ಡಿಸಿ ಕಛೇರಿ ಮುಂದೆ ಯೋಧನ ಪಾರ್ಥಿವ ಶರೀರ ಇಡಲು ಒತ್ತಾಯಿಸಿ ಸೇನಾ ಲಾರಿ ತಡೆದ ಸಾರ್ವಜನಿಕರು
ಛತ್ತಿಸ್ಗಡದಲ್ಲಿ ನಕ್ಸಲರ ದಾಳಿಗೆ ಹುತಾತ್ಮರಾದ ಹೆಚ್.ಎಸ್ ಚಂದ್ರು
![ಡಿಸಿ ಕಛೇರಿ ಮುಂದೆ ಯೋಧನ ಪಾರ್ಥಿವ ಶರೀರ ಇಡಲು ಒತ್ತಾಯಿಸಿ ಸೇನಾ ಲಾರಿ ತಡೆದ ಸಾರ್ವಜನಿಕರು ಡಿಸಿ ಕಛೇರಿ ಮುಂದೆ ಯೋಧನ ಪಾರ್ಥಿವ ಶರೀರ ಇಡಲು ಒತ್ತಾಯಿಸಿ ಸೇನಾ ಲಾರಿ ತಡೆದ ಸಾರ್ವಜನಿಕರು](https://www.varthabharati.in/sites/default/files/images/articles/2018/03/15/YODHA VISIT (31).jpg)
ಹಾಸನ,ಮಾ.15: ಛತ್ತಿಸ್ಗಡದಲ್ಲಿ ನಕ್ಸಲರ ದಾಳಿಗೆ ಹುತಾತ್ಮರಾದ ಜಿಲ್ಲೆಯ ಅರಕಲಗೂಡು ತಾಲೂಕಿನ ಹೆಚ್.ಎಸ್ ಚಂದ್ರು ಅವರ ಪಾರ್ಥಿವ ಶರೀರರವನ್ನು ಜಿಲ್ಲಾಡಳಿತ ಕಛೇರಿ ಆವರಣದಲ್ಲಿ ಇಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಮೃತ ದೇಹವಿದ್ದ ಲಾರಿ ತಡೆದು ಕೆಲ ಸಮಯ ಪ್ರತಿಭಟನೆ ಕೂಡ ನಡೆಸಿದರು.
ಕಳೆದ ಎರಡು ದಿನಗಳ ಹಿಂದೆ ಛತ್ತೀಸ್ಗಡದಲ್ಲಿ ನಕ್ಸಲರ ದಾಳಿಗೆ ಹುತಾತ್ಮರಾದ ಹೆಚ್.ಎಸ್. ಚಂದ್ರು ಅವರ ಪಾರ್ಥಿವ ಶರೀರವನ್ನು ಬುಧವಾರ ರಾತ್ರಿ ಹಾಸನ ನಗರಕ್ಕೆ ತಂದು ಜಿಲ್ಲಾಸ್ಪತ್ರೆಯಲ್ಲಿ ಇಡಲಾಗಿತ್ತು. ಗುರುವಾರ ಬೆಳಿಗ್ಗೆ ಸೇನಾ ಲಾರಿ ಮೃತರ ಸ್ವಗ್ರಾಮಕ್ಕೆ ತೆರಳುವ ಸಮಯದಲ್ಲಿ ಇಲ್ಲಿನ ಗ್ರಾಮಸ್ಥರು ಮತ್ತು ಸ್ಥಳಿಯರು ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ದೇಶಕ್ಕಾಗಿ ಕರ್ತವ್ಯ ಸಲ್ಲಿಸುತ್ತಿರುವ ವೇಳೆ ನಕ್ಸಲರ ದಾಳಿಗೆ ಪ್ರಾಣಕೊಟ್ಟ ವೀರನಾದ ಹೆಚ್.ಎಸ್. ಚಂದ್ರು ಅವರ ಶರೀರವನ್ನು ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಟ್ಟು ಶ್ರದ್ಧಾಂಜಲಿ ಸಲ್ಲಿಸಬೇಕು ಎಂದು ಪಟ್ಟು ಹಿಡಿದರು. ನಂತರ ಯೋಧನ ದೇಹವನ್ನು ಡಿಸಿ ಕಛೇರಿ ಆವರಣಕ್ಕೆ ತಂದು ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಟ್ಟರು. 35 ನಿಮಿಷಕ್ಕೂ ಹೆಚ್ಚು ಸಮಯ ದರ್ಶನಕ್ಕೆ ಇಡಲಾಗಿತ್ತು. ನಂತರ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದರು.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು, ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ತಹಸೀಲ್ದಾರ್ ಶಿವಶಂಕರಪ್ಪ, ಉಪವಿಭಾಗಧಿಕಾರಿ ಹೆಚ್.ಎಲ್. ನಾಗರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಸ್ಥಳದಲ್ಲಿ ಹಾಜರಿದ್ದರು.
ಈ ವೇಳೆ ಈ ಹಿಂದೆ ಮೃತಪಟ್ಟ ಯೋಧರೊಬ್ಬರ ಕುಟುಂಬದ ಸದಸ್ಯರಾದ ಶಿವಕುಮಾರ್ ಎಂಬವರು ಆಕ್ರೋಶ ವ್ಯಕ್ತಪಡಿಸಿ, 'ಮೃತಪಟ್ಟ ಕುಟುಂಬಕ್ಕೆ ಸರಕಾರದಿಂದ ಸಿಗಬೇಕಾದ ಪರಿಹಾರ ಕೊಡುವುದಾಗಿ ಹೇಳಿ ನಂತರ ಅವರಿಗೆ ವಂಚಿಸಲಾಗುತ್ತಿದೆ' ಎಂದು ಧ್ವನಿ ಎತ್ತಿದರು. ಈ ವೇಳೆ ಸಚಿವ ಎ. ಮಂಜು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಸಮಾಧಾನ ಮಾಡಿ ನೀಡಬೇಕಾದ ಪೂರ್ಣ ಪರಿಹಾರವನ್ನು ಒದಗಿಸುವ ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಪತ್ರಿಕರ್ತರೊಂದಿಗೆ ಮಾತನಾಡಿ, ಛತ್ತಿಸ್ಗಡದಲ್ಲಿ ನಕ್ಸಲರ ದಾಳಿಗೆ ಹುತಾತ್ಮರಾದ ಜಿಲ್ಲೆಯ ಅರಕಲಗೂಡು ತಾಲೂಕಿನ ಹೆಚ್.ಎಸ್. ಚಂದ್ರು ಅವರ ಕುಟುಂಬಕ್ಕೆ ಸರಕಾರದಿಂದ ಸಿಗಬೇಕಾದ ಪರಿಹಾರವನ್ನು ಪ್ರಾಮಾಣಿಕವಾಗಿ ಕೊಡಿಸುವ ಕೆಲಸ ಮಾಡುವುದು ನನ್ನ ಜವಾಬ್ದಾರಿಯಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಇರುವುದಿಲ್ಲ. ಈ ಹಿಂದೆ ಮೃತಪಟ್ಟ ಯೋಧನ ಕುಟುಂಬಕ್ಕೆ ಅನ್ಯಾಯವಾಗಿದೆ ಎಂದು ದೂರಲಾಗಿದೆ. ಆದರೆ ಇದನ್ನು ಯಾರೂ ಕೂಡಾ ನನ್ನ ಗಮನಕ್ಕೆ ತಂದಿಲ್ಲ. ಮುಂದೆ ಅವರಿಗೆ ಸಿಗಬೇಕಾದ ಪರಿಹಾರ ನೀಡಿ ನ್ಯಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.