ಜನರ ನೆಮ್ಮದಿ ಕೆಡಿಸುತ್ತಿರುವ ಸುರತ್ಕಲ್ ‘ನೆಮ್ಮದಿ ಕೇಂದ್ರ’
ಪಡಿತರ ಚೀಟಿ, ಆರ್ಟಿಇಗೆ ಅರ್ಜಿ ಸಲ್ಲಿಕೆಗೆ ಪರದಾಟ
ಸುರತ್ಕಲ್, ಮಾ.14: ಇಲ್ಲಿನ ನೆಮ್ಮದಿ ಕೇಂದ್ರ ನಿಧಾನ ಗತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜನಜಂಗುಳಿ ಹೆಚ್ಚಾಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಯಾವುದೇ ಸರಕಾರಿ ಯೋಜನೆಗಳ ಫಲಾನುಭವಿಗಳಾಗಲು ಆದಾಯ ದೃಢೀಕರಣ ಪತ್ರ ಕಡ್ಡಾಯವಾಗಿರುವುದರಿಂದ ಇದಕ್ಕಾಗಿ ಜನರು ನೆಮ್ಮದಿ ಕೇಂದ್ರದಲ್ಲಿ ಜನ ಮುಗಿಬೀಳುತ್ತಿದ್ದಾರೆ. ಆದರೆ ಮಂಗಳೂರು ಉತ್ತರ ಕ್ಷೇತ್ರಕ್ಕೆ ಒಂದೇ ನೆಮ್ಮದಿ ಕೇಂದ್ರ(ಸುರತ್ಕಲ್ನಲ್ಲಿ)ವಿರುವುದು ಸಮಸ್ಯೆಗೆ ಕಾರಣ ಎನ್ನಲಾಗಿದೆ.
ಕಳೆದ 15 ದಿನಗಳಿಂದ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳು ಚುನಾವಣೆ ನಿಮಿತ್ತ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸಕ್ಕಾಗಿ ತೆರಳಿರುವುದರಿಂದ ನೆಮ್ಮದಿ ಕೇಂದ್ರದ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ. ಅಲ್ಲದೇ ಕೇಂದ್ರದಲ್ಲಿರುವ ಒಂದೇ ಕಂಪ್ಯೂಟರ್ ಇರುವುದು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ ಎಂಬ ಆರೋಪ ಕೇಳಿಬರುತ್ತಿದೆ.
ಸದ್ಯ ಪಡಿತರ ಚೀಟಿ ಹಾಗೂ ಆರ್ಟಿಇಗಳಿಗೆ ಅರ್ಜಿ ಸಲ್ಲಿಸಲು ಇಲಾಖೆಗಳು ಆದಾಯ ದೃಢೀಕರಣ ಪತ್ರವನ್ನು ಕಡ್ಡಾಯವಾಗಿಸಿದೆ. ಆದರೆ ಪಡಿತರ ಚೀಟಿಗೆ ಮಾ.15 ಕೊನೆಯ ದಿನವಾಗಿದ್ದು, ಆರ್ಟಿಇಗಾಗಿ ಆನ್ಲೈನ್ ನೋಂದಣಿ ಪ್ರಕ್ರಿಯೆ ಮಾ.20ರ ವರೆಗೆ ಇರಲಿದೆ. ಅದಕ್ಕೂ ಮುನ್ನ ಶಾಸಕರು, ಮನಪಾ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಂಡು ಜನರಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸಬೇಕಿದೆ ಎಂದು ನಾಗರೀಕರು ಆಗ್ರಹಿಸಿದ್ದಾರೆ.
ಕಚೇರಿ ಕೆಲಸಕ್ಕೆ ಇಬ್ಬರು ಮಹಿಳಾ ಸಿಬ್ಬಂದಿ ಇದ್ದಾರೆ. ಕಂಪ್ಯೂಟರ್ ಒಂದು ಮಾತ್ರ ಇದೆ. ಆದರೆ, ಯಾವುದೇ ಕೆಲಸದಲ್ಲಿ ಜನರಿಗೆ ತೊಂದರೆಯಾಗಿಲ್ಲ. ಗ್ರಾಮ ಲೆಕ್ಕಾಧಿಕಾರಿ ಚುನಾವಣಾ ಕೆಲಸದ ನಿಮಿತ್ತ ತೆರಳಿದ್ದ ಕಾರಣ 2 ದಿನಗಳು ಜನರ ಸಂಖ್ಯೆ ಹೆಚ್ಚಾಗಿತ್ತು. ಸುರತ್ಕಲ್ ನೆಮ್ಮದಿ ಕೇಂದ್ರ ಕೆಲಸ ನಿರ್ವಹಣೆಯಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ.
-ನವೀನ್, ಆರ್.ಐ., ಸುರತ್ಕಲ್
94 ಸಿಸಿ ಹಕ್ಕು ಪತ್ರಗಳ ವಿತರಣೆ, ಚುನಾವಣಾ ಕೆಲಸದಲ್ಲಿ ಆರ್ಐ ಮತ್ತು ವಿಎ ಕೆಲದಿನಗಳ ಕಾಲ ಕಾರ್ಯನಿರತರಾಗಿದ್ದರು. ಆದರೂ ಕೆಲಸ ಕಾರ್ಯಗಳಿಗೆ ತೊಂದರೆಯಾಗಿಲ್ಲ. ಜಿಲ್ಲಾಧಿಕಾರಿಯವರ ಗಮನಕ್ಕೆ ತಂದು ನೆಮ್ಮದಿ ಕೇಂದ್ರದಲ್ಲಿನ ಕೆಲಸದ ವೇಗವನ್ನು ಹೆಚ್ಚಿಸಲಾಗುವುದು.-ಮೊಯ್ದಿನ್ ಬಾವ, ಶಾಸಕ