಿಸಲಾಗಿತ್ತು.
ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ತಾಲೂಕು ಅಭಿವೃದ್ಧಿ ಅಧಿಕಾರಿ ಇವರನ್ನು ಅಮಾನತು ಮಾಡಿದ್ದರು. ಆದರೆ ಈ ನಿರ್ಧಾರದ ವಿರುದ್ಧ ಜ್ಯೋತಿ ಜಿಲ್ಲಾ ಅಭಿವೃದ್ಧಿ ಅಧಿಕಾರಿಯ ಮುಂದೆ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಆರು ವರ್ಷದ ಹೆಣ್ಣುಮಗು ತನ್ನದಲ್ಲ ಎಂದು ನಿರೂಪಿಸಲು ಜ್ಯೋತಿ ಡಿಎನ್ಎ ಪರೀಕ್ಷೆಗೆ ಒಳಪಡುವಂತೆ ಅಮ್ರೇಲಿ ಜಿಲ್ಲಾ ಅಭಿವೃದ್ಧಿ ಅಧಿಕಾರಿ ವೈ.ಬಿ.ನಿರ್ಗುಡೆ ಆದೇಶಿಸಿದ್ದಾರೆ.